ಕನ್ನಡಿಗನೋ, ತಮಿಳಿಗನೋ, ಹಿಂದೂನೋ, ಮುಸಲ್ಮಾನನೋ ; ಮೊದಲು ಮಾನವತೆಯನ್ನು ಮೆರೆದು ಮನುಷ್ಯನಾಗಬೇಕಿದೆ- ಕಿಶೋರ್..!
ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ ಕನ್ನಡ ಚಿತ್ರರಂಗದ 'ಹುಲಿ' ಕಿಶೋರ್ ಇದಕ್ಕೆ ತದ್ವಿರುದ್ಧ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ..
ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್ ಮೊನ್ನೆ ಕಮಲ್ ಹಾಸನ್ ವಿವಾದದ ಬಗ್ಗೆ ಮಾತನಾಡಿದ್ದರು. ಕಮಲ್ ಹಾಸನ್ ಅವರ ಹೇಳಿಕೆಯನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು ? ಎಂದು ಪ್ರಶ್ನೆ ಮಾಡಿದ್ದರು. ಕಮಲ್ ಹಾಸನ್ ತುಂಬಾ ತಿಳಿದಂತಹ ವ್ಯಕ್ತಿ. ಅಂತಹ ವ್ಯಕ್ತಿ ಏನಾದರು ಒಂದು ಹೇಳಿದ್ದಾರೆ ಅಂದರೆ ಅದಕ್ಕೆ ತರ್ಕ ಇರಬಹುದು, ಏನೋ ಅರ್ಥ ಇರಬಹುದು, ಅದೇನು ಎನ್ನುವುದನ್ನು ನಾವು ಪ್ರಶ್ನೆ ಮಾಡಿ ತಿಳಿದುಕೊಳ್ಳಬೇಕು ಎಂದು ಹೇಳಿದ್ದರು.

ನಿರೀಕ್ಷೆಯಂತೆ ಕಿಶೋರ್ ಅವರ ಈ ಮಾತುಗಳಿಗೆ ಆಕ್ರೋಶ ವ್ಯಕ್ತವಾಯಿತು. ಕಮಲ್ ಹಾಸನ್ ಅವರ ಹೇಳಿಕೆಯನ್ನು ಕಿಶೋರ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕಿಶೋರ್ ಸ್ಪಷ್ಟನೆಯನ್ನು ನೀಡಿದ್ಧಾರೆ. ನಾನು ಯಾರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿಲ್ಲ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹಾಗಿದ್ದರೆ ಕಿಶೋರ್ ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ
ದೇಶ, ಧರ್ಮ, ಜಾತಿ, ಭಾಷೆಗಳ ಈ ಅಪಾಯಕಾರಿ ಅತಿ ಭಾವುಕತೆಯ ರಾಜಕೀಯ
ನಾನು ಯಾರ ಹೇಳಿಕೆಯನ್ನೂ ಸಮರ್ಥಿಸುತ್ತಿಲ್ಲ (ಕೆಲವು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ಹಾಗೆ) .. ಹಾಗೇ ನನ್ನ ಭಾಷೆ, ಮತ್ತದರ ಪರಂಪರೆ ಯಾರ ಹೇಳಿಕೆಯಿಂದಲೂ ಅವಮಾನಿತವಾಗಿಬಿಡುವಷ್ಟು ದುರ್ಬಲವೂ ಅಲ್ಲ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ.
ನಿಜ ನಮ್ಮ ಮಾತುಗಳ ಪರಿಣಾಮದ ಅರಿವೂ ನಮಗಿರಬೇಕಾದುದು ಬಹಳ ಮುಖ್ಯ. ಆದರೆ ಇನ್ನೊಬ್ಬರ ಅಭಿಪ್ರಾಯ ನಮ್ಮ ಕೈಯೊಳಗಿಲ್ಲ.. ಹಾಗಿರುವಾಗ ನಾನು ಹುಡುಕುವುದು ನಮ್ಮ ಹಿಡಿತದಲ್ಲಿರುವ ನಮ್ಮ ಪ್ರತಿಕ್ರಿಯೆಯನ್ನು ಸಾಧ್ಯವಾದಷ್ಟು ಸಂಯಮಭರಿತ ಮತ್ತು ಆರೋಗ್ಯಕರವಾಗಿಸಬಲ್ಲ ಸಾಧ್ಯತೆಗಳನ್ನಷ್ಟೆ.
ದ್ರಾವಿಡರು ಮತ್ತು ದ್ರಾವಿಡ ಭಾಷೆಗಳು ಈಗಾಗಲೇ ಬಂಡವಾಳಶಾಹಿ, ಹಿಂದಿ ಹೇರಿಕೆ, ವಲಸೆ, ಡಿಲಿಮಿಟೇಶನ್ ನಂತಹ ಉಳಿವಿನ ಹಲವಾರು ಸಮಸ್ಯೆಗಳನ್ನೆದುರಿಸುತ್ತಿರುವಾಗ ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುವ ಪರಿಸ್ಥಿತಿ ಬರದಂತೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
ಇಂಥ ಪರಿಸ್ಥಿತಿಯಲ್ಲಿ ಸ್ಥಳೀಯ ಭಾಷೆಗಳಲ್ಲವೂ ಮೇಲು ಕೀಳು ಭಾವನೆಯನ್ನು ತೊಲಗಿಸಿ ಸರಿಸಮ ನಿಂತು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಒಗ್ಗೂಡಬೇಕು.
ಇಂದು ಇಡೀ ದೇಶ, ಒಡೆದಾಳುವ ದ್ವೇಷದ ರಾಜಕಾರಣದ ಬಲಿಪಶುವಾಗಿದೆ. ನಮ್ಮ ಅತಿಭಾವುಕತೆಯನ್ನು ಬಳಸಿ ದೇಶ, ಧರ್ಮ, ಜಾತಿಗಳ ನಡುವೆ ಕಿಚ್ಚೆಬ್ಬಿಸಿ, ಕ್ರೌರ್ಯ ಹಿಂಸೆಗಳಿಗೆ ಜನರನ್ನು ದೂಡಿ, ಜನರ ನೆಮ್ಮದಿ ಕೆಡಿಸಿ, ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುತ್ತಿರುವುದು ಕಣ್ಣೆದುರೇ ಇರುವಾಗ ಭಾಷೆಯನ್ನೂ ಆ ರಾಜಕೀಯಕ್ಕೆ ಸಿಲುಕಿಸಬೇಕೆ?
ಕನ್ನಡಿಗರು ಶಾಂತಿಪ್ರಿಯರು, ಸಹೃದಯರು.. ಭಾವೋದ್ರೇಕಕ್ಕೆ ಆಸ್ಪದ ಕೊಡದೆ ಶಾಂತಿಯ, ಪ್ರೀತಿಯ ಮಾತಾಡಿದ ಕನ್ನಡ ಕಲಾಪ್ರತಿನಿಧಿ ಶಿವಣ್ಣನವರನ್ನು ಆಧಾರವಿಲ್ಲದೇ ದೂಷಿಸುವ ಬದಲು, ಸಾವಿರಾರು ಜನರ ಹೊಟ್ಟೆಪಾಡಿನ ಕೆಲಸವಾದ ಸಿನಿಮಾ ವಿರುದ್ಧ ಬಂಡೇಳುವ ಬದಲು, ದೇಶ ಕಂಡ ಅದ್ಭುತ ಪ್ರತಿಭೆ, ಇದುವರೆವಿಗೂ ತನ್ನ ಕೆಲಸಗಳ ಮೂಲಕ ಸಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ನಿಂತ ಕಮಲ್ ಹಾಸನ್ ಅವರನ್ನು ಇಷ್ಟೂ ದಿನ ಅಪರಿಮಿತ ಗೌರವದಿಂದ ಕಂಡ ನಾವು ಈಗಲೂ ಸಂಯಮದಿಂದ ವರ್ತಿಸಿ ಅವರ ಹೇಳಿಕೆ ಕನ್ನಡಕ್ಕೆ ಅಗೌರವ ತೋರುವ ಉದ್ದೇಶದಿಂದಲ್ಲವೆಂದು ನಂಬಿ ಆರೋಗ್ಯಕರ ಪ್ರಶ್ನೆ, ಚರ್ಚೆಗಳ ಮೂಲಕ ಅವರ ಹೇಳಿಕೆಯ ಹಿಂದಿನ ಆಧಾರವನ್ನು ತರ್ಕವನ್ನು ತಿಳಿದು ಸತ್ಯವನ್ನು ಆಧಾರಸಹಿತ ಮನದಟ್ಟು ಮಾಡಿಸಿ, ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸಿಕೊಂಡು ದ್ರಾವಿಡ ಭಾಷೆಗಳ ನಡುವಿನ ಶಾಂತಿ ಸೌಹಾರ್ದ ಭ್ರಾತೃತ್ವವನ್ನು ಮೆರೆಯಬೇಕಿದೆ.
ಇಂದು ನಾನು ಕನ್ನಡಿಗನೊ ತಮಿಳನೊ, ಒಕ್ಕಲಿಗನೊ ಬ್ರಾಹ್ಮಣನೊ, ಹಿಂದುವೊ ಮುಸಲ್ಮಾನನೊ, ಭಾರತೀಯನೊ ವಿದೇಶೀಯನೊ ಆಗುವ ಮೊದಲು ಮಾನವತೆಯನ್ನು ಮೆರೆದು ಮನುಷ್ಯನಾಗಬೇಕಿದೆ. ದೇಶ, ಧರ್ಮ, ಜಾತಿ, ಭಾಷೆಗಳ ಈ ಅಪಾಯಕಾರಿ ಅತಿ ಭಾವುಕತೆಯ ರಾಜಕೀಯದ ಬಗ್ಗೆ ಎಚ್ಚರದಿಂದಿದ್ದು ವಿಶ್ವದ ಸೋದರ ಸೋದರಿಯರೆಲ್ಲರೂ ಕೈಜೋಡಿಸಿ ಅಭಿವೃದ್ಧಿಯ ಕಡೆ ಸಾಗಬೇಕಿದೆ !


Click it and Unblock the Notifications











