ವರ್ಷ ಕಳೆಯಿತು, ಅಂಬಿ ಸ್ಮಾರಕ ವಿಚಾರ ಏನಾಯ್ತು? ಸುಮಲತಾ ಹೇಳಿದ್ದೇನು?
ರೆಬೆಲ್ ಸ್ಟಾರ್ ಅಂಬರೀಶ್ ಇಲ್ಲದ ಒಂದು ವರ್ಷ ಕಳೆಯಿತು. ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸಮಾಧಿ ಆದ್ಮೇಲೆ ಅಲ್ಲೆ ಸ್ಮಾರಕ ನಿರ್ಮಿಸುವ ಕುರಿತು ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದರು.
ಬಹುಶಃ, ಆದಷ್ಟೂ ಬೇಗ ಅಂಬರೀಶ್ ಸ್ಮಾರಕ ನಿರ್ಮಾಣವಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದ್ರೀಗ, ಒಂದು ವರ್ಷದಲ್ಲಿ ಏನೇನೊ ರಾಜಕೀಯ ಬೆಳವಣಿಗೆ ಆಗೋಗಿದೆ. ಮಿತ್ರರಾಗಿದ್ದವರು ಶತ್ರುಗಳಂತೆ ಆದರು. ಸರ್ಕಾರವೇ ಬದಲಾಗಿದೆ. ಕುಮಾರಸ್ವಾಮಿ ಹೋಗಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ.
ಇದೆಲ್ಲದರ ನಡುವೆ ಅಂಬರೀಶ್ ಸ್ಮಾರಕ ವಿಚಾರ ಏನ್ ಆಯ್ತೋ ಎಂಬುದು ಈಗ ಕುತೂಹಲ ಮೂಡಿಸಿದೆ. ಈ ಕುರಿತು ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿ ಮಾಹಿತಿ ನೀಡಿದ್ದಾರೆ.

''ರಾಜ್ಯ ಸರ್ಕಾರ ಬದಲಾದ ಕಾರಣ ಸ್ಮಾರಕ ಕೆಲಸ ವಿಳಂಬ ಆಗುತ್ತಿದೆ. ಫಿಲಂ ಚೇಂಬರ್ ಮೂಲಕ ಈಗಿನ ರಾಜ್ಯ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಲು ತೀರ್ಮಾನಿಸಲಾಗಿದೆ. ಆದಷ್ಟೂ ಬೇಗ ಕೆಲಸ ಆರಂಭವಾಗುತ್ತೆ'' ಎಂದು ಸುಮಲತಾ ತಿಳಿಸಿದರು.
ಇದೇ ವಿಚಾರವಾಗಿ ಮಾತನಾಡಿದ ನಿರ್ಮಾಪಕ ಹಾಗೂ ಅಂಬರೀಶ್ ಕುಟುಂಬದ ಆಪ್ತ ರಾಕ್ ಲೈನ್ ವೆಂಕಟೇಶ್ ''ಈಗಾಗಲೇ ಸ್ಮಾರಕ ಕೆಲಸ ಆರಂಭವಾಗಿದೆ. ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ. ವಾರ್ತಾ ಮತ್ತು ಪ್ರಸರಣಾ ಇಲಾಖೆಯಿಂದ ಸಮ್ಮತಿ ಸಿಕ್ಕಿದೆ. ಈಗ ಟ್ರಸ್ಟ್ ಆಗಬೇಕಿದೆ. ಆ ಟ್ರಸ್ಟ್ ಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರ್ತಾರೆ. ಸುಮಲತಾ, ಅಭಿಷೇಕ್ ಇರ್ತಾರೆ. ಚಿತ್ರರಂಗದ ಪರವಾಗಿ ನಾವು ಇರ್ತೀವಿ. ಮೊದಲು ಟ್ರಸ್ಟ್ ನಲ್ಲಿ ಈ ಬಗ್ಗೆ ತೀರ್ಮಾನ ಆಗಬೇಕು. ಯಾವ ರೀತಿ ನಿರ್ಮಿಸಬೇಕು, ಏನೆಲ್ಲ ಬೇಕು, ಎಷ್ಟು ಬಜೆಟ್ ಎಂದು ನಿರ್ಧರಿಸಿದ ಮೇಲೆ ಅದಕ್ಕೆ ಅನುಮತಿ ಸಿಗಬೇಕು. ಇದಕ್ಕೆಲ್ಲ ವರ್ಷದ ಮೇಲೆ ಆಗುತ್ತೆ'' ಎಂದಿದ್ದಾರೆ.
ರಾಕ್ ಲೈನ್ ವೆಂಕಟೇಶ್ ಅವರು ಹೇಳಿರುವುದನ್ನ ಗಮನಿಸದರೆ, ಅಂಬರೀಶ್ ಸ್ಮಾರಕ ಕೆಲಸ ಆರಂಭ ಸದ್ಯಕ್ಕಿಲ್ಲ. ಸರ್ಕಾರ ಹಾಗೂ ಟ್ರಸ್ಟ್ ಕೆಲಸ ಮುಗಿದ ಮೇಲೆ ಹಾದಿ ಸುಮಗವಾಗಲಿದೆ.


Click it and Unblock the Notifications











