ಆ ಅಂಬರೀಶ್ ಎಲ್ಲಿ ? ಈ ಅಂಬರೀಶ್ ಎಲ್ಲಿ !
\ರೆಬೆಲ್ ಸ್ಟಾರ್ ಅಂಬರೀಶ್ ಸ್ವಲ್ಪ ದಪ್ಪ ಆಗಿದ್ದಾರೆ ಎಂದು ನಾವೆಂದರೆ, ಸ್ವಲ್ಪನಾ ? ರೀ... ತುಂಬಾ ದಪ್ಪ ಆಗಿದ್ದಾರೆ ಎಂದು ದಿಗ್ಗಜರು ಚಿತ್ರ ನೋಡಿದ ಅಂಬರೀಶ್ ಅಭಿಮಾನಿಗಳೇ ಹೇಳಿದ್ದಾರೆ. ಆದರೆ, ಇನ್ನು ಒಂದೆರಡು ತಿಂಗಳಲ್ಲೇ ತೆರೆ ಕಾಣಲು ಸಿದ್ಧವಾಗುತ್ತಿರುವ ಪ್ರೇಮರಾಜ್ಯದಲ್ಲಿ ತಮ್ಮ ಹಿಂದಿನ ಸ್ಟ್ಯಾಂಡರ್ಡ್ ಪರ್ಸನಾಲಿಟಿಯ ಅಂಬರೀಶ್ರನ್ನು ಕಾಣುವ ಭಾಗ್ಯ ಅವರ ಅಭಿಮಾನಿಗಳಿಗೆ ದೊರಕಲಿದೆ. ವಾಟ್ ಎ ಗ್ರೇಟ್ ಛಾನ್ಸ್ !
ಏನು ಏಕಾಏಕಿ ಅಂಬರೀಶ್ ಅಷ್ಟೊಂದು ಸಣ್ಣ ಆಗಿ ಹೋದರೆ ? ಎಂದು ಪ್ರಶ್ನಿಸುತ್ತಿದ್ದೀರಾ.. ಹೌದು ಈ ಚಿತ್ರದಲ್ಲಿ ಮಾತ್ರ ಅಂಬರೀಶ್ ತಮ್ಮ ಹಿಂದಿನ ಸುಂದರ ಮೈಕಟ್ಟಿನೊಂದಿಗೇ ಕಾಣಿಸಿಕೊಳ್ಳುತ್ತಾರೆ. ಕಾರಣ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು ವರ್ಷಗಳೇ ಉರುಳಿವೆ. ಇದರ ನಾಯಕಿ ಚಳಿ ಚಳಿ ತಾಳೆನು ಈ ಚಳಿಯ ಎಂದು ಪ್ರೇಕ್ಷಕರ ಮೈ ನಡುಗಿಸಿದ ನಟಿ ಅಂಬಿಕಾ ಸೋದರಿ ಹಾಗೂ ಸುಂದರಿ ರಾಧ.
ರಾಧಾಗೂ ಈಗ ಮದುವೆ ಆಗಿದೆ. ಮದುವೆ ಮಾಡಿಕೊಂಡು ಮನೆಯ ಹೂಡಿಕೊಂಡು, ಪತಿಯ ಜೊತೆ ಇರಲು ರಾಧಾ ಮುಂಬೈಗೆ ಹೋಗಿದ್ದರು. ಈಗ ಮತ್ತೆ ವಾಪಸಾಗಿದ್ದಾರೆ. ಚಲನಚಿತ್ರಗಳಲ್ಲೂ ನಟಿಸುತ್ತೇನೆ ಎಂದಿದ್ದಾರೆ. (ಅವಕಾಶ ಸಿಗಬೇಕು ಅಷ್ಟೇ). ಈ ಮಧ್ಯೆ ನಾನಾ ಒಳ ರಾಜಕೀಯದಿಂದ, ವಿವಾದಗಳಿಂದ ನಿಂತು ಹೋಗಿದ್ದ ಈ ಚಿತ್ರ ಮತ್ತೆ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಮನೆಯನ್ನೂ ಹೊಕ್ಕಿದೆ.
ಮೌನಗೀತೆ, ಅವತಾರ ಪುರುಷ, ಜಗದೇಕವೀರ ಮೊದಲಾದ ಚಿತ್ರ ನಿರ್ಮಿಸಿದ ನಿರ್ಮಾಪಕರಲ್ಲೊಬ್ಬರಾದ ಎನ್. ವೆಂಕಟೇಶ್ ಅಕ್ಷಯ ಸಿನಿ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಿಸಲು ಹೊರಟು ಹತ್ತಿರ ಹತ್ತಿರ ನಾಲ್ಕಾರು ವರ್ಷಗಳೇ ಆದವು. ಕೆ.ವಿ. ರಾಜು ಈ ಚಿತ್ರದ ನಿರ್ದೇಶಕರು.
ಈಗ ಮಲ್ಟಿ ಸ್ಟಾರ್ಗಳ ಈ ಚಿತ್ರ ಅದೂ ಬೃಹತ್ ಬ್ಯಾನರ್ನಡಿಯಲ್ಲಿ ನಿಂತು ಹೋಗಬಾರದೆಂಬ ಕಾರಣಕ್ಕೆ ಪುನರ್ಚಾಲನೆ ಪಡೆದಿದೆ. ಅಳಿದುಳಿದ ದೃಶ್ಯಗಳ ಚಿತ್ರೀಕರಣವನ್ನು ಯುವ ನಿರ್ದೇಶಕ ವಿ.ಆರ್. ಭಾಸ್ಕರ್ ಪೂರ್ಣಗೊಳಿಸಿದ್ದಾರೆ.
ಇದೇ ತಿಂಗಳ 5ರಿಂದ ಪ್ರಸಾದ್ ಧ್ವನಿಗ್ರಹಣ ಕೇಂದ್ರದಲ್ಲಿ ರೀರಿಕಾರ್ಡಿಂಗ್ ಕಾರ್ಯ ಸಾಗಲಿದೆ. ಹಂಸಲೇಖರ ಸಂಗೀತ, ಸಾಹಿತ್ಯ, ಜೆ.ಜಿ.ಕೃಷ್ಣರ ಛಾಯಾಗ್ರಹಣ, ಸತೀಶ್ ನೃತ್ಯ ಸಂಯೋಜನೆ, ಜ್ಯೋಡೋ ರತ್ನಂ - ಸುರೇಶ್ ಸಾಹಸ ಇರುವ ಚಿತ್ರದಲ್ಲಿ ಹೆಸರಿಗೆ ತಕ್ಕಂತೆ ಇರುವ ದೊಡ್ಡಣ್ಣ ಇದ್ದಾರೆ. ಒಂದು ವಿಶೇಷ ಎಂದರೆ, ಈ ಚಿತ್ರದಲ್ಲಿ ದೊಡ್ಡಣ್ಣ ಸಣ್ಣಣ್ಣನಾಗಿ ನಿಮಗೆ ಕಂಡರೂ ಅಚ್ಚರಿ ಇಲ್ಲ.
ತಾರಾಬಳಗದಲ್ಲಿ ಅಂಬರೀಶ್, ರಾಧಾ, ದೇವರಾಜ್, ಜಗ್ಗೇಶ್, ದೊಡ್ಡಣ್ಣ, ಲೋಹಿತಾಶ್ವ, ಅವಿನಾಶ್, ಡಿಸ್ಕೋಶಾಂತಿ ಮೊದಲಾದವರು ಇದ್ದಾರೆ. ಮತ್ತೆ ಚಿತ್ರರಂಗ ಪ್ರವೇಶಿಸುವ ಹಾದಿಯಲ್ಲಿರುವ ರಾಧಾಗೆ ಈ ಚಿತ್ರ ಬ್ರೇಕ್ನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕು.


Click it and Unblock the Notifications