'ಸ್ವಾಭಿಮಾನಿಗಳ ವಿಜಯೋತ್ಸವ' ಹೆಸರಲ್ಲಿ ನಡೆಯಲಿದೆ ಅಂಬಿ ಹುಟ್ಟುಹಬ್ಬ
ನೂತನ ಸಂಸದೆಯಾಗಿ ಮಂಡ್ಯದಿಂದ ಆಯ್ಕೆಯಾದ ಸುಮಲತಾ ಅಂಬರೀಶ್ ಇಂದು ಪತಿಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುದ್ದಾರೆ. ಇಂದು ಅಂಬರೀಶ್ ಅವರ 6ನೇ ತಿಂಗಳ ಪುಣ್ಯತಿಥಿ. ಈ ಸಮಯದಲ್ಲಿ ಸಂಸದೆಯಾಗಿ ಮೊದಲ ಬಾರಿಗೆ ಅಂಬರೀಶ್ ಸಮಾಧಿಗೆ ಭೇಟಿ ನೀಡಿದ್ದಾರೆ ಸುಮಲತಾ.
ಅಂಬರೀಶ್ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ತಿಂಗಳ ತಿಥಿ ಕಾರ್ಯವನ್ನು ಪೂರೈಸಿದ್ದಾರೆ. ಪೂಜೆ ಮುಗಿಸಿ ಸುಮಲತಾ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಗೆಲುವಿನ ನಂತರ ಮೊದಲ ಬಾರಿಗೆ ಮಾಧ್ಯಮದ ಮುಂದೆ ಹಾಜರಾದ ಸುಮಲತಾ ಅನ್ಯಾಯ ಮಾಡಿದವರಿಗೆ ಜನರೆ ಸರಿಯಾಗಿ ಬುದ್ಧಿಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಸುಮಲತಾ ಜೊತೆಗೆ ಮಗ ಅಭಿಷೇಕ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಕುಟುಂಬದವರು, ಸ್ನೇಹಿತರು ಹಾಜರಿದ್ದರು. ಅಂಬರೀಶ್ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಅದ್ಧೂರಿಯಾಗಿ ಆಚರಿಸುವ ಪ್ಲಾನ್ ಮಾಡಿರುವ ಬಗ್ಗೆ ಹೇಳಿದ್ದಾರೆ. ಮುಂದೆ ಓದಿ..

ಸ್ವಾಭಿಮಾನಿಗಳ ವಿಜಯೋತ್ಸವ
ಸುಮಲತಾ ಗೆಲುವು ಸ್ವಾಭಿಮಾನಿ ಮಂಡ್ಯ ಜನರ ಗೆಲುವು ಎಂದು ಸುಮಲತಾ ಹೇಳುತ್ತಿದ್ದಾರೆ. ಇದೆ ಹೆಸರಿನಲ್ಲಿ ಅಂಬಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಪ್ಲಾನ್ ಮಾಡಿದ್ದಾರಂತೆ ಸುಮಲತಾ. ಈ ಬಾರಿ 'ಸ್ವಾಭಿಮಾನಿಗಳ ವಿಜಯೋತ್ಸವ' ಹೆಸರಿನಲ್ಲಿ ಅಂಬರೀಶ್ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಆಚರಿಸಲಾಗುತ್ತಿದಂತೆ.

ಸ್ವಾಭಿಮಾನಿಗಳ ವಿಜಯೋತ್ಸವದಲ್ಲಿ ಯಶ್-ದರ್ಶನ್
ಇದೇ ತಿಂಗಳು 29ಕ್ಕೆ ಅಂಬರೀಶ್ ಹುಟ್ಟುಹಬ್ಬ 'ಸ್ವಾಭಿಮಾನಿಗಳ ವಿಜಯೋತ್ಸವ'ದಲ್ಲಿ ಅನೇಕರು ಭಾಗಿಯಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ಇಬ್ಬರು ಇರಲಿದ್ದಾರಂತೆ. ಸುಮಲತಾ ಗೆದ್ದ ಬಳಿಕ ದರ್ಶನ್ ಮತ್ತು ಯಶ್ ಜೊತೆಗೆ ಪ್ರೆಸ್ ಮೀಟ್ ಮಾಡಲಾಗುತ್ತೆ ಎಂದು ಹೇಳಲಾಗುತ್ತಿತ್ತು. ಆದ್ರೆ ಅಂಬರೀಶ್ ಹುಟ್ಟುಹಬ್ಬದ ದಿನವೆ ಎಲ್ಲರು ಒಟ್ಟಿಗೆ ಭಾಗಿಯಾಗಲಿದ್ದಾರಂತೆ.

ಅಮರ್ ಸಿನಿಮಾದ ಪ್ರಮೋಶನ್ ನಲ್ಲಿ ಭಾಗಿ
ಸದ್ಯ ಸುಮಲತಾ ಅಂಬರೀಶ್ ಗೆ ಮತ್ತೊಂದು ಸಮಾಲು ಎದುರಾಗಿದೆ. ಮೊಗನ ಮೊದಲ ಸಿನಿಮಾ 'ಅಮರ್' ಇದೆ ತಿಂಗಳು 30ಕ್ಕೆ ರಿಲೀಸ್ ಆಗುತ್ತಿದೆ. ಮಗನ ಮೊದಲ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳುವ ಆಸೆ ಅಂಬರೀಶ್ ಅವರಿಗಿತ್ತು. ಈಗ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಮಗನ ಸಿನಿಮಾ ಚಟುವಟಿಕೆಯಲ್ಲಿ ಭಾಗಿಯಾಗಲಿದ್ದಾರಂತೆ.

ಎರಡು ದಿನದಲ್ಲಿ 'ಅಮರ್' ಸಿನಿಮಾ ನೋಡಬೇಕು
'ಅಮರ್' ಸಿನಿಮಾ ಈಗಾಗಲೆ ಪೋಸ್ಟ್ ಪ್ರೊಡಕ್ಷನ್ ಹಂತವನ್ನು ಮುಗಿಸಿ ರಿಲೀಸ್ ಗೆ ರೆಡಿಯಾಗಿ ನಿಂತಿದೆ. ಸಿನಿಮಾವನ್ನು ಸುಮಲತಾ ಇನ್ನು ನೋಡಿಲ್ಲವಂತೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ಸುಮಲತಾ ಸಿನಿಮಾ ನೋಡಲಿದ್ದಾರೆ. ಅಷ್ಟೆಯಲ್ಲ ಪ್ರಮೋಷನ್ ನಲ್ಲು ಭಾಗಿಯಾಗಿ 'ಅಮರ್' ಸಿನಿಮಾ ಗೆಲುವಿಗೆ ಶ್ರಮಿಸಲಿದ್ದಾರಂತೆ.

20 ಸಾವಿರ ವೋಟ್ ನನಗೆ ಸೇರಬೇಕಿತ್ತು
ಮಂಡ್ಯದಲ್ಲಿ ಸುಮಲತಾಗೆ ಟಕ್ಕರ್ ಕೊಡಲು ಅದೇ ಹೆಸರಿನ ಮೂವರು ಸುಮಲತಾ ಅವರನ್ನು ಚುನಾವಣೆಗೆ ನಿಲ್ಲಿಸುವ ಪ್ಲಾನ್ ಮಾಡಲಾಗಿತ್ತು. ಆ ಮೂವರು ಸುಮಲತಾಗಳು ಸುಮಾರು 20 ಸಾವಿರ ವೋಟ್ ಗಳನ್ನು ಪಡೆದಿದ್ದಾರೆ. ಈ ಎಲ್ಲಾ ವೋಟ್ ಗಳು ನ್ಯಾಯವಾಗಿ ನನಗೆ ಸೇರಬೇಕಿತ್ತು ಎಂದು ಸುಮಲತಾ ಹೇಳಿದ್ದಾರೆ. ಅನ್ಯಾಯ, ಮೋಸ, ಅವಮಾನ ಮಾಡಿದವರಿಗೆ ಮಂಡ್ಯ ಜನರೆ ಸರಿಯಾಗೆ ಉತ್ತರ ಕೊಟ್ಟಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.

ಮಂಡ್ಯ ಜನರಿಗೆ ಗೆಲುವು ಅರ್ಪಣೆ
ಸುಮಲತಾ ಗೆಲುವನ್ನು ಮಂಡ್ಯ ಜನರಿಗೆ ಅರ್ಪಿಸಿದ್ದಾರೆ. ಸುಮಲತಾ ಬೆಂಬಲಕ್ಕೆ ನಿಂತ ರೈತಸಂಘ, ಕಾಂಗ್ರೇಸ್ ರೆಬೆಲ್ ಕಾರ್ಯಕರ್ತರು, ಬಿಜೆಪಿ, ಯಶ್ ಮತ್ತು ದರ್ಶನ್ ಅಭಿಮಾನಿಗಳು ಹಾಗೂ ಮಂಡ್ಯದ ಜನರಿಗೆ ಈ ಗೆಲುವು ಸೇರಬೇಕು ಎಂದು ಹೇಳಿದ್ದಾರೆ. ಅಂಬರೀಶ್ ಅವರನ್ನು ಜನ ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದು ಈ ಗೆಲುವಿನ ಮೂಲಕ ಗೊತ್ತಾಗುತ್ತಿದೆ ಎಂದು ಸುಮಲತಾ ಹೇಳಿದ್ದಾರೆ.


Click it and Unblock the Notifications











