ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬಿ ಗುಡಿ: ಹಬ್ಬದಲ್ಲಿ ಪಾಲ್ಗೊಂಡ ದರ್ಶನ್, ಸುಮಲತಾ
ಮಂಡ್ಯ ಜಿಲ್ಲೆ, ಮದ್ದೂರಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬರೀಶ್ ಅಭಿಮಾನಿಗಳು ನಿರ್ಮಿಸಿರುವ ಅಂಬರೀಶ್ ಗುಡಿಯನ್ನು ಇಂದು ಸುಮಲತಾ ಅಂಬರೀಶ್, ದರ್ಶನ್, ಅಭಿಷೇಕ್ ಅಂಬರೀಶ್ ಹಾಗೂ ಇತರರು ಉದ್ಘಾಟನೆ ಮಾಡಿದರು.
Recommended Video
ಕಾರ್ಯಕ್ರಮಕ್ಕೆ ಟ್ರಾಕ್ಟರ್ನಲ್ಲಿ ದರ್ಶನ್, ಸುಮಲತಾ, ಅಭಿಷೇಕ್ ಅಂಬರೀಶ್ ಬಂದದ್ದು ವಿಶೇಷವಾಗಿತ್ತು. ದರ್ಶನ್, ಸುಮಲತಾ ಹಾಗೂ ಇತರ ಸೆಲೆಬ್ರಿಟಿಗಳನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. ಕಾರ್ಯಮದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾದಂತಹಾ ಪ್ರಸಂಗ ಸಹ ಎದುರಾಯಿತು.
ಭಾರಿ ಜಯಘೋಷಗಳ ನಡುವೆ ಅಂಬಿ ಪುತ್ಥಳಿಯನ್ನು ದರ್ಶನ್, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಉದ್ಘಾಟಿಸಿದರು. ನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಅಲ್ಲಿ ಅಂಬರೀಶ್ ನೆನಪ ಮಹಾನದಿಯೇ ಹರಿಯಿತು.

ಅಭಿಮಾನಿಗಳ ಕಾರ್ಯಕ್ಕೆ ಶ್ಲಾಘನೆ
ಸ್ಥಳೀಯ ಮುಖಂಡರು, ಅಂಬಿ ಅಭಿಮಾನಿಗಳು, ರಾಕ್ಲೈನ್ ವೆಂಕಟೇಶ್, ಸುಮಲತಾ ಅಂಬರೀಶ್, ಅಭಿಷೇಕ್, ದರ್ಶನ್ ಎಲ್ಲರೂ ಅಂಬಿಯ ಗುಣಗಾನ ಮಾಡಿದರು. ಜೊತೆಗೆ ಹೊಟ್ಟೆಗೌಡನ ದೊಡ್ಡಿಯ ಅಭಿಮಾನಿಗಳ ಕಾರ್ಯವನ್ನು ಮನಸಾರೆ ಶ್ಲಾಘಿಸಿದರು.

ಪುತ್ಥಳಿ ಮಾಡಿದವರಿಗೆ ವಂದಿಸಿದ ದರ್ಶನ್
ದರ್ಶನ್ ಮಾತನಾಡಿ, ಅಂಬಿಯ ಸುಂದರ ಪುತ್ಥಳಿ ನಿರ್ಮಿಸಿದ ವ್ಯಕ್ತಿಗೆ ಧನ್ಯವಾದ ಅರ್ಪಿಸಿದರು. ಅಂಬಿಯ ಎಲ್ಲ ಅಭಿಮಾನಿಗಳು ಸುಮಲತಾ ಬೆನ್ನಿಗೆ ನಿಲ್ಲಬೇಕು, ಪ್ರೀತಿ ಆಧರಗಳನ್ನು ಅಂಬಿ ಕುಟುಂಬದ ಮೇಲೆ ಸದಾ ಇಡಬೇಕು ಎಂದರು. ಸಿನಿಮಾವೊಂದರ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು ದರ್ಶನ್.

ರಾಕ್ಲೈನ್ ವೆಂಕಟೇಶ್ ಮಾತು
ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಮದ್ದೂರು, ಮದ್ದೂರಿನ ಜನ ಅಂದ್ರೆ ಅಂಬರೀಶ್ ಗೆ ಎಲ್ಲಿಲ್ಲದ ಪ್ರೀತಿ. ಹೊಟ್ಟೇಗೌಡನ ದೊಡ್ಡಿ ಅಭಿಮಾನಿಗಳ ಕಾರ್ಯ ಮಾದರಿ. ಈ ಕಾರ್ಯ ಇಡೀ ವಿಶ್ವಕ್ಕೆ ಮಾದರಿ ಎಂದರು.

ವಿಡಿಯೋ ಸಂದೇಶ ಕಳಿಸಿದ್ದ ನಟ ಯಶ್
ನಟ ಯಶ್ ತಮ್ಮ ವಿಡಿಯೋ ಸಂದೇಶ ಕಳಿಸಿ, ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಹೊಟ್ಟೆಗೌಡನ ದೊಡ್ಡಿಯ ಜನರ ಕಾರ್ಯವನ್ನು ಶ್ಲಾಘಿಸಿದರು. ಮುಂದೆ ಹೊಟ್ಟೆಗೌಡನ ದೊಡ್ಡಿಗೆ ಭೇಟಿ ನೀಡುವುದಾಗಿಯೂ ಹೇಳಿದರು.

ಅಭಿಷೇಕ್ ಅಂಬರೀಶ್ ಸಹ ಮಾತನಾಡಿದರು
ಅಭಿಷೇಕ್ ಅಂಬರೀಶ್ ಮಾತನಾಡಿ, ಮೊದಲೆಲ್ಲಾ ವಾರಕ್ಕೊಮ್ಮೆ ಇಲ್ಲಿಗೆ ಬರುತ್ತಿದ್ದೆ, ಈಗಲೂ ಬರುತ್ತಲೇ ಇರುತ್ತೇನೆ. ಆದರೆ ಇಂದು ಜನರ ಪ್ರೀತಿ ವಿಶ್ವಾಸ ಕಂಡು ಇದೇ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೀನೇನೋ ಎನಿಸುತ್ತಿದೆ ಎಂದರು. ಸುಮಲತಾ ಅಂಬರೀಶ್ ಸಹ ಕಾರ್ಯಕ್ರಮದಲ್ಲಿ ಮಾತನಾಡಿದರು.


Click it and Unblock the Notifications











