ಯಶ್ - ಹೊಂಬಾಳೆ ಮಧ್ಯೆ ಬಿರುಕು? ಈ ಒಂದು ಫೋಟೊ ಕೊಡ್ತು ಎಲ್ಲಕ್ಕೂ ಉತ್ತರ!
ಕನ್ನಡ ಚಿತ್ರರಂಗವನ್ನು ಈಗಿನ ತಲೆಮಾರಿನಲ್ಲಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರಗಳೂ ಸಹ ಅಬ್ಬರಿಸಬಹುದು ಹಾಗೂ ದೇಶದಾದ್ಯಂತ ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇದೆ ಎಂಬುದನ್ನು ತೋರಿಸಿಕೊಟ್ಟದ್ದೇ ಹೊಂಬಾಳೆ ಫಿಲ್ಮ್ಸ್ ಹಾಗೂ ನಟ ರಾಕಿಂಗ್ ಸ್ಟಾರ್ ಯಶ್.
ಕೆಜಿಎಫ್ ಚಿತ್ರವನ್ನು ಅಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ಯಶ್ ಹಠ ಹಿಡಿಯದಿದ್ದರೆ, ಆ ಹಠಕ್ಕೆ ಹೊಂಬಾಳೆ ಫಿಲ್ಮ್ಸ್ ಬೆಂಬಲ ಸೂಚಿಸದೇ ಇದ್ದಿದ್ದರೆ ಕನ್ನಡ ಚಿತ್ರರಂಗದಿಂದ ಕಳೆದ ಒಂದು ವರ್ಷದಲ್ಲಿ ಬಂದ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರಲಿಲ್ಲ ಎನ್ನಬಹುದು. ಹೀಗೆ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಕಳೆದ ಕೆಲ ದಿನಗಳಿಂದ ಹರಿದಾಡಲು ಆರಂಭಿಸಿತ್ತು.
ಹೌದು, ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ್ ಕಿರಗಂದೂರು ಇಬ್ಬರೂ ಸಹ ಸಂದರ್ಶನಗಳಲ್ಲಿ ನೀಡಿದ ಕೆಲ ಹೇಳಿಕೆಗಳು ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಅನುಮಾನವನ್ನು ಸಿನಿ ರಸಿಕರಲ್ಲಿ ಹುಟ್ಟುಹಾಕಿತ್ತು. ಕೆಜಿಎಫ್ ಚಿತ್ರಕ್ಕೆ ನಾನೂ ಸಹ ದುಡ್ಡು ಹಾಕಿದ್ದೆ ಎಂದು ಯಶ್ ಹೇಳಿದ್ದು ಮತ್ತು ಮುಂದಿನ ಕೆಜಿಎಫ್ ಚಿತ್ರಗಳಲ್ಲಿ ರಾಕಿ ಭಾಯ್ ಪಾತ್ರವನ್ನು ಬೇರೆ ನಟರು ಮಾಡಬಹುದು ಎಂದು ವಿಜಯ್ ಕಿರಗಂದೂರು ಹೇಳಿದ್ದು ಈ ಅನುಮಾನಕ್ಕೆ ಕಾರಣವಾಗಿತ್ತು. ಆದರೆ ಇದೀಗ ವೈರಲ್ ಆಗಿರುವ ಫೋಟೊವೊಂದು ಅಂತಹ ಅನುಮಾನಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದು, ಇಬ್ಬರ ನಡುವೆ ಯಾವ ಬಿರುಕೂ ಸಹ ಇಲ್ಲ, ಎಲ್ಲವೂ ಚೆನ್ನಾಗಿಯೇ ಇದೆ ಎಂಬುದನ್ನು ತಿಳಿಸಿದೆ.

ಮೋದಿ ಭೇಟಿ ವೇಳೆ ತೆಗೆದ ಫೋಟೊ
ಮೇಲಿನ ಕಾರಣಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಯಶ್ ಹಾಗೂ ವಿಜಯ್ ಕಿರಗಂದೂರು ನಡುವೆ ಎಲ್ಲವೂ ಸರಿ ಇಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಈ ಇಬ್ಬರೂ ಸಹ ಒಟ್ಟಿಗೆ ಹೋಗಿದ್ದು, ಫೋಟೊಗೂ ಸಹ ಅಕ್ಕಪಕ್ಕ ನಿಂತು ಪೋಸ್ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ನಡುವೆ ಯಾವುದೇ ಬಿರುಕು ಮೂಡಿಲ್ಲ, ಚೆನ್ನಾಗಿಯೇ ಇದ್ದೇವೆ ಎಂಬುದನ್ನು ಈ ಯಶಸ್ವಿ ಜೋಡಿ ತಿಳಿಸಿದೆ. ನರೇಂದ್ರ ಮೋದಿ ಏರೋ ಇಂಡಿಯಾ 2023 ಉದ್ಘಾಟಿಸಲು ಬೆಂಗಳೂರಿಗೆ ಬಂದಿದ್ದು, ಕನ್ನಡ ಚಿತ್ರರಂಗದ ನಟರಾದ ಯಶ್, ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕರಾದ ವಿಜಯ್ ಕಿರಗಂದೂರು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಜತೆಗೆ ಭೋಜನ ಸವಿದಿದ್ದಾರೆ.

ಹರಿದಾಡಿತ್ತು ಬಿರುಕಿನ ಸುದ್ದಿಗಳು
ಮೊದಲೇ ಹೇಳಿದಂತೆ ಯಶ್ ಹಾಗೂ ವಿಜಯ್ ಕಿರಗಂದೂರು ನೀಡಿದ ಹೇಳಿಕೆಗಳು ಇಬ್ಬರ ನಡುವೆ ಬಿರುಕು ಇದೆ ಎಂಬ ಅನುಮಾನವನ್ನು ಹುಟ್ಟುಹಾಕಿದ್ದವು. ಇಬ್ಬರ ಈ ಹೇಳಿಕೆಗಳನ್ನು ನೀಡಿ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಅನುಮಾನವನ್ನು ಹೊರಹಾಕಿದ್ದು ನೆಟ್ಟಿಗರು. ಈ ಕುರಿತು ತಮ್ಮ ಅನುಮಾನಗಳನ್ನು ಟ್ವೀಟ್ ಮಾಡಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಬರೆದುಕೊಂಡಿದ್ದರು.

ಕೆಜಿಎಫ್ ಹೊಗಳಿದ ಮೋದಿ
ಇನ್ನು ಯಶ್, ವಿಜಯ್ ಕಿರಗಂದೂರು ಸೇರಿದಂತೆ ಕನ್ನಡದ ಕೆಲ ಸ್ಟಾರ್ ನಟರು ಹಾಗೂ ನಿರ್ಮಾಪಕರನ್ನು ಭೇಟಿಯಾದ ನರೇಂದ್ರ ಮೋದಿ ಕನ್ನಡ ಚಿತ್ರರಂಗ ಇತ್ತೀಚೆಗೆ ನಿರ್ಮಿಸುತ್ತಿರುವ ಸಿನಿಮಾಗಳ ಬಗ್ಗೆ ಮಾತನಾಡಿ ಹಾಡಿ ಹೊಗಳಿದ್ದಾರೆ. ಕಾಂತಾರ ಹಾಗೂ ಕೆಜಿಎಫ್ ಚಿತ್ರಗಳನ್ನು ಹೊಗಳಿದ ನರೇಂದ್ರ ಮೋದಿ ಪಿಆರ್ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಮತ್ತಷ್ಟು ಒಳ್ಳೆಯ ಚಿತ್ರಗಳು ಮೂಡಿ ಬರಲಿ ಎಂದು ಆಶಿಸಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದು, ಫೋಟೊಗಳು ವೈರಲ್ ಆಗಿವೆ.


Click it and Unblock the Notifications











