'ಚಿತ್ರಮಂದಿರಗಳನ್ನು ನಡೆಸಲಾಗುತ್ತಿಲ್ಲ': ಮೈಸೂರಿನ ಚಿತ್ರಮಂದಿರಗಳು ಬಂದ್
ಮಹಾಮಾರಿ ಕೊರೊನಾ ಹೊಡೆತಕ್ಕೆ ಇಡೀ ಜನಸಮುದಾಯ ಸೇರಿದಂತೆ ಎಲ್ಲಾ ರೀತಿಯ ಉದ್ಯಮಗಳು ತತ್ತರಿಸಿದ್ದು, ಈ ಸಾಲಿಗೆ ಇದೀಗ ಚಿತ್ರಮಂದಿರಗಳು ಸೇರುತ್ತಿವೆ. ಈಗಾಗಲೇ ಕೊರೊನಾ ಒಂದು ಹಾಗೂ ಎರಡನೇ ಅಲೆಯಿಂದ ಚಿತ್ರಮಂದಿರಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಚಿತ್ರಮಂದಿರಗಳಿಗೆ ಮೂರನೇ ಅಲೆಯ ಬಿಸಿ ತಟ್ಟಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ನಿಯಮ ಬದಲಿಸುವವರೆಗೂ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮೈಸೂರಿನ ಚಿತ್ರಮಂದಿರಗಳ ಮಾಲೀಕರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮೈಸೂರು ಚಿತ್ರಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ರಾಜಾರಾಂ, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಿಯಮಗಳಿಂದ ಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದ ಯಾವುದೇ ಚಿತ್ರಮಂದಿರಗಳಲ್ಲ ನಾಳೆ(ಜ.21)ರಿಂದ ಯಾವುದೇ ಚಿತ್ರಗಳನ್ನು ಪ್ರದರ್ಶನ ಮಾಡದಿರಲು ತೀರ್ಮಾನಿಸಲಾಗಿದೆ. ಒಂದೊಮ್ಮೆ ವೀಕೆಂಡ್ ಕರ್ಫ್ಯೂ ಮುಂದುವರೆದರೆ ಕನ್ನಡ ಸೇರಿ ಯಾವುದೇ ಭಾಷೆಯ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ. ಆ ಮೂಲಕ ಚಿತ್ರಮಂದಿರಗಳನ್ನು ತಾತ್ಕಾಲಿಕ ಸ್ಥಗಿತ ಮಾಡುವುದಾಗಿ ತೀರ್ಮಾನಿಸಲಾಗಿದೆ. ಇದರನ್ವಯ ಮೈಸೂರಿನ ಗಾಯತ್ರಿ, ರಾಜಕಮಲ್, ಸಂಗಮ್ , ಸ್ಟರ್ಲಿಂಗ್ ಸೇರಿದಂತೆ ಎಲ್ಲ ಚಿತ್ರಮಂದಿರವೂ ಬಂದ್ ಆಗಲಿದೆ ಎಂದು ಚಿತ್ರಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ರಾಜಾರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ, ಸರ್ಕಾರ ನಿಯಮ ಬದಲಿಸುವವರೆಗೂ ಚಿತ್ರಮಂದಿರ ತಾತ್ಕಾಲಿಕ ಸ್ಥಗಿತವಾಗಿರುತ್ತದೆ. ಕೇಂದ್ರ ಸರ್ಕಾರ ಕೊರೊನಾ ಒಂದು ಸಾಮಾನ್ಯ ಫ್ಲೋ ಎಂದು ಹೇಳಿರುವಾಗ ಇಂತಹ ರೂಲ್ಸ್ ಏಕೆ? ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮಾಡಿದ್ರೆ ನಷ್ಟದಲ್ಲಿ ಚಿತ್ರಮಂದಿರ ನಡೆಸಲಾಗುವುದಿಲ್ಲ. ನಮಗೆ ಮಾತ್ರ 50:50 ಮಾದರಿ ಅನುಸರಿಸುವ ಸರ್ಕಾರ, ನಮ್ಮ ಮೇಲೆ ವಿಧಿಸುವ ಎಲ್ಲಾ ತೆರಿಗೆಗಳನ್ನು 50:50 ಮಾದರಿಯಲ್ಲೇ ಸ್ವೀಕರಿಸಲಿ.
ಸರ್ಕಾರ ಬೇಕಿದ್ದರೆ ಎಲ್ಲ ಚಿತ್ರಮಂದಿರದ ಮುಂದೆಯೂ ಲಸಿಕಾ ಕೇಂದ್ರ ಸ್ಥಾಪಿಸಿ ಲಸಿಕೆ ನೀಡಿ ಬಳಿಕ ಕಳುಹಿಸಲಿ. ಇದರ ಹೊರತಾಗಿ ಈ ರೀತಿಯ ಕ್ರಮಗಳನ್ನು ನಮ್ಮ ಮೇಲೆ ತಂದರೆ ಚಿತ್ರಮಂದಿರ ನಡೆಸೋದು ಕಷ್ಟವಾಗುತ್ತದೆ. ಸರ್ಕಾರದ ಎಲ್ಲ ನಿಯಮಗಳನ್ನ ಪಾಲಿಸಿದರೂ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಮಾಡುತ್ತಾರೆ. ನಮ್ಮ ಆದಾಯ ವೀಕೆಂಡ್ ನಲ್ಲೇ ಹೆಚ್ಚಿರುವುದರಿಂದ ಸರ್ಕಾರದ ಈ ನಿರ್ಧಾರಗಳನ್ನ ಪಾಲಿಸಲು ನಮ್ಮಿಂದ ಕಷ್ಟಸಾಧ್ಯ ಎಂದ ರಾಜಾರಾಂ ಹೇಳಿದ್ದಾರೆ.

ಕಂಗೆಟ್ಟಿರುವ ಚಿತ್ರಮಂದಿರ ಮಾಲೀಕರು
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ನಿಯಮಗಳಿಂದ ಮೈಸೂರಿನ ಚಿತ್ರಮಂದಿರಕ್ಕೂ ಬಿಸಿ ತಟ್ಟಿದ್ದು, ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ನಿಯಮದಿಂದಾಗಿ ಮೈಸೂರಿನ ಚಿತ್ರಮಂದಿರಗಳು ಆಟ ನಿಲ್ಲಿಸುವಂತಾಗಿದೆ. ಕೊರೊನಾ ಹೊಡೆತಕ್ಕೆ ಸಿಲುಕಿ ಮೈಸೂರಿನ ಹಲವು ಚಿತ್ರಮಂದಿರಗಳು ಈಗಾಗಲೇ ಬಂದ್ ಆಗಿವೆ. ಇದರ ಬೆನ್ನಲ್ಲೇ ಇದೀಗ ಮೈಸೂರಿನ ಚಿತ್ರಮಂದಿರಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದ್ದು ನಗರದ ಹಳೆಯ ಥಿಯೇಟರ್ ಆಗಿರುವ ಗಾಯತ್ರಿ ಚಿತ್ರಮಂದಿರ, ಇದೀಗ ತಾತ್ಕಾಲಿಕವಾಗಿ ಬಂದ್ ಆಗುತ್ತಿದೆ. ಇದರ ಪರಿಣಾಮ ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರ ಬಿಡುಗಡೆ ಇಲ್ಲದಂತಾಗಿದೆ. ಸರ್ಕಾರದ ನಿಯಮಗಳಿಗೆ ಚಿತ್ರಮಂದಿರದ ಮಾಲೀಕರು ಕಂಗೆಟ್ಟಿದ್ದಾರೆ.

ಮೈಸೂರಿನ ಚಿತ್ರಮಂದಿರಗಳು ಬಂದ್
ಸರ್ಕಾರದ ಶೇ.50 ಆಸನ ನಿಯಮ ಮತ್ತು ಕರ್ಫ್ಯೂ ಅದೇಶದಿಂದ ಚಿತ್ರಮಂದಿರಗಳ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದು, ಕಳೆದ ವರ್ಷ ಕೊರೊನ ಸಂಕಷ್ಟಕ್ಕೆ ಸಿಲುಕಿ ನಗರದ ಶಾಂತಲಾ, ಲಕ್ಷ್ಮಿ, ಸರಸ್ವತಿ ಹಾಗೂ ನಾಗರಾಜ ಚಿತ್ರಮಂದಿರಗಳು ಬಂದ್ ಆಗಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿಯೂ ಮೈಸೂರಿನ ಚಿತ್ರಮಂದಿರಗಳು ಬಂದ್ ಆಗಿದ್ದವು. 50-50 ಅನುಪಾತದಲ್ಲಿ ಚಿತ್ರಮಂದಿರಗಳನ್ನು ನಡೆಸಲು ಸಾಧ್ಯವಿಲ್ಲವೆಂದು ಈ ಹಿಂದೆಯೂ ಮೈಸೂರಿನ ಚಿತ್ರಮಂದಿರಗಳ ಮಾಲೀಕರು ಅವಲತ್ತುಕೊಂಡಿದ್ದರು.

ಸರ್ಕಾರಕ್ಕೆ ಮನವಿ ಮಾಡಿರುವ ವಾಣಿಜ್ಯ ಮಂಡಳಿ
ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳು ಈಗಾಗಲೇ ಬಂದ್ ಆಗಿವೆ. ಚಲನಚಿತ್ರ ವಾಣಿಜ್ಯ ಮಂಡಳಿಯು, 'ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಅನ್ನು ತೆಗೆಯಬೇಕು ಕನಿಷ್ಟ ವೀಕೆಂಡ್ನಲ್ಲಿ 50-50 ಅನುಪಾತದಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ. ರಾಜ್ಯ ಸರ್ಕಾರವು ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಮುಂದುವರಿಕೆ ಬಗ್ಗೆ ಇದೇ ಶುಕ್ರವಾರ (ಜನವರಿ 21)ರಂದು ತೀರ್ಮಾನ ತೆಗೆದುಕೊಳ್ಳಲಿದೆ.

ಹಲವು ಸಿನಿಮಾಗಳು ಬಿಡುಗಡೆಗೆ ಕಾದಿವೆ
ರಾಜ್ಯದಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಇರುವ ಕಾರಣ ಹಲವು ಸಿನಿಮಾಗಳು ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿವೆ. ಸುದೀಪ್ ನಟನೆಯ 'ವಿಕ್ರಾಂತ್ ರೋಣ', ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ', ಜಗ್ಗೇಶ್ ನಟನೆಯ 'ತೋತಾಪುರಿ', ಸತೀಶ್ ನೀನಾಸಂ ನಟನೆಯ 'ಪೆಟ್ರೊಮ್ಯಾಕ್ಸ್', ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ', 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಇನ್ನೂ ಹಲವು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಕೊರೊನಾ ಪರಿಸ್ಥಿತಿ ಸುಧಾರಣೆಯಾದ ಬಳಿಕ ಒಂದೊಂದಾಗಿ ಸಿನಿಮಾಗಳು ಬಿಡುಗಡೆ ಕಾಣಲಿವೆ.


Click it and Unblock the Notifications











