ಅಂಬಿ 71ನೇ ಜಯಂತೋತ್ಸವ: ನೆಚ್ಚಿನ ನಟನನ್ನು ನೆನೆದ ಅಭಿಮಾನಿಗಳು, ತಾರೆಯರು
ಇಂದು(ಮೇ 29) ರೆಬಲ್ ಸ್ಟಾರ್ ಅಂಬರೀಶ್ 71ನೇ ಜಯಂತೋತ್ಸವ. ಅಭಿಮಾನಿಗಳು, ತಾರೆಯರು, ರಾಜಕೀಯ ಮುಖಂಡರು ನೆಚ್ಚಿನ ನಟನನ್ನು ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಕನ್ನಡ ನಾಡು, ನುಡಿಗೆ ಅಂಬಿ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ರೆಬಲ್ ಸ್ಟಾರ್ ಸಮಾಧಿಗೆ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ಜಲೀಲನ ಪಾತ್ರದಲ್ಲಿ ನಟಿಸುವ ಮೂಲಕ ಅಂಬಿ ಚಿತ್ರರಂಗಕ್ಕೆ ಬಂದರು. ಮುಂದೆ ರೆಬಲ್ ಸ್ಟಾರ್ ಆಗಿ ಪ್ರೇಕ್ಷಕರನ್ನು ರಂಜಿಸಿದರು. ರಾಜಕೀಯರಂಗಕ್ಕೂ ಬಂದು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ಅಂಬಿ ನಟಿಸಿ ಗೆದ್ದರು. ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಕಮಾಲ್ ಮಾಡಿದರು.

ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ " ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು. ಹಾಗಾಗಿ ನಿಮ್ಮ ಹುಟ್ಟು ಹಬ್ಬ ಅದೊಂದು ಸಡಗರವಾಗಿರುತ್ತಿತ್ತು.
ಅದು ನಮಗಷ್ಟೇ ಅಲ್ಲ, ಅಭಿಮಾನಿಗಳ ಪಾಲಿಗೆ ನಿಜವಾದ ಹಬ್ಬ. ಭೌತಿಕವಾಗಿ ನಮ್ಮೊಂದಿಗೆ ನೀವು ಇದ್ದಿದ್ದರೆ, ಇಂದು 71ನೇ ವರ್ಷದ ಹುಟ್ಟು ಹಬ್ಬವನ್ನೂ ಅಭಿಮಾನಿಗಳ ಜೊತೆಯಾಗಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುತ್ತಿದ್ದೆವು."

"ಮನೆ ಮುಂದೆ ಜನಸಾಗರ, ನಿಮ್ಮ ಆರ್ಭಟ, ಹಾಸ್ಯ ಪ್ರಜ್ಞೆಯ ಮಾತು, ರಾತ್ರಿ ಇಡೀ ಕಾಯುತ್ತಾ ನಿಂತಿದ್ದ ಅಭಿಮಾನಿಗಳ ಘೋಷಣೆ ಇನ್ನೂ ಹಾಗೆಯೇ ಇದೆ. ಇವತ್ತೂ ಕೂಡ ಅವೆಲ್ಲವೂ ನಿಮಗೆ ಶುಭಾಶಯ ಹೇಳುತ್ತಿವೆ. ಸ್ವೀಕರಿಸಿ. ಹ್ಯಾಪಿ ಬರ್ತಡೇ ಮೈ ಅಂಬಿ. ಜತೆಗಿರದ ಜೀವ ಎಂದೆಂದಿಗೂ ಜೀವಂತ." ಎಂದು ಬರೆದುಕೊಂಡಿದ್ದಾರೆ.
ಅಚಾನಕ್ ಆಗಿ ಚಿತ್ರರಂಗಕ್ಕೆ ಎಂಟ್ರಿ
ಮಂಡ್ಯ ಜಿಲ್ಲೆಯ ದೊಡ್ಡರಸಿನ ಕೆರೆ ಊರಲ್ಲಿ 1952 ಮೇ 29ರಂದು ಜನಿಸಿದ ಅಂಬಿಗೆ ಮನೆಯಲ್ಲಿ ಹೆತ್ತವರು ಇಟ್ಟ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಇಷ್ಟವಿಲ್ಲದಿದ್ದರೂ ಸ್ನೇಹಿತ ಒತ್ತಾಯಕ್ಕೆ ಮಣಿದು 'ನಾಗರಹಾವು' ಚಿತ್ರದ ಜಲೀಲನ ಪಾತ್ರಕ್ಕೆ ಆಡಿಯನ್ ಕೊಟ್ಟಿದ್ದರು. ಪುಟ್ಟಣ್ಣ ಗರಡಿಯಲ್ಲಿ ಬೆಳೆಯುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮುಂದೆ ಕನ್ನಡ ಚಿತ್ರರಂಗದಲ್ಲಿ ರೆಬಲ್ ಪರ್ವ ಆರಂಭವಾಯಿತು. 'ರಂಗನಾಯಕಿ', 'ಅಂತ', 'ಮಂಡ್ಯ ಗಂಡು', 'ಚಕ್ರವ್ಯೂಹ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಸಾಕಷ್ಟು ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ಮಿಂಚಿದು.
ಕೇಂದ್ರ ಸಚಿವರಾಗಿಯೂ ಸೇವೆ
ಅಂಬಿ ಜನಪ್ರಿಯತೆ ನೋಡಿ ರಾಜಕೀಯಕ್ಕೆ ಆಹ್ವಾನ ಬಂತು. ಜನತಾದಳದಿಂದ ರೆಬಲ್ ಸ್ಟಾರ್ ರಾಜಕೀಯ ರಂಗ ಪ್ರವೇಶಿಸಿದರು. ನಂತರ 1994ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಅಲ್ಲಿಂದ ಮುಂದೆ 1998ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾದರು. 2006ರಿಂದ 2008ರವರೆಗೆ ಕೇಂದ್ರ ವಾರ್ತಾ ಸಚಿವರಾಗಿದ್ದರು. 2008ರಲ್ಲಿ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು 2013ರಲ್ಲಿ ಮಂಡ್ಯದಿಂದ ಗೆದ್ದು ವಿಧಾನಸಭೆ ಕೂಡ ಪ್ರವೇಶಿಸಿ ವಸತಿ ಸಚಿವರಾಗಿ ಕೆಲಸ ಮಾಡಿದ್ದರು.
ಅಜಾತ ಶತ್ರು
ಅಂಬರೀಶ್ ಅವರಿಗೆ ಸ್ನೇಹಿತರ ಬಳಗ ದೊಡ್ಡದಾಗಿತ್ತು. ಸ್ನೇಹಕ್ಕಾಗಿ ಜೀವ ಕೊಡುವ ವ್ಯಕ್ತಿತ್ವ ಅವರದ್ದು. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್, ಕಾಲಿವುಡ್, ಟಾಲಿವುಡ್ನಲ್ಲಿ ಸ್ನೇಹಿತರಿದ್ದು. ದೇಶ ವಿದೇಶಗಳಲ್ಲಿ ಸ್ನೇಹಿತರನ್ನು ಸಂಪಾದಿಸಿದ್ದರು. ಸಿಕ್ಕಾಪಟ್ಟೆ ಜಾಲಿಯಾಗಿ ಜೀವನ ಸಾಗಿಸಿದರು. ತಮ್ಮ ನೇರ ನಡಡೆ ನುಡಿಯಿಂದ ಎಲ್ಲರಿಗೂ ಹತ್ತಿರವಾಗಿದ್ದರು.


Click it and Unblock the Notifications











