ನಟ ಅಂಬರೀಶ್ ವೃತ್ತಿ ಜೀವನದಲ್ಲಿ ಇದೇ ಮೊದಲು, ಏನದು?
ನಟ ಅಂಬರೀಶ್ ಸದ್ಯ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಬಹಳ ವರ್ಷಗಳ ನಂತರ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ಅಂಬರೀಶ್ ಕಮ್ ಬ್ಯಾಕ್ ಮಾಡಿದ್ದಾರೆ. ಅದರ ಜೊತೆಗೆ ತಮ್ಮ ಈ ಸಿನಿಮಾದ ಬಗ್ಗೆ ಅಂಬರೀಶ್ ವಿಶೇಷ ಕಾಳಜಿ ಹೊಂದಿದ್ದಾರೆ.
ತಮಿಳಿನ 'ಪವರ್ ಪಾಂಡಿ' ಸಿನಿಮಾದ ರಿಮೇಕ್ ಚಿತ್ರವಾದ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಚಿತ್ರೀಕರಣ ಈಗಾಗಲೇ ನಡೆದಿದೆ. ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇನ್ನು ನಟ ಅಂಬರೀಶ್ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಬಗ್ಗೆ ಮತ್ತು ಅವರ ಪಾತ್ರದ ಬಗ್ಗೆ ತುಂಬ ಉತ್ಸಾಹ ಹೊಂದಿದ್ದಾರೆ. ಚಿತ್ರೀಕರಣದ ವೇಳೆ ಅವರ ಜೋಶ್ ನೋಡಿ ಇಡೀ ಚಿತ್ರತಂಡ ಬೆರಗಾಗಿದೆಯಂತೆ. ಜೊತೆಗೆ ಈ ಸಿನಿಮಾದಲ್ಲಿ ಈ ಹಿಂದೆ ಎಂದು ಮಾಡದ ಒಂದು ಕೆಲಸವನ್ನು ಅಂಬಿ ಮಾಡಿದ್ದಾರೆ. ಮುಂದೆ ಓದಿ...

ಮೊದಲ ಬಾರಿಗೆ ರಾತ್ರಿ ಶೂಟಿಂಗ್
ಅಂಬರೀಶ್ ಅವರ ಇಷ್ಟು ವರ್ಷದ ಕೆರಿಯರ್ ನಲ್ಲಿ ಎಂದು ಕೂಡ ರಾತ್ರಿ ಶೂಟಿಂಗ್ ಮಾಡಿರಲಿಲ್ಲವಂತೆ. ಆದರೆ ಇದೇ ಮೊದಲ ಬಾರಿಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ರಾತ್ರಿ ಶೂಟಿಂಗ್ ನಲ್ಲಿ ಅವರು ಭಾಗಿಯಾಗಿದ್ದಾರೆ.

ಬೆಳ್ಳಗೆ 12 ಗಂಟೆಯಿಂದ ರಾತ್ರಿ 2 ಗಂಟೆ ವರೆಗೆ
ಕೆಲದಿನಗಳ ಹಿಂದೆ ಚಿತ್ರದ ಚಿತ್ರೀಕರಣ ನಾಗರಬಾವಿ ಹತ್ತಿರ ನಡೆದಿದೆ. ಬೆಳ್ಳಗೆ 12 ಗಂಟೆಗೆ ಶುರುವಾದ ಶೂಟಿಂಗ್ ರಾತ್ರಿ 2 ಗಂಟೆವರೆಗೆ ಸಾಗಿದೆ. ಅಂಬರೀಶ್ ಮೊದಲ ಬಾರಿಗೆ ತಡ ರಾತ್ರಿಯ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಹತ್ತು ದಿನ ನಿರಂತರ ಶೂಟಿಂಗ್
ಅದರ ಜೊತೆಗೆ ಅಂಬರೀಶ್ ಇದುವರೆಗೆ ಯಾವುದೇ ಸಿನಿಮಾಗೆ ಸತತವಾಗಿ ಹತ್ತು ದಿನ ನಿರಂತರವಾಗಿ ಶೂಟಿಂಗ್ ಮಾಡಿರಲಿಲ್ಲ. ಆದರೆ ಈ ಚಿತ್ರದಲ್ಲಿ ಅವರು ಹತ್ತು ದಿನಗಳ ಕಾಲ ರೆಗ್ಯೂಲರ್ ಆಗಿ ಶೂಟಿಂಗ್ ಮಾಡಿದ್ದಾರೆ.

ಸಂತಸ ಹಂಚಿಕೊಂಡ ನಿರ್ದೇಶಕ
ಚಿತ್ರೀಕರಣ ಅನುಭವದ ಬಗ್ಗೆ ಮಾತನಾಡಿದ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ ನಿರ್ದೇಶಕ ಗುರುದತ್ ''ತುಂಬ ಖುಷಿ ಆಗುತ್ತಿದೆ. ನನ್ನ ಮೊದಲ ಸಿನಿಮಾವನ್ನು ಅಂಬರೀಶ್ ಅಂತಹ ದೊಡ್ಡ ನಟನ ಜೊತೆಗೆ ಮಾಡುತ್ತಿದ್ದೆನೆ. ಅವರಿಗೆ ವಯಸ್ಸಾಗಿ ಅಂತ ಅನಿಸೋದೆ ಇಲ್ಲ. ಅವರು ಶೂಟಿಂಗ್ ಸೆಟ್ ನಲ್ಲಿ ಒಬ್ಬ ಹುಡುಗನ ರೀತಿ ಇರುತ್ತಾರೆ. ಅವರ ಉತ್ಸಾಹ, ಡೆಡಿಕೇಶನ್ ನಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ಇಬ್ಬರು ನಾಯಕಿಯರು
'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಸುಹಾಸಿನಿ ಅವರು ಅಂಬರೀಶ್ ಜೋಡಿಯಾಗಿ ಮತ್ತು ಶೃತಿ ಹರಿಹರನ್ ಸುದೀಪ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಚಿತ್ರದ 40 ರಷ್ಟು ಭಾಗದ ಚಿತ್ರೀಕರಣ ಈಗ ಮುಗಿದಿದೆ.

'ಪವರ್ ಪಾಂಡಿ' ರಿಮೇಕ್
'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ 'ಪವರ್ ಪಾಂಡಿ' ಚಿತ್ರದ ರಿಮೇಕ್. ತಮಿಳಿನ 'ಪವರ್ ಪಾಂಡಿ' ಸಿನಿಮಾ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ಬಂದಿತ್ತು. ನಟ ಧನುಷ್ ಈ ಚಿತ್ರವನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದರು. ರಾಜ್ ಕಿರಣ್ 'ಪವರ್ ಪಾಂಡಿ'ಯ ನಾಯಕನಾಗಿದ್ದರು.

ನಿರ್ದೇಶಕ ಗುರುದತ್ ಗಣಿಗ ಬಗ್ಗೆ
ಅಂದ್ಹಾಗೆ, ಗುರುದತ್ ಗಣಿಗ ಅಲಿಯಾಸ್ ಗುರು ಸುಮಾರು 9 ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 6 ವರ್ಷದಿಂದ ಸುದೀಪ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ತಮ್ಮ ಸಹ ನಿರ್ದೇಶನ ಮೇಲೆ ನಂಬಿಕೆ ಇಟ್ಟು ಸುದೀಪ್ ಈ ಸಿನಿಮಾ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.


Click it and Unblock the Notifications











