"ಈ ಘಟನೆಯಿಂದ ಮತ್ತಷ್ಟು ಸ್ಟ್ರಾಂಗ್ ಆಗಿದ್ದೇವೆ": ವಿಜಯಲಕ್ಷ್ಮಿ ದರ್ಶನ್ ಹಳೇ ವಿಡಿಯೋ ವೈರಲ್
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ನಟ ದರ್ಶನ್ ನಿರಾಳರಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ಆಗಿದ್ದಾರೆ. ಸದ್ಯ ದರ್ಶನ್ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ವಾಸವಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್ ಫ್ಲಾಟ್ಗೆ ಹೋಗಿದ್ದಾರೆ.
ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಸಂದರ್ಭಗಳಲ್ಲಿ ಪತ್ನಿ ವಿಜಯಲಕ್ಷ್ಮಿ ಬೆಂಬಲವಾಗಿ ನಿಲ್ಲುತ್ತಾ ಬರುತ್ತಿದ್ದಾರೆ. ಈ ಬಾರಿ ಕೊ* ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದರು. ಒಂದ್ಕಡೆ ಕಾನೂನು ಹೋರಾಟ ನಡೆಸುತ್ತಲೇ ಮತ್ತೊಂದು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದರು. ಪತಿಯನ್ನು ಸಂಕಷ್ಟದಿಂದ ಹೊರ ತರಲು ವಿಜಯಲಕ್ಷ್ಮಿ ಪ್ರಯತ್ನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

13 ವರ್ಷಗಳ ಹಿಂದೆ ಕೌಟುಂಬಿಕ ಕಲಹ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು. ಆಗ ಕೂಡ ವಿಜಯಲಕ್ಷ್ಮಿ ಪತಿಯ ಬೆಂಬಲಕ್ಕೆ ನಿಂತಿದ್ದರು. ದೂರು ವಾಪಸ್ ಪಡೆದಿದ್ದರು. ಬಳಿಕ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ದರು. ಅಭಿಮಾನಿಗಳ ಕ್ಷಮೆ ಕೇಳಿದ್ದರು. ಏನೋ ಗೊತ್ತಿಲ್ಲದೇ ಈ ರೀತಿ ಆಗಿಬಿಡ್ತು. ಮತ್ತೆ ಮುಂದೆ ಇದು ಮರುಕಳಿಸಲ್ಲ ಎಂದಿದ್ದರು. 5 ವರ್ಷಗಳ ಬಳಿಕ ಮತ್ತೆ ದಾಂಪತ್ಯದಲ್ಲಿ ಬಿರುಕು ಮೂಡಿದಾಗ ನಟ ಅಂಬರೀಶ್ ಬುದ್ಧಿಮಾತು ಹೇಳಿದ್ದರು.
ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ಗೆ ರಿಲೀಫ್ ಸಿಕ್ಕಿದೆ. ಅನಾರೋಗ್ಯದಿಂದ ಬಳಲುತ್ತಿರುವ ದರ್ಶನ್ ಸದ್ಯಕ್ಕೆ ವಿಶ್ರಾಂತಿ ಪಡೆಯಲಿದ್ದಾರೆ. ಪತ್ನಿ, ಮಗನ ಜೊತೆ ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಉಳಿದುಕೊಂಡಿದ್ದಾರೆ. ಇದೆಲ್ಲದರ ನಡುವೆ ವಿಜಯಲಕ್ಷ್ಮಿ 13 ವರ್ಷಗಳ ಹಿಂದೆ ಮಾತನಾಡಿದ್ದ ವೀಡಿಯೋ ವೈರಲ್ ಆಗುತ್ತಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಬಳಿಕ ಬಿಡುಗಡೆ ಆಗಿದ್ದರು. ಅಂದು ಸುದ್ದಿಗೋಷ್ಠಿ ನಡೆಸಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಮಾತನಾಡಿದ್ದರು. ಆ ಕಹಿ ಘಟನೆ ಬಗ್ಗೆ ವಿಜಯಲಕ್ಷ್ಮಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ದರ್ಶನ್ ಡಿಸ್ಚಾರ್ಜ್ ಬೆನ್ನಲ್ಲೇ ಆ ವೀಡಿಯೋವನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಅಣ್ಣ, ಅತ್ತಿಗೆ ನೀವಿಬ್ಬರು ಮುಂದೆ ಒಟ್ಟಿಗೆ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
"ಇದು ನಮ್ಮ ಜೀವನದ ಕೆಟ್ಟ ಸಮಯ. ಈ ಘಟನೆಯಿಂದ ನಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ನಾನು, ದರ್ಶನ್ ನಮ್ಮ ಮಗ, ನಾವು ಸಂತೋಷದ ಜೀವನ ಕಳೆಯಬೇಕಿದೆ. ಇದು ಕೆಟ್ಟ ಸಮಯ ಅಷ್ಟೆ. ಯಾರು ಅಂದುಕೊಂಡಿರಲ್ಲ ಈ ರೀತಿ ಎಲ್ಲಾ ಆಗುತ್ತೆ ಅಂತ. ಆಗೋಯ್ತು ಅಷ್ಟೆ" ಎಂದು ವಿಜಯಲಕ್ಷ್ಮಿ ದರ್ಶನ್ ಅಂದು ಹೇಳಿದ್ದರು.
"ನಾವು ಅದರಿಂದ ಹೊರ ಬಂದು ಚೆನ್ನಾಗಿ ಬಾಳಿ ಬದುಕಬೇಕು. ನಮಗೆ ಎಲ್ಲರ ಬೆಂಬಲ, ಆಶೀರ್ವಾದ ಬೇಕು. ಒಟ್ಟಾರೆ ದರ್ಶನ್ ಬದಲಾಗಿದ್ದಾರೆ. ಮುಂದೆ ನಿಮಗೆ ಗೊತ್ತಾಗುತ್ತೆ" ಎಂದು ವಿಜಯಲಕ್ಷ್ಮಿ ಮಾತನಾಡಿದ್ದರು. ಸದ್ಯ ಮತ್ತೆ ಅಂತಹದೇ ಸನ್ನಿವೇಶ ನಿರ್ಮಾಣವಾಗಿದ್ದು ಅಭಿಮಾನಿಗಳು ಹಳೇ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ನೀವಿಬ್ಬರು ಒಟ್ಟಿಗೆ ಚೆನ್ನಾಗಿರಿ ಎಂದು ಹಾರೈಸುತ್ತಿದ್ದಾರೆ.
20 ವರ್ಷಗಳ ಹಿಂದೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಮದುವೆ ನಡೆದಿತ್ತು. ಧರ್ಮಸ್ಥಳದ ವಸಂತ್ ಮಹಲ್ ಕಲ್ಯಾಣ ಮಂಟಪದಲ್ಲಿ ಇಬ್ಬರು ಹಸೆಮಣೆ ಏರಿದ್ದರು. ಕನ್ನಡ ಚಿತ್ರರಂಗದ ತಾರೆಯರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು. ದರ್ಶನ್ ಹೀರೊ ಆಗಿ ಚಿತ್ರರಂಗಕ್ಕೆ ಬಂದ ಬೆನ್ನಲ್ಲೇ ಮದುವೆ ನಡೆದಿತ್ತು. ಹಿರಿಯರು ನೋಡಿ ನಿಶ್ಚಯಿಸಿದ್ದ ಮದುವೆ ಅವರದ್ದು. ದಂಪತಿಗೆ ವಿನೀಶ್ ಎಂಬ ಮಗ ಇದ್ದಾನೆ.


Click it and Unblock the Notifications











