Covishield ಲಸಿಕೆಯ ಸೈಡ್ ಎಫೆಕ್ಟ್? ಅಪ್ಪು ಅಂದು ಮಾಡಿದ್ದ ಪೋಸ್ಟ್ ವೈರಲ್
ನಾಲ್ಕು ವರ್ಷಗಳ ಹಿಂದೆ ಪ್ರಪಂಚದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿತ್ತು. ಸಾಕಷ್ಟು ಸಾವು, ನೋವು ಸಂಭವಿಸಿತು. ಕೊರೊನಾ ತಡೆಗಟ್ಟಲು ಸರ್ಕಾರ ಲಸಿಕೆಗಳನ್ನು ಜನರಿಗೆ ಉಚಿತವಾಗಿ ನೀಡಿತ್ತು. ಕೋವಿಡ್ ಶೀಲ್ಡ್, ಕೋವ್ಯಾಕ್ಸಿನ್ ಲಸಿಕೆಯನ್ನು ದೇಶದಲ್ಲಿ ಸಾಕಷ್ಟು ಜನ ಹಾಕಿಸಿಕೊಂಡಿದ್ದರು.
ಸೆಲೆಬ್ರೆಟಿಗಳು, ಬಡವರು, ಶ್ರೀಮಂತರು ಎನ್ನುವ ಭೇದಭಾವ ಇಲ್ಲದೇ ಎಲ್ಲರೂ ಲಸಿಕೆ ಪಡೆದಿದ್ದರು. ಮೊದಲನೇ ಡೋಸ್, ಎರಡನೇ ಡೋಸ್ ಮಾತ್ರವಲ್ಲ ಬೂಸ್ಟರ್ ಡೋಸ್ ಕೂಡ ನೀಡಲಾಗಿತ್ತು. ಆದರೆ ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದು ವರದಿ ಆಗಿತ್ತು. ದಿಢೀರ್ ಸಾವು ಹಾಗೂ ಕೊರೊನಾ ಲಸಿಕೆಯ ನಡುವೆ ಏನೋ ನಂಟಿದೆ ಎನ್ನುವ ಚರ್ಚೆ ಕೂಡ ಆಗಾಗ್ಗೆ ನಡೆಯುತ್ತಿತ್ತು.

ಆಸ್ಟ್ರಾಜೆನಿಕಾ ಕಂಪನಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. ಆ ಲಸಿಕೆಯಿಂದ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ. ಕೋವಿಶೀಲ್ಡ್ ಲಸಿಕೆಯು ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (TTS) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮದ ತೀವ್ರ ಪರಿಣಾಮವನ್ನು ತೋರಿಸುವುದರಿಂದ, ಇದು ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಕಡಿಮೆ ಪ್ಲೇಟ್ಲೆಟ್ ಎಣಿಕೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದೆ.
2021, ಅಕ್ಟೋಬರ್ 29ರಂದು ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಆ ಸಮಯದಲ್ಲಿ ಕೂಡ ಕೋವಿಡ್ ಲಸಿಕೆ ಅಡ್ಡ ಪರಿಣಾಮದಿಂದ ಅಪ್ಪುಗೆ ಹೃದಯಾಘಾತವಾಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಕೋವಿಡ್ ಶೀಲ್ಡ್ ಲಸಿಕೆ ಅಭಿವೃದ್ಧಿಪಡಿಸಿದ ಆಸ್ಟ್ರಾಜೆನಿಕಾ ಕಂಪನಿ ಅದರ ಅಡ್ಡಪರಿಣಾಮದ ಬಗ್ಗೆ ಹೇಳಿರುವುದು ಅಪ್ಪು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಪುನೀತ್ ರಾಜ್ಕುಮಾರ್ ಕೊರೊನಾ ಲಸಿಕೆ ಹಾಕಿಕೊಂಡಿದ್ದು ಮಾತ್ರವಲ್ಲದೇ ಈ ಬಗ್ಗೆ ಜಾಗೃತಿ ಮೂಡಿಸಿದ್ದರು. ಕೊರೊನಾ ಹಾವಳಿ ತಡೆಗಟ್ಟಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆ ವೀಡಿಯೋಗಳನ್ನು ಅಭಿಮಾನಿಗಳು ಈಗ ವೈರಲ್ ಮಾಡುತ್ತಿದ್ದಾರೆ. ಅಪ್ಪು ಲಸಿಕೆ ಪಡೆದ ಬಳಿಕ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
"ಇಂದು ನನ್ನ ಮೊದಲ ಡೋಸ್ ಲಸಿಕೆ ಸಿಕ್ಕಿದೆ. ನೀವು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ನೀವು ಲಸಿಕೆ ಹಾಕಿಸಿಕೊಳ್ಳಬಹುದು" ಎಂದು ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಆ ಟ್ವೀಟ್ ರೀ ಟ್ವೀಟ್ ಮಾಡಿ ಈಗ ವೈರಲ್ ಮಾಡುತ್ತಿದ್ದಾರೆ. ಕೊವಿಡ್ ಲಸಿಕೆ ಪಡೆದಿದ್ದಕ್ಕೆ ಅಪ್ಪು ನಿಧನ ಆಗರಬಹುದು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಟ್ವೀಟ್ಗೆ ಅಭಿಮಾನಿಯೊಬ್ಬರು ಸರ್, ಕೋವಿಶೀಲ್ಡ್ ಲಸಿಕೆ ತಗೋಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಅದು ಒಳ್ಳೆಯದಲ್ಲ ಎಂದು ಅಭಿಮಾನಿಯೊಬ್ಬರು ಮಾಡಿದ್ದ ಕಾಮೆಂಟ್ ಕೂಡ ವೈರಲ್ ಆಗುತ್ತಿದೆ. ಅಂದು ಬೆಳಗ್ಗೆ ವ್ಯಾಯಾಮ ಮಾಡಿದ ಬಳಿಕ ಅಪ್ಪುಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ನಿವಾಸದ ಬಳಿಯಿದ್ದ ರಮಣ ರಾವ್ ಕ್ಲಿನಿಕ್ಗೆ ಹೋಗಿದ್ದರು. ಇಸಿಜಿ ಬಳಿಕ ಹಾರ್ಟ್ ಸ್ಟ್ರೇನ್ ಆಗಿದ್ದು ಗೊತ್ತಾಗಿ ಅಲ್ಲಿಂದ ವೈದ್ಯರು ಪುನೀತ್ ರಾಜ್ಕುಮಾರ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ನಟ ಪುನೀತ್ ರಾಜ್ಕುಮಾರ್ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಎರಡರಲ್ಲಿ ಯಾವ ಲಸಿಕೆ ಪಡೆದಿದ್ದರು ಎನ್ನುವುದು ಗೊತ್ತಿಲ್ಲ. ಆದರೆ ಕೋವಿಶೀಲ್ಡ್ ಅಡ್ಡ ಪರಿಣಾಮದ ಬಗ್ಗೆ ಚರ್ಚೆ ಆಗುತ್ತಿದ್ದಂತೆ ಅಭಿಮಾನಿಗಳು ಇದನ್ನು ಅಪ್ಪು ನಿಧನಕ್ಕೆ ಲಿಂಕ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











