Exclusive: ಅವತ್ತು ನಾವು ಪ್ರಯಾಣಿಸುತ್ತಿದ್ದ ವಿಮಾನ ಗದ್ದೆಗೆ ಇಳಿದಿತ್ತು.. ಜೀವ ಬಾಯಿಗೆ ಬಂದಿತ್ತು"; ಮಾಲಾಶ್ರೀ
ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ದುರಂತ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಜಗತ್ತು ಕಂಡ ಅತಿದೊಡ್ಡ ದುರಂತ ಇದಾಗಿದ್ದು 270 ಜನ ಸಾವನ್ನಪ್ಪಿದ್ದಾರೆ. ರಮೇಶ್ ವಿಶ್ವಾಸ್ ಕುಮಾರ್ ಎಂಬುವವರು ಮಾತ್ರ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬದುಕುಳಿದಿದ್ದಾರೆ. 1993ರಲ್ಲಿ 270 ಪ್ರಯಾಣಿಕರಿದ್ದ ಇಂಡಿಯನ್ ಏರ್ಲೈನ್ಸ್ ಫ್ಲೈಟ್ IC-440, ಏರ್ಬಸ್ A300-B2 ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿ ಭಾರೀ ಅವಘಡ ತಪ್ಪಿತ್ತು.
ಬಹುತೇಕರಿಗೆ ಈ ಘಟನೆಗೆ ಬಗ್ಗೆ ಗೊತ್ತಿಲ್ಲ. ಅಂದು ಚೆನ್ನೈನಿಂದ ಹೈದರಾಬಾದ್ಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿತ್ತು. ಪೈಲೆಟ್ ಚಾಕಚಕ್ಯತೆಯಿಂದ ಅಂದು ಭಾರೀ ದುರಂತ ತಪ್ಪಿ ನೂರಾರು ಜನರ ಪ್ರಾಣ ಉಳಿದಿತ್ತು. ಅಂದು ಆ ವಿಮಾನದಲ್ಲಿ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ಬಾಲಕೃಷ್ಣ, ವಿಜಯಶಾಂತಿ ಹಾಗೂ ಬ್ರಹ್ಮಾನಂದಂ ಸೇರಿದಂತೆ ಹಲವರು ಫ್ಯಾಮಿಲಿ ಸಮೇತ ಪ್ರಯಾಣಿಸುತ್ತಿದ್ದರು. ಎಲ್ಲರಿಗೂ ಅದು ಮರುಹುಟ್ಟು ಆಗಿತ್ತು. ಅಂದು ವಿಮಾನದಲ್ಲಿ ಬಹುಭಾಷಾ ನಟಿ ಮಾಲಾಶ್ರೀ ಕೂಡ ಇದ್ದರು. ಆ ದುಸ್ವಪ್ನದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾಲಾಶ್ರೀ ಮಾತನಾಡಿದ್ದಾರೆ.

ಆಗ ಇನ್ನು ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರರಂಗ ಮದ್ರಾಸ್ನಲ್ಲೇ ನೆಲೆಸಿತ್ತು. ಕಲಾವಿದರು, ತಂತ್ರಜ್ಞರೆಲ್ಲಾ ಅಲ್ಲೇ ಮನೆ ಮಾಡಿ ಫ್ಯಾಮಿಲಿ ಸಮೇತ ವಾಸಿಸುತ್ತಿದ್ದರು. ತೆಲುಗು ಸಿನಿಮಾ ಕಲಾವಿದರೆಲ್ಲಾ ಮದ್ರಾಸ್ನಲ್ಲಿ ದೀಪಾವಳಿ ಆಚರಿಸಲು ಹೋಗಿದ್ದರು. ಬಳಿಕ ಎಲ್ಲರೂ ಒಟ್ಟಿಗೆ ಒಂದೇ ವಿಮಾನದಲ್ಲಿ ಹೈದರಾಬಾದ್ ಕಡೆ ಹೊರಟ್ಟಿದ್ದರು. ಬೆಳಗ್ಗೆ 6 ಗಂಟೆಗೆ ಎಲ್ಲರೂ ಫ್ಲೈಟ್ ಏರಿದ್ದರು. ಒಟ್ಟು 270 ಜನ ವಿಮಾನದಲ್ಲಿದ್ದರು. ವಿಮಾನ ಹೈದರಾಬಾದ್ನಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಿರಲಿಲ್ಲ. ತಾಂತ್ರಿಕ ದೋಷದಿಂದ ವಿಮಾನದ ಸಿಬ್ಬಂದಿ ಭಯಭೀತರಾಗಿ ಒಳಗೆ ಓಡಾಡಲು ಆರಂಭಿಸಿದ್ದರು.
ಎಮರ್ಜೆನ್ಸಿ ಲ್ಯಾಂಡಿಂಗ್ ಎಂದು ಪೈಲೆಟ್ ಅನೌನ್ಸ್ ಮಾಡಿದ್ದರು. ಒಳಗಿದ್ದ ಎಲ್ಲರಿಗೂ ಭಯವಾಗಿತ್ತು. ಬಳಿಕ ಕೆಲ ಹೊತ್ತು ವಿಮಾನ ಆಗಸದಲ್ಲಿ ಸುತ್ತಾಡಿತು. ತಾಂತ್ರಿಕ ಸಮಸ್ಯೆಗಳು ಮತ್ತು ತೀವ್ರ ಇಂಧನ ಕೊರತೆಯಿಂದಾಗಿ, ಕ್ಯಾಪ್ಟನ್ ಭಲ್ಲಾ ಅವರು ವೆಂಕಟಗಿರಿ ಗ್ರಾಮದ ಬಳಿಯ ಗದ್ದೆಯಲ್ಲಿ ಬೆಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರು. ಪವಾಡಸದೃಶವಾಗಿ, ವಿಮಾನದಲ್ಲಿದ್ದ ಎಲ್ಲಾ 262 ಜನರು ತುರ್ತು ಲ್ಯಾಂಡಿಂಗ್ನಲ್ಲಿ ಬದುಕುಳಿದರು. ಅದೃಷ್ಟವಶಾತ್ ಯಾರಿಗೂ ಏನೂ ಆಗಿರಲಿಲ್ಲ. ಗದ್ದೆಯಲ್ಲಿ ಇಳಿದು ಕೆಸರಾದ ಬಟ್ಟೆಗಳಲ್ಲೇ ಅಲ್ಲಿಗೆ ಕಾರು ಕರೆಸಿಕೊಂಡು ಎಲ್ಲರೂ ಹೊರಟು ಬಂದಿದ್ದರು. ಹಳ್ಳಿಯ ಜನ ದಿಢೀರನೆ ಸಿನಿಮಾ ಕಲಾವಿದರನ್ನು ನೋಡಿ ಶಾಕ್ ಆಗಿದ್ದರು. ಈ ಘಟನೆಯನ್ನು ಅಂದು ಫ್ಲೈಟ್ನಲ್ಲಿ ಇದ್ದ ಯಾರೊಬ್ಬರು ಇಂದಿಗೂ ಮರೆತ್ತಿಲ್ಲ. ಇವತ್ತಿಗೂ ವಿಮಾನ ಏರುವಾಗ ಆ ಕಹಿ ಘಟನೆ ನೆನಪಿಸಿಕೊಳ್ಳುತ್ತಾರೆ.

ಆ ಆತಂಕದ ಕ್ಷಣಗಳನ್ನು ನಟಿ ಮಾಲಾಶ್ರೀ ನೆನಪು ಮಾಡಿಕೊಂಡಿದ್ದಾರೆ. "ಅವತ್ತು ಇಡೀ ತೆಲುಗು ಚಿತ್ರರಂಗ ಫ್ಲೈಟ್ನಲ್ಲಿ ಇತ್ತು. ನಾವು ದೀಪಾವಳಿ ಆಚರಿಸಲು ಚೆನ್ನೈಗೆ ಬಂದು ಹೈದರಾಬಾದ್ಗೆ ವಾಪಸ್ ಹೋಗುತ್ತಿದ್ದೆವು. ಚಿರು, ಬಾಲಯ್ಯ, ವಿಜಯಶಾಂತಿ ಎಲ್ಲರೂ ಫ್ಯಾಮಿಲಿ ಸಮೇತ ವಿಮಾನದಲ್ಲಿದ್ದೆವು. ಮೊದಲಿಗೆ ಏನು ಹೇಳಲಿಲ್ಲ. ಬಳಿಕ ಹವಮಾನ ಸಮಸ್ಯೆ ಕಾರಣ ಮತ್ತೆ ವಿಮಾನ ಚೆನ್ನೈಗೆ ಹೋಗುತ್ತದೆ ಎಂದು ಅನೌನ್ಸ್ ಮಾಡಿದರು" ಎಂದು ಆ ಘಟನೆಯನ್ನು ಮೆಲುಕು ಹಾಕಿದ್ಧಾರೆ.
ನಾನು ನಿದ್ದೆಯಲ್ಲಿದೆ. ಬಳಿಕ ಬಹಳ ಹೊತ್ತು ವಿಮಾನವನ್ನು ಆಗಸದಲ್ಲಿ ಸುತ್ತಾಡಿಸಿದರು. ಬಳಿಕ ದಿಢೀರನೆ ಎಮರ್ಜೆನ್ಸಿ ಲ್ಯಾಂಡಿಂಗ್ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದರು. ನಾವು ಎಲ್ಲೋ ನೆಲದ ಮೇಲೆ ಇಳಿಸುತ್ತಾರೆ ಎಂದುಕೊಂಡೆವು. ಕೊನೆಗೆ ಗದ್ದೆಯ ಮೇಲೆ ಇಳಿಸಿದ್ದರು. ಪುಣ್ಯಕ್ಕೆ ಏನು ಆಗಲಿಲ್ಲ. ಇವತ್ತಿಗೂ ಅದಕ್ಕೆ ಕಾರಣ ಏನು ಎಂದು ಯಾರನ್ನು ಕೇಳಲಿಲ್ಲ ಎಂದು ಮಾಲಾಶ್ರೀ ವಿವರಿಸಿದ್ದಾರೆ.
"ಮತ್ತೆ ವಿಮಾನ ಏರುವಾಗ ಭಯವಾಗುತ್ತದೆ ಎನ್ನುವ ಕಾರಣಕ್ಕೆ ನಾನು ಆ ಘಟನೆ ಬಗ್ಗೆ ಹೆಚ್ಚು ಯಾರೊಟ್ಟಿಗೂ ಮಾತನಾಡಲಿಲ್ಲ. ಹೆಚ್ಚು ತಿಳಿದುಕೊಳ್ಳಲು ಹೋಗಲಿಲ್ಲ. ಆ ಘಟನೆ ಬಳಿಕ ವಿಮಾನದಲ್ಲಿ ಓಡಾಡಲು ಭಯವಾಗುತ್ತದೆ. ಟೇಕಾಫ್ ಹಾಗೂ ಲ್ಯಾಂಡಿಂಗ್ ವೇಳೆ ಎಲ್ಲಾ ದೇವರನ್ನು ಪ್ರಾರ್ಥಿಸುತ್ತೇನೆ. ಅವತ್ತು ವಿಮಾನದಿಂದ ಇಳಿದು ಹೊರ ಬಂದಾಗ ಜೀವ ಉಳಿಯಿತು ಎಂದು ಕಣ್ಣಲ್ಲಿ ನೀರು ಬಂದಿತ್ತು. ಕ್ಯಾಪ್ಟನ್ ಭಲ್ಲಾ ಅವರು ಬಹಳ ಶ್ರಮವಹಿಸಿ ನಮ್ಮನ್ನೆಲ್ಲಾ ರಕ್ಷಿಸಿದ್ದರು. ಕ್ಯಾಪ್ಟನ್ಗೆ ಧನ್ಯವಾದ ಸಲ್ಲಿಸಲು ಒಂದು ಕಾರ್ಯಕ್ರಮ ಆಯೋಜಿಸಿದ್ದೆವು. ಇಂಧನವನ್ನೆಲ್ಲಾ ಖಾಲಿ ಮಾಡಿ ಬಳಿಕ ವಿಮಾನ ಬ್ಲಾಸ್ಟ್ ಆಗದಂತೆ ಕರಾರುವಕ್ಕಾಗಿ ಇಳಿಯುವಂತೆ ಮಾಡಿದ್ದರು" ಎಂದು ಕ್ಯಾಪ್ಟನ್ ಭಲ್ಲಾ ಅವರ ಬಗ್ಗೆ ಮಾಲಾಶ್ರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಅಹಮದಾಬಾದ್ ವಿಮಾನ ದುರಂತ, ನಟಿ ಸೌಂದರ್ಯ ಏರ್ಕ್ರಾಫ್ಟ್ ಅವಘಡ ಎಲ್ಲಾ ನೆನಪಿಸಿಕೊಂಡು ಭಟಯವಾಗುತ್ತದೆ. ಅದನ್ನೆಲ್ಲಾ ನೆನಪಿಸಿಕೊಂಡರೆ ಮೈ ಜುಮ್ ಎನಿಸುತ್ತದೆ. ಅವತ್ತು ಇಡೀ ತೆಲುಗು ಚಿತ್ರರಂಗ ಫ್ಲೈಟ್ನಲ್ಲಿ ಇತ್ತಲ್ಲಪ್ಪಾ? ಎಂದು ಒಂದು ಕ್ಷಣ ಶಾಕ್ ಆಗಿಬಿಟ್ಟಿತ್ತು ಎಂದು ನಟಿ ಮಾಲಾಶ್ರೀ ಸಂಗತಿಯನ್ನು ನೆನಪು ಮಾಡಿಕೊಂಡಿದ್ದಾರೆ.


Click it and Unblock the Notifications











