'Boycott PhonePe' ; ಕೆಚ್ಚೆದೆಯ ಕಿಚ್ಚನ ಮಾತಿಗೆ ಕ್ಷಮೆ ಕೇಳಿತಾ ಫೋನ್ ಪೇ..?
ಸುದೀಪ್.. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದವರು ಸುದೀಪ್.
ಹೆಚ್ಚು ಕಡಿಮೆ ಒಂದೂವರೆ ದಶಕಗಳಿಂದ ಬಾಲಿವುಡ್ಡು.. ಕಾಲಿವುಡ್ಡು .. ಟಾಲಿವುಡ್ಡು .. ಅಂಗಳದಲ್ಲಿ ಓಡಾಡಿರೋ ಸುದೀಪ್ ಫೋನ್ ಪೇ ಎಂಬ ಆಪ್ನ ರಾಯಭಾರಿಯೂ ಹೌದು. ಆದರೆ ದುರಾದೃಷ್ಟವಶಾತ್.. ಈ ಫೋನ್ ಪೇ ಎಂಬ ಸಂಸ್ಥೆಯ ಸಮೀರ್ ನಿಗಮ್ ಗೆ ಕನ್ನಡದ ಇತಿಹಾಸವೂ ಗೊತ್ತಿಲ್ಲ. ಭಾರತ ಅಂದರೆ ಒಂದು ದೇಶ ಹಲವು ಭಾಷೆ ಎಂಬ ಕನಿಷ್ಠ ಜ್ಞಾನವೂ ಇಲ್ಲ. ಹೀಗಾಗಿಯೇ ಮೊನ್ನೆಯೆಲ್ಲ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧಿಸಿ ಸಮೀರ್ ನಿಗಮ್ ಏನೇನೋ ಮಾತನಾಡಿದ್ದರು. ಕನ್ನಡಿಗರನ್ನು ಕೆಣಕಿದ್ದರು.
ಆದರೆ ಎಲ್ಲ ಸಮಯದಲ್ಲಿಯೂ ಕನ್ನಡಿಗರು ಹೃದಯ ವೈಶಾಲ್ಯತೆಯ ಪ್ರದರ್ಶನವನ್ನೂ ಮಾಡಲ್ಲ. ಅಲ್ಲಲ್ಲಿಯೇ ಉತ್ತರವನ್ನೂ ಕೊಡ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಮೀರ್ ನಿಗಮ್ ಒಡೆತನದ ಪುಟ್ಗೋಸಿ ಫೋನ್ ಪೇ ವಿರುದ್ದ ಕನ್ನಡಿಗರು ಕೆಂಡ ಕಾರಿದ್ದರು. ಆಕ್ರೋಶ ವ್ಯಕ್ತಪಡಿಸಿದ್ದರು. ಖುದ್ದು ಈ ಆಪ್ನ ರಾಯಭಾರಿಯಾದ ಕಿಚ್ಚ ಸುದೀಪ್ ಕೂಡ ಕನ್ನಡಿಗರಿಗೆ ಮಾಡಿದ ಈ ಅವಮಾನಕ್ಕೆ ಬೇಷರತ್ ಕ್ಷಮೆ ಕೇಳದಿದ್ದರೆ, ಸಂಸ್ಥೆಯೊಂದಿಗಿನ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿಕೊಂಡು ರಾಯಭಾರತ್ವದಿಂದ ಹೊರಬರುವುದಾಗಿ ಎಚ್ಚರಿಸಿದ್ದರು.
ಈಗ ಕೆಚ್ಚೆದೆಯ ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದ ಬೆನ್ನಲ್ಲಿಯೇ ಬಂಡವಾಳಶಾಹಿ ಕಾರ್ಪೊರೇಟ್ ಸಂಸ್ಥೆ ಬಗ್ಗಿದೆ.ಫೋನ್ ಪೇ ಸಂಸ್ಥೆ ತಮ್ಮ ತಪ್ಪನ್ನು ಒಪ್ಪಿಕೊಂಡು ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದೆ. ಕನ್ನಡಿಗರನ್ನು ಕೆಣಕಿದ್ದ ಸಮೀರ್ ನಿಗಮ್ ಕಡೆಯಿಂದ ಸುಧೀರ್ಘ ಲೇಖನ ಕೂಡ ಹೊರ ಬಂದಿದೆ.

ಆದರೆ, ಇದೇ ಸಮಯದಲ್ಲಿ ಇದು ಮನಸಿಂದ ಕೋರಿದ ಕ್ಷಮೆಯಾ ಅಥವಾ ತಿಪ್ಪೆ ಸಾರಿಸುವ ಪ್ರಯತ್ನನಾ ಅನ್ನುವ ಸಂಶಯ ಕಾಡುತ್ತಿದೆ. ಯಾಕೆಂದರೆ ಫೋನ್ ಪೇಯ ಸಿಇಓ ಸಮೀರ್ ನಿಗಮ್ ಒಂದು ಕಡೆ ಕ್ಷಮೆ ಕೇಳಿದ್ದಾರೆ. ಮತ್ತೊಂದು ಕಡೆ ದೇಶದ ಎಲ್ಲಿಂದಾದರೂ ಟ್ಯಾಲೆಂಟ್ಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಹಕ್ಕು ಮತ್ತು ಅವರಂತೆ ಇರುವ ಮುಂತಾದ ಕಂಪನಿಗಳಿಗೆ ಇದೆ ಅನ್ನುವುದನ್ನೂ ಪ್ರತಿಪಾದಿಸಿದ್ದಾರೆ.
ಹೀಗಾಗಿಯೇ ಇನ್ನೂ ಕೆರಳಿರುವ ಅನೇಕ ಕನ್ನಡಿಗರು ಸಮೀರ್ ನಿಗಮ್ ಅವರ ಈ ದ್ವಿಮುಖ ಧೋರಣೆಯ ಬಗ್ಗೆ ಚಕಾರವೆತ್ತುತ್ತಿದ್ದಾರೆ. ಸಮೀರ್ ನಿಗಮ್ ಕನ್ನಡಿಗರಲ್ಲಿ ಕ್ಷಮೆ ಕೋರಿಲ್ಲ ಬದಲಿಗೆ ಕನ್ನಡಿಗರನ್ನು ಇನ್ನೂ ಪ್ರಚೋದಿಸುತ್ತಿದ್ದಾರೆ ಎಂಬ ವಾದವನ್ನೂ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಫೋನ್ ಪೇ ಸಂಸ್ಥಾಪಕನ ಈ ಮಾತುಗಳಿಗೆ ಮರಳಾಗಿ, ಫೋನ್ ಪೇಯನ್ನು ಮತ್ತೆ ಇನ್ಸ್ಟಾಲ್ ಮಾಡಿಕೊಳ್ಳಬೇಡಿ ಎಂಬ ಮನವಿಯನ್ನೂ ಅನೇಕರು ಮಾಡುತ್ತಿದ್ದಾರೆ.
ಒಟ್ಟಾರೆ ಸುದೀಪ್ ಕೆರಳಿ ಕೆಂಡವಾದ ನಂತರವಷ್ಟೇ ಫೋನ್ ಪೇಯ ಸಮೀರ್ ನಿಗಮ್ ಕಡೆಯಿಂದ ಕ್ಷಮಾಪಣಾ ಪತ್ರವೊಂದು ಹೊರ ಬಂದಿದೆ. ಅದರಲ್ಲಿ ಯಾವ ಅನುಮಾನ ಇಲ್ಲ. ಅನುಮಾನ ಇರುವುದು ಸಮೀರ್ ನಿಗಮ್ ಅವರಂತಹ ಬಂಡವಾಳಶಾಹಿಗಳ ಮೇಲಷ್ಟೇ. ಮುಂಬರುವ ದಿನಗಳಲ್ಲಿ ಈ ವಾದ-ವಿವಾದ ಮತ್ತು ಬಾಯ್ಕಾಟ್ ಅಭಿಯಾನ ಎಲ್ಲಿ ಹೋಗಿ ತಲುಪುತ್ತೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











