ಶನಿವಾರ ರಾತ್ರಿ ನಡೆದಿದ್ದೇನು.? ಅಂಬರೀಶ್ ಬದುಕಿನ ಕೊನೆಯ ಆ ಕ್ಷಣಗಳು.!
Recommended Video

ನವೆಂಬರ್ 24, 2018... ಶನಿವಾರ ಬೆಳಗ್ಗೆ ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಸಮೇತ ಮೈಸೂರಿಗೆ ಪ್ರಯಾಣ ಬೆಳೆಸಬೇಕಿತ್ತು. ಯಾಕಂದ್ರೆ, ಶನಿವಾರ ಅಂಬರೀಶ್ ರವರ ಅಣ್ಣ ಡಾ.ಹರೀಶ್ ಅವರ ವರ್ಷದ ತಿಥಿ ಕಾರ್ಯಕ್ರಮವಿತ್ತು. ಹೀಗಾಗಿ, ಸಂಬಂಧಿಕರೆಲ್ಲರೂ ಮೈಸೂರಿಗೆ ಆಗಮಿಸಿದ್ದರು.
ಅಂಬರೀಶ್ ಈಗ ಬರುತ್ತಾರೆ, ಆಗ ಬರುತ್ತಾರೆ ಅಂತಲೇ ಸಂಬಂಧಿಕರೆಲ್ಲರೂ ಮೈಸೂರಿನಲ್ಲಿ ಕಾಯುತ್ತಿದ್ದರು. ಆದ್ರೆ, ಬೆಳಗ್ಗೆಯಿಂದಲೇ ಅಂಬರೀಶ್ ಗೆ ಒಂಥರಾ ಸಂಕಟ ಕಾಣಿಸಿಕೊಂಡಿತ್ತು.
ಮಧ್ಯಾಹ್ನದ ಹೊತ್ತಿಗೆ ಸಂಬಂಧಿಕರಿಗೆ ಫೋನ್ ಮಾಡಿ ''ನಾನು ಬರಲು ಆಗುವುದಿಲ್ಲ. ಕಾರ್ಯ ಮುಗಿಸಿ'' ಅಂತ ಅಂಬರೀಶ್ ತಿಳಿಸಿದ್ದರು. ಆಗಲೇ ಅಂಬರೀಶ್ ಕೊಂಚ ಸುಸ್ತಾಗಿದ್ದರು.
ಈ ನಡುವೆಯೇ ಮಂಡ್ಯದ ಕನಗನವಾಡಿಯಲ್ಲಿ ಬಸ್ ದುರಂತ ಸಂಭವಿಸಿತು. ಈ ಅಪಘಾತದ ಬಗ್ಗೆ ಅಂಬರೀಶ್ ಮಾಧ್ಯಮಗಳ ಜೊತೆಗೆ ದೂರವಾಣಿಯಲ್ಲಿ ಗದ್ಗದಿತವಾಗಿಯೇ ಮಾತನಾಡಿದ್ದರು. ''ಆರೋಗ್ಯ ಸರಿಯಿದಿದ್ದರೆ, ಮಂಡ್ಯಗೆ ಭೇಟಿ ನೀಡುತ್ತಿದ್ದೆ'' ಅಂತಲೂ ಅಂಬರೀಶ್ ತಿಳಿಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಅಂಬರೀಶ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅಷ್ಟಕ್ಕೂ, ಶನಿವಾರ ರಾತ್ರಿ ಏನಾಯ್ತು.? ಅಂಬರೀಶ್ ಬದುಕಿನ ಕೊನೆಯ ಕ್ಷಣಗಳ ಬಗ್ಗೆ ಡಾ.ಸತೀಶ್ ಮಾತನಾಡಿದ್ದಾರೆ. ಮುಂದೆ ಓದಿರಿ...

ರಾತ್ರಿ 8 ಗಂಟೆ ಸಮಯ...
ಅದು ಶನಿವಾರ ರಾತ್ರಿ 8 ಗಂಟೆ... ಇಷ್ಟೊತ್ತಿಗೆ ಎಲ್ಲವೂ ಸರಿ ಇತ್ತು. ಎಂದಿನಂತೆ ಮನೆಯಲ್ಲೇ ಅಂಬರೀಶ್ ಊಟ ಮಾಡಿ ಮುಗಿಸಿದ್ದರು. ಸುಸ್ತಾಗುತ್ತಿದೆ ಎನ್ನುತ್ತಿದ್ದ ಅಂಬರೀಶ್, ಬೆಡ್ ರೂಮ್ ಕಡೆಗೆ ಮುಖ ಮಾಡಿದರು. ಬೆಡ್ ರೂಮ್ ತಲುಪುವ ಮುನ್ನವೇ ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಗೋಡೆ ಹಿಡಿದುಕೊಂಡು ಅಂಬರೀಶ್ ಕುಸಿದು ಬಿದ್ದರಂತೆ.

ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ
ಅಂಬರೀಶ್ ಕುಸಿದು ಬೀಳುತ್ತಿದ್ದಂತೆಯೇ, ಅಲ್ಲೇ ಇದ್ದ ವಿಕ್ರಂ ಆಸ್ಪತ್ರೆಯ ಸಿಬ್ಬಂದಿ ಆಮ್ಲಜನಕದ ಸಂಪರ್ಕ ನೀಡಿದ್ದಾರೆ. ಕಾರ್ಡಿಯಾಕ್ ಮಸಾಜ್ ಮಾಡಿದ್ದಾರೆ. ಆದರೆ ದೇಹ ತಣ್ಣಗಾಗುತ್ತಾ ಬಂದ ಪರಿಣಾಮ, ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತರಲಾಯಿತು.

ನಾಡಿಮಿಡಿತ ಇರಲಿಲ್ಲ
''ಆಸ್ಪತ್ರೆಗೆ ಅಂಬರೀಶ್ ರನ್ನು ಕರೆತಂದಾಗ ನಾಡಿಮಿಡಿತ ಇರಲಿಲ್ಲ. ಆದರೂ ಇಂಜೆಕ್ಷನ್ ಕೂಟ್ವಿ. ಕಾರ್ಡಿಯಾಕ್ ಮಸಾಜ್ ಮಾಡಿದ್ವಿ. ಆದ್ರೆ, ಚಿಕಿತ್ಸೆಗೆ ಅಂಬರೀಶ್ ಸ್ಪಂದಿಸಲಿಲ್ಲ'' ಎನ್ನುತ್ತಾರೆ ಡಾ.ಸತೀಶ್.

ಅಗಲಿದ ಅಂಬರೀಶ್
ಹೃದಯ ಸ್ತಂಭನವಾಗಿದ್ದರಿಂದ ಅಂಬರೀಶ್ ಮೃತಪಟ್ಟರು. ಪತ್ನಿ ಸುಮಲತಾ, ಪುತ್ರ ಅಭಿಶೇಕ್ ಮತ್ತು ಕೋಟ್ಯಾಂತರ ಅಭಿಮಾನಿಗಳನ್ನು ಅಂಬರೀಶ್ ಅಗಲಿದರು. ಇಡೀ ಕರುನಾಡಿಗೆ ಕರುನಾಡೇ ಶೋಕಸಾಗರದಲ್ಲಿ ಮುಳುಗಿತು. ಅಂಬರೀಶ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಮಾಡಿರುವ ನೂರಾರು ಪಾತ್ರಗಳ ಮೂಲಕ 'ರೆಬೆಲ್ ಸ್ಟಾರ್' ಸದಾ ಜೀವಂತ.


Click it and Unblock the Notifications











