ಪುನೀತ್ ನೆನಪಲ್ಲಿ ವೇದಿಕೆ ಮೇಲೆ ಒಂದಾದ ದೊಡ್ಮನೆ ಕುಟುಂಬ
ಮೈಸೂರು ಅರಸರ ಕುಟುಂಬದ ಬಳಿಕ ಕರ್ನಾಟಕದ ಜನ ಅತಿ ಹೆಚ್ಚು ಪ್ರೀತಿಸಿದ, ಗೌರವಿಸಿದ ಕುಟುಂಬವೆಂದರೆ ಅದು ದೊಡ್ಮನೆ ಕುಟುಂಬ.
ದೊಡ್ಮನೆ ಕುಟುಂಬದ ಬಹುತೇಕ ಸದಸ್ಯರು ಇಂದು ಪುನೀತ ಪರ್ವ ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಏರಿ ಅಪ್ಪುವನ್ನು ಭಾವುಕವಾಗಿ ನೆನಪು ಮಾಡಿಕೊಂಡರು.
'ಪುನೀತ ಪರ್ವ' ಕಾರ್ಯಕ್ರಮದಲ್ಲಿ ವಿಜಯಪ್ರಕಾಶ್ ಅವರು ಅಪ್ಪು 'ಗೊಂಬೆ ಹೇಳುತೈತೆ' ಹಾಡು ಹಾಡಿದರು. ಹಾಡು ಮುಗಿವ ವೇಳೆಗೆ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ದೊಡ್ಮನೆಯ ಇನ್ನೂ ಹಲವು ಸದಸ್ಯರು ಒಟ್ಟಿಗೆ ವೇದಿಕೆ ಏರಿದರು.

ದೊಡ್ಮನೆ ಕುಟುಂಬವು ವೇದಿಕೆಗೆ ಬಂದ ಕೂಡಲೇ ವೇದಿಕೆ ಮುಂದೆ ಕೂತಿದ್ದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಸಹ ಎದ್ದು ನಿಂತು ಆ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು.
ವೇದಿಕೆ ಮೇಲೆ ಬರುತ್ತಲೇ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಭಾವುಕರಾಗಿಬಿಟ್ಟಿದ್ದರು. ಅವರ ಕಣ್ಣಲ್ಲಿ ನೀರು ಅದಾಗಲೇ ಜಿನುಗುತ್ತಿತ್ತು. ವಿಜಯ್ಪ್ರಕಾಶ್ರ ಹಾಡಿದ ಭಾವುಕ ಸಾಲುಗಳು, ಒಟ್ಟು ಕುಟುಂಬ ಹೀಗೆ ಒಟ್ಟಿಗೆ ಸೇರಿದ್ದು ಇನ್ನಷ್ಟು ಭಾವುಕಗೊಳಿಸಿತು. ದುಃಖ ತಡೆದುಕೊಳ್ಳಲಾಗದೆ. ಹಾಡು ಮುಗಿಯುತ್ತಿದ್ದಂತೆ ಕಣ್ಣೀರು ಒರೆಸಿಕೊಳ್ಳುತ್ತಾ ವೇದಿಕೆಯಿಂದ ಇಳಿದು ಬಿಟ್ಟರು. ಇದು ನೆರೆದವರನ್ನು ಇನ್ನಷ್ಟು ಭಾವುಕಗೊಳಿಸಿತು.

ಆದರೆ ಮತ್ತೆ ಸಾವರಿಸಿಕೊಂಡ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು, ಆ ನಂತರ ವೇದಿಕೆ ಏರಿ, ಶಿವಣ್ಣ, ರಾಘಣ್ಣ ಅವರೊಟ್ಟಿಗೆ ಸೇರಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು.


Click it and Unblock the Notifications











