Ambareesh Memorial : ಇಂದೇ ಅಂಬಿ ಸ್ಮಾರಕ ಲೋಕಾರ್ಪಣೆ: ರೇಸ್ಕೋರ್ಸ್ ರಸ್ತೆಗೂ ರೆಬೆಲ್ ಸ್ಟಾರ್ ಹೆಸರು ನಾಮಕರಣ
ಕಂಠೀರವ ಸ್ಟುಡಿಯೋದಲ್ಲಿ ನಿರ್ಮಾಣವಾಗಿರುವ ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕವನ್ನು ಇಂದು(ಮಾರ್ಚ್ 27) ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಚಿತ್ರರಂಗ ಹಾಗೂ ರಾಜಕೀಯರಂಗದ ಗಣ್ಯರು ಭಾಗಿ ಆಗಲಿದ್ದಾರೆ. ಅಭಿಮಾನಿಗಳು ಕೂಡ ಈ ಸಂತಸದ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ.
2018 ನವೆಂಬರ್ 24ರಂದು ನಟ ಅಂಬರೀಶ್ ನಿಧನರಾಗಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಲಾಗಿತ್ತು. ಕಳೆದ ವರ್ಷ ಫೆಬ್ರವರಿ 27ರಂದು ಸಮಾಧಿ ಬಳಿ ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೂಮಿ ಪೂಜೆ ನೆರವೇರಿಸಿದ್ದರು. ಇದೀಗ ಸುಂದರವಾದ ಸ್ಮಾರಕ ತಲೆ ಎತ್ತಿದ್ದು ಇಂದು ಲೋಕಾರ್ಪಣೆ ಆಗಲಿದೆ. ಕಂಠೀರವ ಸ್ಟುಡಿಯೋದ 1 ಎಕರೆ 34 ಗುಂಟೆ ಜಾಗದಲ್ಲಿ ಅಂದಾಜು 12 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಿದೆ.

ವಿಭಿನ್ನ ಶೈಲಿಯಲ್ಲಿ ಅಂಬಿ ಸ್ಮಾರಕ ತಲೆ ಎತ್ತಿದೆ. ಕೈ ಮುಗಿಯುವ ಆಕಾರದಲ್ಲಿ ನಿರ್ಮಾಣವಾಗಿರುವ ಗೋಪುರ ಸ್ಮಾರಕದ ಪ್ರಮುಖ ಆಕರ್ಷಣೆ ಆಗಿದೆ. ಇನ್ನು ಸ್ಮಾರಕದ ನಡುವೆ 32 ಅಡಿ ಎತ್ತರದ ಅಂಬಿ ಪ್ರತಿಮೆ ಕೂಡ ನಿರ್ಮಿಸಲಾಗಿದೆ. ಇನ್ನು ಮ್ಯೂಸಿಯಂ ಕೂಡ ಇದ್ದು, ನೂರಾರು ಎಲ್ಇಡಿ ಲೈಟ್ಗಳಿಂದ ಸ್ಮಾರಕದ ಕಳೆ ಹೆಚ್ಚಿಸಲಾಗಿದೆ. ರಾತ್ರಿ ಹೊತ್ತು ಸ್ಮಾರಕ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿದೆ. ಇನ್ನು ಸ್ಮಾರಕ ಲೋಕಾರ್ಪಣೆ ಜೊತೆಗೆ ನಗರದ ರೇಸ್ ಕೋರ್ಸ್ ರಸ್ತೆಗೆ ಅಂಬಿ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ.

ಸಂಜೆ 5.30ಕ್ಕೆ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆಗೆ ರೆಬಲ್ ಸ್ಟಾರ್ ಡಾ. ಎಂ. ಹೆಚ್ ಅಂಬರೀಶ್ ರಸ್ತೆ ಎಂದು ನಾಯಕರಣ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೇಸ್ಕೋರ್ಸ್ ಸರ್ಕಲ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನಿನ್ನೆಯಷ್ಟೆ ಫಿಲ್ಮ್ ಚೇಂಬರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ವೇಳೆ ನಟ ದೊಡ್ಡಣ್ಣ, ಅಕಾಡೆಮಿ ಅಧ್ಯಕ್ಷರಾದ ಅಶೋಕ್ ಕಶ್ಯಪ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಉಮೇಶ್ ಬಣಕರ್ ಭಾಗಿ ಆಗಿದ್ದರು. ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ. ಮಾ ಹರೀಶ್ ಮಾಹಿತಿ ನೀಡಿದ್ದರು.

ಇತ್ತೀಚೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಭಾಗಿ ಆಗಿದ್ದ ಸಿಎಂ ಬೊಮ್ಮಾಯಿ ಸ್ನೇಹಿತ ಅಂಬಿಯನ್ನು ನೆನೆದಿದ್ದರು. "ಅಂಬರೀಶ್ಗೆ ರೇಸ್ ಕೋರ್ಸ್ ರಸ್ತೆ ಅಂದರೆ ಬಹಳ ಇಷ್ಟ. ಸದಾ ಪ್ರತಿಷ್ಠಿತ ಹೋಟೆಲ್ನಲ್ಲಿ ವಾಸ್ತವ್ಯ ಹೂಡುತ್ತಿದ್ದ. ಗೆಳೆಯರ ಹೆಸರು ಗೊತ್ತಿರುತ್ತಿತ್ತೋ ಇಲ್ಲವೋ, ಕುದುರೆ ಹೆಸರು ಮಾತ್ರ ಗೊತ್ತಿರುತ್ತಿತ್ತು" ಎಂದು ಸಿಎಂ ತಮಾಷೆ ಮಾಡಿದ್ದರು.


Click it and Unblock the Notifications











