ರೆಬೆಲ್ಸ್ಟಾರ್ 3ನೇ ಪುಣ್ಯತಿಥಿ: ದರ್ಶನ್, ಅಭಿಷೇಕ್, ಸುಮಲತಾರಿಂದ ಪೂಜೆ!
ಹಿರಿಯ ನಟ ಅಂಬರೀಶ್ ಅವರು 2018ರ ನವೆಂಬರ್ 24ರಂದು ನಿಧನರಾದರು. ಅವರು ಎಲ್ಲರನ್ನೂ ಅಗಲಿ ಮೂರು ವರ್ಷ ಕಳೆದಿದೆ. ಇಂದು (ನವೆಂಬರ್ 24) ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಅಂಬಿ ಇಲ್ಲದೆ ಮೂರು ವರ್ಷ ಕಳೆದು ಹೋಗಿದೆ.
ವರ್ಣರಂಜಿತವಾಗಿ ಬದುಕಿದ್ದ ಅಂಬರೀಶ್ ತಮ್ಮ 66 ನೇ ವಯಸ್ಸಿನಲ್ಲಿ ನಿಧನರಾದರು. ಅವರನ್ನು ಕಳೆದುಕೊಂಡಿದ್ದ ದಿನ ಇಡೀ ಕನ್ನಡ ಚಿತ್ರರಂಗ ದುಃಖದಲ್ಲಿ ಮುಳುಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು.
ಅಂಬಿ ಅವರನ್ನು ಕಳೆದುಕೊಂಡ ನೋವು ಇನ್ನೂ ಕಡಿಮೆ ಆಗಿಲ್ಲ. ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು, ಆಪ್ತರು ಅಂಬರೀಶ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂಬರೀಶ್ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಅಂಬಿ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ!
ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಇಂದು(ನವೆಂಬರ್ 24) ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೊಗೆ ಬೆಳಗ್ಗೆ ಕುಟುಂಬಸ್ಥರೊಂದಿಗೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಆಗಮಿಸಿ ಪೂಜಾ ಕಾರ್ಯ ಆರಂಭಿಸಿದರು.
ನಟ ದರ್ಶನ್ ಕೂಡ ಪ್ರತೀ ಬಾರಿ ಅಂಬಿ ಪೂಜೆಯಲ್ಲಿ ಭಾಗಿ ಆಗುತ್ತಾರೆ. ಅಂತಯೇ ಇಂದು ಕೂಡ ಅಂಬಿ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಜೊತೆಗೆ ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿ ಆಗಿದ್ದಾರೆ.
ಅಂಬರೀಶ್ ಕಾಳಜಿ ಬಗ್ಗೆ ನಟ ದರ್ಶನ್ ಟ್ವೀಟ್!
ಕನ್ನಡ ಸಿನಿಮಾರಂಗದಲ್ಲಿ ನಟ ದರ್ಶನ್ ಅವರಿಗೆ ಅಂಬರೀಶ್ ಅವರನ್ನು ಕಂಡರೆ ವಿಶೇಷ ಪ್ರೀತಿ. ಇಬ್ಬರ ನಡುವೆ ವಿಶೇಷ ಅನುಬಂಧ ಇತ್ತು. ಹಾಗಾಗಿ ಇಂದು ಬೆಳ್ಳಂಬೆಳಗ್ಗೆ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ ದರ್ಶನ್. ಅಷ್ಟೇ ಅಲ್ಲ ಟ್ವಿಟರ್ನಲ್ಲಿ ಅಂಬರೀಶ್ ಅವರನ್ನು ನೆನೆದು ಫೊಟೋ ಹಂಚಿಕೊಂಡಿದ್ದಾರೆ. "ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯ ಮತ್ತು ಆಕರ್ಷಕ ನಗುವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ವಿಶೇಷ ಮಾರ್ಗದರ್ಶಕರಾಗಿ, ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಜೊತೆಗೆ ಇದ್ದರು. ಈ ಪುಣ್ಯತಿಥಿಯಂದು ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಪ್ಪಾಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ" ಎಂದು ದರ್ಶನ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.

ಅಂಬೀಶ್ ಫೌಂಡೇಷನ್ ಟ್ರಸ್ಟ್ ಸ್ಥಾಪನೆ!
ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಅಂಬರೀಶ್ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಅಂಬರೀಶ್ ಅವರ ಪರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡಲು ಹೊಸ ಟ್ರಸ್ಟ್ ಸ್ಥಾಪಿಸಲು ಮುಂದಾಗಿದ್ದಾರೆ.
"ಅಂಬರೀಶ್ ಅವರು ಕೇವಲ ಚಿತ್ರ ನಟ ಮತ್ತು ರಾಜಕಾರಣಿ ಆಗಿ ಗುರುತಿಸಿ ಕೊಂಡವರು ಅಲ್ಲ. ಅವರು ಮಾಡಿರುವ ಅನೇಕ ಸಮಾಜಮುಖಿ ಕೆಲಸಗಳ ಬಗ್ಗೆ ಹಲವರಿಗೆ ಗೊತ್ತಿಲ್ಲ. ಯಾಕೆಂದರೆ ಅವರು ಯಾವತ್ತೂ ಅದನ್ನು ಹೇಳಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಅವರಿಗೆ ಅನಿಸಿದ್ದನ್ನು ಅವರು ಮಾಡುತ್ತಿದ್ದರು. ಸಹಾಯ ಕೇಳಿದವರಿಗೆ ಸಹಾಯ ಮಾಡುತ್ತಿದ್ದರು. ಅವರು ಇದ್ದಿದ್ದರೆ ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದರು. ಅಂಬರೀಶ್ ಅವರ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಡಾ.ಅಂಬರೀಶ್ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಕೆಲಸ ಆರಂಭ ಆಗಿದೆ. ಎಂದು ಹೇಳಿದ್ದಾರೆ ಸುಮಲತಾ ಅಂಬರೀಶ್.

ಅಭಿಮಾನಿಗಳ ಮನದಲ್ಲಿ ಸದಾ ಅಮರ ಅಂಬಿ!
ನಟ ಅಂಬರೀಶ್ ಎಲ್ಲರನ್ನೂ ಅಗಲಿ ಹಲವು ಮೂರ್ಷಗಳು ಕಳೆಯುತ್ತಿವೆ. ಆದರೆ ಅಂಬರೀಶ್ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಎಂದೆಂದಿಗೂ ಅಮರ. ಅಭಿಮಾನಿಗಳು ಅಂಬಿಯ ನೆನಪನ್ನು ಮರೆಯಲು ಸಾಧ್ಯವಿಲ್ಲ. ಅಂಬರೀಶ್ ಪುಣ್ಯತಿಥಿ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕಠೀವರ ಸ್ಟುಡಿಯೋಗೆ ಆಗಮಿಸಿ ಅಂಬಿ ಸಮಾಧಿಗೆ ನಮಿಸಿದ್ದಾರೆ.
ಅಂಬರೀಷ್ ಪುಣ್ಯತಿಥಿ: ಮುಖ್ಯಮಂತ್ರಿ ಸೇರಿ ಗಣ್ಯರ ಸ್ಮರಣೆ
"ಜನಪ್ರಿಯ ಕಲಾವಿದ, ಅಭಿಮಾನಿಗಳ ನೆಚ್ಚಿನ ರೆಬೆಲ್ ಸ್ಟಾರ್, ಮಾಜಿ ಕೇಂದ್ರ ಸಚಿವ ಶ್ರೀ ಅಂಬರೀಶ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಹಲವಾರು ಯಶಸ್ವಿ ಚಲನಚಿತ್ರಗಳ ಜೊತೆಗೆ ತಮ್ಮ ವಿಶಿಷ್ಟ ನಡೆ, ನುಡಿ, ವ್ಯಕ್ತಿತ್ವಗಳಿಂದ ಅಭಿಮಾನಿಗಳ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ" : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


Click it and Unblock the Notifications











