ವೀರಗಾಸೆಗೆ ಅಪಮಾನವಾಗಿದ್ದರೆ ಮರು ಚಿಂತನೆ ನಡೆಸಿ ಎಂದು 'ಹೆಡ್ಬುಷ್' ತಂಡಕ್ಕೆ ಸಚಿವರ ಸಲಹೆ
'ಹೆಡ್ಬುಷ್' ಸಿನಿಮಾ ವಿವಾದ ಸದ್ಯಕ್ಕೆ ತಣ್ಣವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಕನ್ನಡ ಹಾಗೂ ಸಂಸ್ಕೃತಿ, ಇಂಧನ ಸಚಿವ ಸುನಿಲ್ ಕುಮಾರ್ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹಾಗೇನಾದರೂ ಚಿತ್ರದಲ್ಲಿ ವೀರಗಾಸೆ ಕಲೆಗೆ ಅಪಮಾನವಾಗುವಂಥ ಅಂಶಗಳಿದ್ದರೆ ಮರು ಚಿಂತನೆ ಮಾಡುವಂತೆ ಟ್ವೀಟ್ ಸಲಹೆ ನೀಡಿದ್ದಾರೆ.
ಚಿತ್ರದಲ್ಲಿ ವೀರಗಾಸೆ ವೇಷಧಾರಿಗೆ ಒದೆಯಲಾಗಿದೆ. ಅದು ಆ ವೀರಭದ್ರನಿಗೆ ಮಾಡಿದ ಅಪಮಾನ ಎಂದು ಆರೋಪಿಸಲಾಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಇದನ್ನು ನಿರಾಕರಿಸಿದ್ದು, ನಾವು ಯಾರಿಗೂ ಚಿತ್ರದಲ್ಲಿ ಅಪಮಾನ ಮಾಡಿಲ್ಲ ಎಂದು ಹೇಳುತ್ತಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ನಟ ಧನಂಜಯ ಸ್ಪಷ್ಟನೆ ನೀಡಿದ್ದಾರೆ. ವೀರಗಾಸೆಯ ವೇಷದಲ್ಲಿ ಕೆಲವು ಗೂಂಡಾಗಳು ಜಯರಾಜ್ ಮೇಲೆ ದಾಳಿ ಮಾಡಲು ಬಂದಾಗ ಆತ್ಮರಕ್ಷಣೆಗಾಗಿ ಆತ ಅವರ ವಿರುದ್ಧ ಕಾದಾಡುವ ದೃಶ್ಯ ಅದು. ಹಾಗಾಗಿ ಅದು ವೀರಗಾಸೆ ಕಲಾವಿದರನ್ನು ಒದೆಯುವ ಸನ್ನಿವೇಶ ಅಲ್ಲ ಎಂದು ವಿವರಿಸಿದ್ದಾರೆ.
ಧನಂಜಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ ನಾನು ಇಂಡಸ್ಟ್ರಿಯಲ್ಲಿ ರಾಜ್ಯದಲ್ಲಿ ಇರುವುದು ಕೆಲವರಿಗೆ ಇಷ್ಟ ಇಲ್ಲ ಅದಕ್ಕೆ ಹೀಗೆಲ್ಲಾ ಆಗುತ್ತಿದೆ ಎಂದಿದ್ದಾರೆ. ಕೆಲವರು ಮಾತ್ರ ನಟ ಧನಂಜಯ ಪರ ನಿಂತಿದ್ದಾರೆ. ಸಿನಿಮಾವನ್ನು ಸಿನಿಮಾ ರೀತಿ ನೋಡಿ, ಎಲ್ಲದರಲ್ಲೂ ಹುಳುಕು ಹುಡುಕಬೇಡಿ ಎನ್ನುತ್ತಿದ್ದಾರೆ. ಇದೀಗ ಸಚಿವರು ಟ್ವೀಟ್ ಮಾಡಿದ್ದಾರೆ.

ಮರು ಚಿಂತನೆ ನಡೆಸುವುದು ಸೂಕ್ತ
ಸದ್ಯ 'ಹೆಡ್ ಬುಷ್' ಸಿನಿಮಾ ವಿವಾದದ ಬಗ್ಗೆ ಕನ್ನಡ ಹಾಗೂ ಸಂಸ್ಕೃತಿ, ಇಂಧನ ಸಚಿವ ಸುನಿಲ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. "ಹೆಡ್ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾಗಿದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ" ಎಂದು ಬರೆದುಕೊಂಡಿದ್ದಾರೆ.

ಡಾಲಿ ಧನಂಜಯ ಸ್ಪಷ್ಟನೆ
ಸಿನಿಮಾ ವಿವಾದಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿ ನಟ ಧನಂಜಯ ಸ್ಪಷ್ಟನೆ ನೀಡಿದ್ದಾರೆ. ಚಿತ್ರದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅಪಮಾನ ಮಾಡಿಲ್ಲ ಎಂದಿದ್ದಾರೆ. ವೀರಗಾಸೆ ಕಲಾವಿದರ ವೇಷ ತೊಟ್ಟಿದ್ದ ಕಲಾವಿದರ ಹಿಂದೆ ಸರಿದ ಮೇಲೆ ಅಲ್ಲಿದ್ದವರ ಮೇಲೆ ಅಟ್ಯಾಕ್ ನಡೆದಿರುವ ದೃಶ್ಯ ಚಿತ್ರದಲ್ಲಿದೆ. ಚಿತ್ರವನ್ನು ನೋಡದವರು ಈ ಬಗ್ಗೆ ಆಕ್ಷೇಪ ಎತ್ತುತ್ತಿದ್ದಾರೆ. ಚಿತ್ರದಲ್ಲಿ ಯಾರಿಗೂ ಅಪಮಾನ ಮಾಡಿಲ್ಲ. ಹಾಗೇನಾದರೂ ಯಾರ ಮನಸ್ಸಿಗಾದರೂ ಕ್ಷಮೆ ಕೇಳುತ್ತೇನೆ.

ವೀರಗಾಸೆ ಕಲಾವಿದರ ಮಾಶಾಸನ ನೀಡಬೇಕು
ಇದೇ ವೇಳೆ, ವೀರಗಾಸೆಗೆ ಅವಮಾನ ಮಾಡಿದ್ದೀನಿ ಎಂದು ವಿರೋಧ ಮಾಡುತ್ತಿರುವವರು ಯಾರಾದರೂ ಆ ಕಲಾವಿದರ ಜೀವನದ ಬಗ್ಗೆ ಯೋಚಿಸಿದ್ದಾರಾ? ಅವರ ಕಷ್ಟ ಏನು ಎಂದು ಕೇಳಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ವೀರಾಗಾಸೆ ಕಲಾವಿದರಿಗೆ ಮಾಸಾಶನ ನೀಡಬೇಕೆಂದು ನಟ ಧನಂಜಯ ಒತ್ತಾಯಿಸಿದ್ದಾರೆ.

ಸಂವಾದ, ಜಗಳ ಎರಡಕ್ಕು ಸಿದ್ಧ- ಅಗ್ನಿ ಶ್ರೀಧರ್
'ಹೆಡ್ಬುಷ್' ಚಿತ್ರದಲ್ಲಿ ಡಾನ್ ಜಯರಾಜ್ ಕಥೆ ಹೇಳಲಾಗಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು ವಿವಾದದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಗ್ನಿ ಶ್ರೀಧರ್ "ಯಶಸ್ಸಿನ ಹಿಂದೆ ವಿವಾದ ಇದ್ದೇ ಇರುತ್ತೆ. ಸಿನಿಮಾ ಯಶಸ್ಸು ಅಂತೂ ಆಗಿದೆ. ಆದಾಗ ಕೆಲವರು ವಿವಾದ ಸೃಷ್ಟಿ ಮಾಡುತ್ತಾರೆ. ನಿಜವಾಗಿಯೂ ಹೃದಯದಿಂದ ಬಂದಿರೋದಕ್ಕೆ ಸ್ಪಷ್ಟನೆ ಕೊಡುವುದಕ್ಕೆ ಸಿದ್ಧವಾಗಿದ್ದೇವೆ. ಯಾಕಂದ್ರೆ, ಕ್ರಿಯೇಟರ್ ನಾನು. ಬರೀ ಧನಂಜಯ ಎಲ್ಲಾ ಮಾತಾಡುವುದಕ್ಕೆ ಆಗುವುದಿಲ್ಲ. ಈ ಜವಾಬ್ದಾರಿಯನ್ನು ನಾನೇ ಹೊತ್ತುಹೊಳ್ಳುತ್ತೇನೆ. ಆದರೆ, ಬೇಕಂತ ಕೆಣಕುವುದಕ್ಕೆ ಬರುತ್ತಿದ್ದಾರಲ್ಲ. ಅವರೊಂದಿಗೆ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಸಂವಾದಕ್ಕೂ ಸಿದ್ಧವಾಗಿದ್ದೇನೆ. ಜಗಳಕ್ಕೂ ಸಿದ್ಧವಾಗಿದ್ದೇನೆ. " ಎಂದಿದ್ದಾರೆ.


Click it and Unblock the Notifications











