'ನಾಗರಹಾವು' ಚಿತ್ರದ ಈ ಪುಟ್ಟ ರಾಮಾಚಾರಿ ಯಾರು ಗೊತ್ತಾ?
Recommended Video

ಕನ್ನಡ ಚಿತ್ರರಂಗದ ಗೋಲ್ಡನ್ ಸಿನಿಮಾ 'ನಾಗರಹಾವು' ಮತ್ತೆ ಬಿಡುಗಡೆಯಾಗಿದೆ. ಹೊಸ ಸಿನಿಮಾವನ್ನು ಮೀರಿಸುವ ಮಟ್ಟಿಗೆ ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಗಾಂಧಿನಗರದಲ್ಲಿ 'ನಾಗರಹಾವು' ಚಿತ್ರ ಹೊಸ ಕ್ರೇಜ್ ಸೃಷ್ಟಿ ಮಾಡಿದೆ.
'ನಾಗರಹಾವು' ಸಿನಿಮಾದಲ್ಲಿ ಅನೇಕ ವಿಶೇಷತೆಗಳು ಇವೆ. ಅದರಲ್ಲಿಯೂ ಸಿನಿಮಾದ ಪ್ರತಿ ಪಾತ್ರಗಳು ಪ್ರೇಕ್ಷಕರ ಮನಸಿನಲ್ಲಿ ಉಳಿಯುತ್ತದೆ. ಸಣ್ಣ ಪಾತ್ರಗಳನ್ನು ಪರಿಣಾಮಕಾರಿಯಾಗಿ ಪುಟ್ಟಣ್ಣ ಕಟ್ಟಿಕೊಟ್ಟಿದ್ದರು. ಆ ರೀತಿ ಚಿತ್ರದಲ್ಲಿ ಬರುವ ಒಂದು ಸಣ್ಣ ಪಾತ್ರ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಅದು ಪುಟ್ಟ ರಾಮಾಚಾರಿಯ ಪಾತ್ರ.
ಚಿತ್ರದ ಕಥಾ ನಾಯಕ ರಾಮಾಚಾರಿಯ ಸಣ್ಣ ವಯಸ್ಸಿನ ಪಾತ್ರ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಮಾತ್ರ ಬರುತ್ತದೆ. ಆದರೆ, ಸಿನಿಮಾದ ಓಪನಿಂಗ್ ನಲ್ಲಿ ಹಾವು ಹಿಡಿದುಕೊಂಡ ಬರುವ ಈ ಬಾಲಕನ ಎಲ್ಲರಲ್ಲಿ ಆಶ್ಚರ್ಯ ಉಂಟು ಮಾಡಿಸುತ್ತಾನೆ.
ಅಂದಹಾಗೆ, 'ನಾಗರಹಾವು' ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಆ ಕಲಾವಿದ ಯಾರು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಅದರ ಒಂದು ವಿವರ ಮುಂದಿದೆ ಓದಿ...

ಉತ್ತರ ಕರ್ನಾಟಕದ ಹುಡುಗ
'ನಾಗರಹಾವು' ಚಿತ್ರದಲ್ಲಿ ರಾಮಾಚಾರಿಯ ಸಣ್ಣ ವಯಸ್ಸಿನ ಪಾತ್ರ ಮಾಡಿದ್ದು ಹೇಮಚಂದ್ರ. ಉತ್ತರ ಕರ್ನಾಟಕದ ರಂಗಭೂಮಿ ಪ್ರತಿಭೆ ಆಗಿದ್ದ ಇವರಿಗೆ ಸಣ್ಣ ವಯಸ್ಸಿನಲ್ಲಿಯೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೇಮಚಂದ್ರ ಅವರು ಶ್ರೀಶಾರದಾ ಸಂಗೀತ ನಾಟಕ ಮಂಡಳಿಯ ಮಾಲೀಕ ಬಸವರಾಜ ಹೊಸಮನಿ ಅವರ ಮಗ. ವಿಶೇಷ ಅಂದರೆ, ಇದು ಉತ್ತರ ಕರ್ನಾಟಕದ ಮೊದಲ ನಾಟಕ ಕಂಪನಿ ಆಗಿತ್ತು.

ಬಿ.ವಿ.ರಂಗಣ್ಣ ಅವರಿಂದ ಸಿಕ್ಕ ಅವಕಾಶ
ಹೀಗೆ ನಾಟಕ ಮಾಡುತ್ತಿದ್ದ ಬಸವರಾಜ ಹೊಸಮನಿ ತಮ್ಮ ಮಗನಿಗೆ ಒಂದು ಅವಕಾಶ ನೀಡಿ ಎಂದು ತಮ್ಮ ಸ್ನೇಹಿತ ಬಿ.ವಿ.ರಂಗಣ್ಣ ಅವರಿಗೆ ಕೇಳಿದರು. ಬಿ.ವಿ.ರಂಗಣ್ಣ ನಿರ್ಮಾಪಕ ವೀರಸ್ವಾಮಿ ಅವರ ಬಳಿ ಕೆಲಸ ಮಾಡುತ್ತಿದ್ದರು. ಪುಟ್ಟ ಹುಡುಗ ಹೇಮಚಂದ್ರನ ನಟನೆ ನೋಡಿದ್ದ ಬಿ.ವಿ.ರಂಗಣ್ಣ ಚಿತ್ರದಲ್ಲಿ ಅವಕಾಶ ನೀಡುವ ಮಾತು ಕೊಟ್ಟರು.

ಬಾಲ ನಟನ ಹುಡುಕಾಟದಲ್ಲಿ ಪುಟ್ಟಣ್ಣ
ಇನ್ನೊಂದು ಕಡೆ ಅದೇ ವೇಳೆಗೆ ಪುಟ್ಟಣ್ಣ ಕೂಡ ಚಿತ್ರದ ಬಾಲನಟನಿಗಾಗಿ ಹುಡುಕಾಟ ನೆಡೆಸಿದರು. ಈ ಪಾತ್ರದ ಹುಡುಗ ಹಾವನ್ನು ಕೈ ನಲ್ಲಿ ಹಿಡಿದುಕೊಂಡಿರಬೇಕಿತ್ತು, ಕಟ್ಟಡದಿಂದ ಜಿಗಿಯಬೇಕಿತ್ತು. ಅಷ್ಟು ಧೈರ್ಯದ ಹುಡುಗ ಇನ್ನೂ ಪುಟ್ಟಣ್ಣನಿಗೆ ಸಿಕ್ಕಿರಲಿಲ್ಲ. ಆ ಹುಡುಗನ ಭಾಗದ ಚಿತ್ರೀಕರಣ ಆಮೇಲೆ ಮಾಡೋಣ ಎಂದು ಉಳಿದ ಭಾಗದ ಶೂಟಿಂಗ್ ಪ್ರಾರಂಭ ಮಾಡಿದ್ದರು.

ಪುಟ್ಟಣ್ಣನ ಬಳಿ ಕಳುಹಿಸಿದ ವೀರಸ್ವಾಮಿ
ಬಿ.ವಿ.ರಂಗಣ್ಣ ಅವರ ಮಾತಿನಂತೆ ಬಾಲಕ ಹೇಮಚಂದ್ರನನ್ನು ವೀರಸ್ವಾಮಿ ಅವರು ಭೇಟಿ ಮಾಡಿದರು. ಬಳಿಕ ಪುಟ್ಟಣ್ಣರನ್ನು ಭೇಟಿ ಮಾಡುವಂತೆ ಆ ಹುಡುಗನಿಗೆ ಹೇಳಿದರು. ಆಗ ಚಿತ್ರದುರ್ಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಗೆ ಹೋದ ಹೇಮಚಂದ್ರ ಸಿನಿಮಾದ ಶೂಟಿಂಗ್ ಅನ್ನು ನೋಡುತ್ತ ನಿಂತಿದ್ದ.

ಹುಡುಗನ ಧೈರ್ಯ ಮೆಚ್ಚಿದ ಪುಟ್ಟಣ್ಣ
ಹೇಮಚಂದ್ರನನ್ನು ನೋಡಿದ ಪುಟ್ಟಣ್ಣ ಸಿನಿಮಾದಲ್ಲಿ ನಟಿಸುತ್ತೀಯಾ? ಎಂದು ಕೇಳಿದರಂತೆ. ಜೊತೆಗೆ, ಚಿತ್ರದಲ್ಲಿ ನೀನು ಹಾವನ್ನು ಹಿಡಿದುಕೊಂಡಿರಬೇಕು ಎಂದರಂತೆ. ಎಲ್ಲವನ್ನು ಮಾಡುತ್ತೇನೆ ಎಂದು ತಲೆ ಅಲುಗಾಡಿದ ಆ ಹುಡುಗನ ಧೈರ್ಯಕ್ಕೆ ಮೆಚ್ಚಿ ಪುಟ್ಟಣ್ಣ ಆ ಪಾತ್ರವನ್ನು ಆ ಹುಡುಗನಿಗೆ ನೀಡಿದರಂತೆ.

ಹಾವೇ ಸತ್ತು ಹೋಗಿತ್ತು
ಚಿತ್ರದಲ್ಲಿ ನಟಿಸುವ ಬಾಲಕ ಹಾವನ್ನು ಹಿಡಿದುಕೊಂಡು ಬರುವ ದೃಶ್ಯ ಇದೆ. ಈ ಚಿತ್ರದ ಶೂಟಿಂಗ್ ಮಾಡುವಾಗ ಅನೇಕರು ಹಾವು ಹುಷಾರು ಎಂದು ಆ ಹುಡುಗನಿಗೆ ಹೆದರಿಸಿದ್ದರಂತೆ. ಅದೇ ಕಾರಣಕ್ಕೆ ಹಾವನ್ನು ಗಟ್ಟಿಯಾಗಿ ಆ ಹುಡುಗ ಹಿಡಿದುಕೊಂಡಿದ್ದನಂತೆ. ಆ ಹುಡುಗನ ಹಿಡಿತಕ್ಕೆ ಹಾವೇ ಸತ್ತು ಹೋಗಿತಂತೆ. ಬಳಿಕ ಬೇರೆ ಹಾವು ತರಿಸಿ ಚಿತ್ರೀಕರಣ ಮುಂದುವರೆಸಲಾಯಿತಂತೆ.

ರಾಜ್ ಕುಮಾರ್ ಅವರ ಚಿತ್ರದಲ್ಲಿ ಅಭಿನಯ
'ನಾಗರಹಾವು' ಸಿನಿಮಾದ ನಂತರ ಹೇಮಚಂದ್ರ ಅವರು ಬಾಲನಟನಾಗಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ, ರಾಜ್ ಕುಮಾರ್ ಅವರ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ರಾಜ್ ಅವರ ಸಣ್ಣ ವಯಸ್ಸಿನ ಪಾತ್ರವನ್ನು ಸಹ ಇವರೇ ಮಾಡಿದ್ದಾರೆ. ಇದರ ಜೊತೆಗೆ 'ಚಾಮುಂಡೇಶ್ವರಿ ಮಹಾತ್ಮೆ', 'ಮೂರುವರೆ ವಜ್ರ', 'ನಂಜುಡಿ ನಕ್ಕಾಗ' ಸಿನಿಮಾಗಳಲ್ಲಿ ಹೇಮಚಂದ್ರ ಕಾಣಿಸಿಕೊಂಡಿದ್ದಾರೆ.

ಸದ್ಯ ಖಾನಾವಳಿಯ ಮಾಲೀಕ
ಸಿನಿಮಾ ಹಾಗೂ ರಂಗಭೂಮಿ ನಟನಾಗಿದ್ದ ಹೇಮಚಂದ್ರ ಅವರು ಸದ್ಯ ಒಂದು ಖಾನಾವಳಿಯ ಮಾಲೀಕನಾಗಿದ್ದಾರೆ. ಹಾವೇರಿ ಜೆಲ್ಲೆಯ ಹಂಸಬಾವಿ ಎಂಬ ಊರಿನಲ್ಲಿ ತಮ್ಮದೆ ಆದ ಖಾನಾವಳಿ ಇಟ್ಟುಕೊಂಡಿದ್ದಾರೆ. ಈಗಲೂ ಆಗಾಗ ಜಾತ್ರೆ, ಉತ್ಸವಗಳಲ್ಲಿ ನಾಟಕ ಮಾಡುತ್ತಾರಂತೆ.


Click it and Unblock the Notifications











