"ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತದೆ"; ಸುಮಲತಾ ಪೋಸ್ಟ್ ವೈರಲ್
ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಮೌನಕ್ಕೆ ಜಾರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿರುವ ಬಗ್ಗೆ ಕೂಡ ಈವರೆಗೆ ಪ್ರತಿಕ್ರಿಯಿಸಿಲ್ಲ. ದರ್ಶನ್ ನನ್ನ ದೊಡ್ಡ ಮಗ ಎಂದೇ ಸುಮಲತಾ ಹೇಳುತ್ತಿರುತ್ತಾರೆ. ದರ್ಶನ್ ಸಹ ಮದರ್ ಇಂಡಿಯಾ ಎಂದೇ ಅವರನ್ನು ಕರೆಯುತ್ತಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಜನ ಕಲಾವಿದರು ಇಂದಿಗೂ ಮೌನವಾಗಿಯೇ ಇದ್ದಾರೆ. ಅದರಲ್ಲೂ ದರ್ಶನ್ಗೆ ಬಹಳ ಆಪ್ತರಾಗಿದ್ದವರೇ ಸೈಲೆಂಟ್ ಆಗಿರುವುದು ಚರ್ಚೆಗೆ ಕಾರಣವಾಗಿದೆ. ದರ್ಶನ್ ಬಳಿ ಸಹಾಯ ಪಡೆದವರು ಈಗ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸುವವರು ಇದ್ದಾರೆ. ಸುಮಲತಾ, ಅಭಿಷೇಕ್ ಅಂಬರೀಶ್, ಧನ್ವೀರ್ ಸೇರಿದಂತೆ ಕೆಲವರು ಇನ್ನು ಮಾತನಾಡುವ ಗೋಜಿಗೆ ಹೋಗಲಿಲ್ಲ.

ಮೊದಲಿನಿಂದಲೂ ಅಂಬರೀಶ್ ಹಾಗೂ ತೂಗುದೀಪ ಶ್ರೀನಿವಾಸ್ ಕುಟುಂಬದ ನಡುವೆ ಆತ್ಮೀಯ ಒಡನಾಟವಿದೆ. ದರ್ಶನ್ ನಟನೆಯ 'ಮೆಜೆಸ್ಟಿಕ್' ಚಿತ್ರದ ಮುಹೂರ್ತ ಸಮಾರಂಭದಕ್ಕೂ ಅಂಬಿ ದಂಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬರೀ ಸಿನಿಮಾ ಮಾತ್ರವಲ್ಲ ವೈಯಕ್ತಿಕವಾಗಿಯೂ ದರ್ಶನ್ ಬೆಂಬಲಕ್ಕೆ ಅಂಬರೀಶ್, ಸುಮಲತಾ ನಿಂತಿದ್ದರು. ಸುಮಲತಾ ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ದರ್ಶನ್- ಯಶ್ ಬೆಂಬಲವಾಗಿ ನಿಂತರು. ಪ್ರಚಾರ ಮಾಡಿದ್ದರು.
ಸಂಸದೆಯಾಗಿ ಸುಮಲತಾ ಅಂಬರೀಶ್ ಗೆದ್ದಿದ್ದರಲ್ಲಿ ದರ್ಶನ್ ಪಾಲು ಇದೆ. ಈ ಬಾರಿ ಕೂಡ ಅಮ್ಮ ಚುನಾವಣೆಗೆ ಸ್ಪರ್ಧಿಸಿದರೆ ನಾನು ಜೊತೆಗೆ ನಿಲ್ಲುತ್ತೇನೆ ಎಂದು ದರ್ಶನ್ ಹೇಳಿದ್ದರು. ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ದರ್ಶನ್ "ಅಮ್ಮ ಕಣ್ಮುಚ್ಚಿ ಹಾಳು ಬಾವಿಗೆ ಬೀಳು ಅಂದ್ರು ನಾನು ಬೀಳುತ್ತೇನೆ. ಒಟ್ಟಿನಲ್ಲಿ ಅಮ್ಮ ಏನು ಹೇಳ್ತಾರೋ ಅದನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ನನ್ನ ಮತ್ತು ನನ್ನ ತಮ್ಮನ ಕೆಲಸ. ಅಷ್ಟೊಂದು ಗಾಢವಾದ ಬಾಂಧವ್ಯ ನಮಗೂ ಆ ಮನೆಗೂ ಇದೆ" ಎಂದಿದ್ದರು.
"ಆ ಯಮ ಬಂದು ನನ್ನನ್ನು ಕರೆದರೂ, ಸ್ವಲ್ಪ ಇರಪ್ಪ, ನಮ್ಮ ಅಮ್ಮನ ಕೆಲಸ ಇದೆ. ಅದನ್ನು ಮುಗಿಸಿಯೇ ನಾನು ಬರೋದು.. ಅಂತ ಹೇಳ್ತೇನೆ. ಏಕೆಂದರೆ, ಆ ಮನೆ ನಮಗೆ ಅಷ್ಟು ಕೊಟ್ಟಿದೆ" ಎಂದಿದ್ದರು. ಆದರೆ ದರ್ಶನ್ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು ಸುಮಲತಾ ಮಾತ್ರ ಯಾಕೆ ಮಾತನಾಡುತ್ತಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ಕೊನೆ ಪಕ್ಷ ಸೋಶಿಯಲ್ ಮೀಡಿಯಾದಲ್ಲಾದರೂ ಬೆಂಬಲಿಸಿ ಒಂದು ಪೋಸ್ಟ್ ಹಾಕಬಹುದಿತ್ತಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಸಮಲತಾ ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಯಾವುದೇ ಪೋಸ್ಟ್ ಮಾಡುತ್ತಾರೆ. ಸದ್ಯ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ "ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತದೆ. ಕೇವಲ ನಂಬಿಕೆ ಇರಲಿ" ಎನ್ನುವ ಸಾಲುಗಳನ್ನು ಸುಮಲತಾ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿದ್ದಾರೆ. ನಟ ದರ್ಶನ್ಗೆ ಸಂಕಷ್ಟ ಎದುರಾದ ವಿಚಾರದ ಬಗ್ಗೆ ಪರೋಕ್ಷವಾಗಿ ಸುಮಲತಾ ಈ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಅಂದುಕೊಳ್ಳುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೂನ್ 10ರಂದು ಪೊಲೀಸರು ನಟ ದರ್ಶನ್ ವಶಕ್ಕೆ ಪಡೆದಿದ್ದರು. ಮೈಸೂರಿನ ಸ್ಟಾರ್ ಹೋಟೆಲ್ನಿಂದ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಬಳಿಕ ಪ್ರಕರಣದಲ್ಲಿ ಪವಿತ್ರಾ ಗೌಡ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. 10 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.


Click it and Unblock the Notifications











