ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಪೊಲೀಸರಿಂದ ಅಂಬಿಗೆ ಬಿದ್ದಿತ್ತು 15 ರೂ ದಂಡ.!
ಗೆಳೆಯರ ಗುಂಪು ಕಟ್ಟಿಕೊಂಡು ಹುಡುಗಿಯರನ್ನು ಚುಡಾಯಿಸಿ ಪೊಲೀಸರಿಗೆ 15 ರೂ. ದಂಡ ಕಟ್ಟಿದ್ದ ಅಂಬಿ, ಮುಂದೆ ಬಣ್ಣದ ಲೋಕಕ್ಕೆ ಕಾಲಿಟ್ಟು ಹುಡುಗಿಯರ ನೆಚ್ಚಿನ ನಾಯಕನಾಗಿದ್ದು ಈಗ ಇತಿಹಾಸ.
ಅಂಬರೀಶ್ ಅವರು ತಮ್ಮ ಬಾಲ್ಯ ಹಾಗೂ ಯೌವನದ ಸಾಕಷ್ಟು ಸಮಯ ಕಳೆದಿದ್ದು ಮೈಸೂರಿನಲ್ಲಿ. ವಿದ್ಯಾರಣ್ಯಪುರಂನಲ್ಲಿದ್ದ ಭಾವ ಡಾ.ಅಂಕೇಗೌಡರ ಹೆಂಚಿನ ಮನೆಗೆ ಆಗಿಂದಾಗ್ಗೆ ಬಂದು ಹೋಗುತ್ತಿದ್ದರು. ಬಾಲ್ಯದಲ್ಲಿ ಸರಸ್ವತಿಪುರಂ ಎದುರಿನ ಮೈದಾನದಲ್ಲಿ ಟೆನ್ನಿಸ್, ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಹೆಚ್ಚು ಆಡುತ್ತಿದ್ದರು.
ಅದು ಕಾಲೇಜು ಯೌವನದ ತುಂಟಾಟದ ಸಮಯ. ಅಮರ ನಾಥ್ ಆಪ್ತರಾಗಿದ್ದ ಸಂಗಮ್ ಸೇರಿ ತಮ್ಮದೊಂದು ಪಡೆಯನ್ನೇ ಕಟ್ಟಿಕೊಂಡು ಮನೆ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗಿಯರನ್ನು ಚುಡಾಯಿಸಿ ನಗಿಸುತ್ತಿದ್ದರು. ಮುಂದೆ ಓದಿರಿ...

ಪೊಲೀಸರಿಂದ ದಂಡ
ಎಂದಿಗೂ ಸರಿಯಾದ ಸಮಯಕ್ಕೆ ಮನೆ ಸೇರದ ಅಮರನಾಥ್, ಅಮ್ಮನಿಂದ ಬೈಸಿಕೊಂಡಿದ್ದೇ ಹೆಚ್ಚು. ಒಮ್ಮೆ ಇವರ ಪುಂಡಾಟಕ್ಕೆ ಸರಸ್ವತಿಪುರಂ ಪೊಲೀಸರು 15 ರೂ. ಕೂಡ ದಂಡ ವಿಧಿಸಿದ್ದರು.

ನೆನಪು ಹಂಚಿಕೊಂಡ ಗೆಳೆಯರು
ಸರಸ್ವತಿಪುರಂ ನಿವಾಸಿ ಶಿವಕುಮಾರ್, ''ನಾವು ಚಿಕ್ಕವರಿದ್ದಾಗ ಅಂಬರೀಶ್ ತಮ್ಮ ಗೆಳೆಯರ ಗುಂಪು ಕಟ್ಟಿಕೊಂಡು ಇಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದರು. ಅವರ ‘ವಜ್ರದ ಜಲಪಾತ' ಚಿತ್ರ ಬಿಡುಗಡೆಯಾದಾಗ ಅವರ ತಾಯಿ, ನನ್ನ ಮಗನ ಸಿನಿಮಾ ಬಿಡುಗಡೆಯಾಗಿದೆ. ಎಲ್ಲರೂ ಹೋಗಿ ನೋಡಿ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ ಎಂದು ಹೇಳುತ್ತಿದ್ದ ದೃಶ್ಯಗಳು ಇನ್ನೂ ಕಣ್ಣ ಮುಂದೆ ಇವೆ'' ಎಂದು ನೆನಪಿಸಿಕೊಂಡರು.

ಅಂಬಿ ಸ್ಮರಣೆ
86 ವರ್ಷದ ಮೂರ್ತಿ ಅವರು, ''ಅಂಬರೀಶ್ ಅವರ ಒಡನಾಟ ಹಂಚಿಕೊಳ್ಳುತ್ತಾ, ಅಂಬರೀಶ್ ತುಂಬಾ ಒಳ್ಳೆಯ ಹುಡುಗ. ಅವರ ಬಾಲ್ಯದ ದಿನಗಳನ್ನು ನಾನು ನೋಡಿದ್ದೇನೆ. ಸ್ನೇಹಿತರೊಂದಿಗೆ ಸಾಕಷ್ಟು ಕೀಟಲೆ, ತಮಾಷೆ ಮಾಡುತ್ತ ಇರುತ್ತಿದ್ದ. ನನ್ನ ಅಳಿಯ ಮತ್ತು ಅಂಬರೀಶ್ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಚಿತ್ರರಂಗಕ್ಕೆ ಹೋದ ಮೇಲೆ ಇಲ್ಲಿರುವ ಮನೆಯನ್ನು ತಮ್ಮ ತಂಗಿಗೆ ನೀಡಿದ್ದರು. ಇಲ್ಲಿಗೆ ಬಂದಾಗ ಭೇಟಿಯಾಗುವುದನ್ನು ಮರೆಯುತ್ತಿರಲಿಲ್ಲ' ಎಂದು ಸ್ಮರಿಸಿದರು.

ಸ್ಥಳೀಯರಲ್ಲಿ ಅಂಬಿ ನೆನಪು ಜೀವಂತ
ಕುಟುಂಬ ಸಮೇತ ಸರಸ್ವತಿಪುರಂ ಈಜುಕೊಳದ 7ನೇ ಮುಖ್ಯ ರಸ್ತೆಯ ಕಾರ್ನರ್ ಮನೆಯಲ್ಲಿ ವಾಸವಿದ್ದ ಅವರ ಬಾಲ್ಯ ಹಾಗೂ ಯೌವನದ ದಿನಗಳ ನೆನಪುಗಳು ಸ್ಥಳೀಯರಲ್ಲಿ ಇನ್ನೂ ಜೀವಂತವಾಗಿವೆ.


Click it and Unblock the Notifications











