ತಂದೆ ಇಂಡಸ್ಟ್ರಿಗೆ ದೊಡ್ಡ ನಟ ಆದ್ರೂ ಮಗ ಸಕ್ಸಸ್ ಆಗ್ತಿಲ್ಲ ನೋಡಿ; ಗೆಲುವು ಸುಲಭವಾಗಿ ಸಿಗಲ್ಲ ಎಂದ ದರ್ಶನ್!
ಚಿತ್ರರಂಗಗಳಲ್ಲಿ ಹೆಸರು ಮಾಡಿದ ನಟ ಅಥವಾ ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರುವುದು ಹಳೆಯ ಕಾಲದಿಂದಲೂ ನಡೆಯುತ್ತಾ ಬಂದಿರುವ ಟ್ರೆಂಡ್. ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೇ ಭಾರತದ ವಿವಿಧ ಚಿತ್ರರಂಗಗಳಲ್ಲಿಯೂ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಈ ರೂಢಿಗೆ ಕೆಲವರು ಬೆಂಬಲ ಸೂಚಿಸಿದರೆ ಇನ್ನೂ ಕೆಲವರು ಇದರ ವಿರುದ್ಧ ದನಿ ಕೂಡ ಎತ್ತಿದ್ದಾರೆ.
ಹೌದು, ಸ್ಟಾರ್ ನಟ ಅಥವಾ ನಟಿಯ ಮಕ್ಕಳು ಚಿತ್ರರಂಗ ಪ್ರವೇಶಿಸಿದರೆ ಅದನ್ನು ನೆಪೋಟಿಸಂ ಎಂದು ಜರಿದವರಿದ್ದಾರೆ. ಅದರಲ್ಲೂ ಮುಖ್ಯವಾಗಿ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಟರ ಪುತ್ರರ ಚಿತ್ರಗಳು ಘೋಷಣೆಯಾದಾಗ ನೆಪೋಟಿಸಂ ಎಂಬ ಆರೋಪದ ಸದ್ದು ಪ್ರತೀ ಬಾರಿ ಕೇಳಿ ಬಂದಿದೆ. ನಟರ ಮಕ್ಕಳಿಗೆ ಸುಲಭವಾಗಿ ಸಾಲು ಸಾಲು ಚಿತ್ರಗಳ ಅವಕಾಶ ಸಿಗುತ್ತೆ, ಇದರಿಂದ ನಿಜವಾದ ಪ್ರತಿಭೆಗಳಿಗೆ ಸರಿಯಾದ ಅವಕಾಶ ಸಿಗದೇ ಮೂಲೆಗುಂಪಾಗುತ್ತಾರೆ ಎಂಬ ವಾದ ಈ ಹಿಂದಿನಿಂದಲೂ ಇದೆ.
ಆದರೆ ಸ್ಟಾರ್ ನಟರ ಮಕ್ಕಳೆಂದ ಮಾತ್ರಕ್ಕೆ ಗೆಲುವು ಸಿಕ್ಕಿಬಿಡಲ್ಲ, ದಿಗ್ಗಜ ನಟನ ಮಗ ಎಂಬ ಕಾರಣಕ್ಕೆ ಆರಂಭದಲ್ಲಿ ಒಂದೆರಡು ಚಿತ್ರಗಳಲ್ಲಿ ಅವಕಾಶ ಲಭಿಸಬಹುದು ನಂತರದ ದಿನಗಳಲ್ಲಿ ಅವಕಾಶ ಲಭಿಸಿಬೇಕೆಂದರೆ ಆತ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಬೇಕು ಎಂಬ ಪ್ರತಿವಾದವೂ ಸಹ ಇದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಜನರಿಗೆ ಇಷ್ಟವಾದರೆ ಮಾತ್ರ ಯಾವುದೇ ಕಲಾವಿದನನ್ನಾದರೂ ಪ್ರೇಕ್ಷಕರು ಬೆಳೆಸುತ್ತಾರೆ, ಪ್ರತಿಭೆಯೇ ಇಲ್ಲದಿದ್ದರೆ ಆತ ಯಾವುದೇ ಸ್ಟಾರ್ ನಟನ ಪುತ್ರನಾದರೂ ಸೊಪ್ಪು ಹಾಕುವುದಿಲ್ಲ ಎನ್ನುವುದು ಕಟುಸತ್ಯ. ಇದೇ ವಿಷಯವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ನಡೆದ ಕ್ರಾಂತಿ ಚಿತ್ರದ ಸಂದರ್ಶನವೊಂದರಲ್ಲಿ ಉದಾಹರಣೆಯಾಗಿ ಬಳಸಿರುವುದು ಸದ್ಯ ವೈರಲ್ ಹಾಗೂ ಚರ್ಚಾಸ್ಪದ ವಿಷಯವಾಗಿದೆ.

ಅಪ್ಪ ದೊಡ್ಡ ಸ್ಟಾರ್ ಆದರೆ ಮಗನ ಕೈಯಲ್ಲಿ ಆಗ್ತಾ ಇಲ್ಲ!
ಮಸ್ತ್ ಸಿನಿಮಾ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಕ್ರಾಂತಿ ಚಿತ್ರದ ಸಂದರ್ಶನದಲ್ಲಿ ಮಾತನಾಡಿದ ದರ್ಶನ್ ಜನರು ನಟರನ್ನು ಯಾಕೆ ಮೆಚ್ಚಿಕೊಂಡು ಮೆರೆಸುತ್ತಾರೆ ಎಂಬುದನ್ನು ತಿಳಿಸಿದರು. ಯಾರೂ ಬೇಕಾದ್ರೂ ನಟನಾಗಬಹುದು ಎಂದ ದರ್ಶನ್ ನಟರಾದವರೆಲ್ಲ ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ದಿಗ್ಗಜ ನಟ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಉದಾಹರಣೆಯಾಗಿ ತೆಗೆದಕೊಂಡ ದರ್ಶನ್ ಅಮಿತಾಬ್ ಬಚ್ಚನ್ ದೊಡ್ಡ ಸ್ಟಾರ್ ಎಪ್ಪತ್ತೆಂಬತ್ತು ವರ್ಷವಾದರೂ ಅವರೇ ನಂಬರ್ ಒನ್, ಆದರೆ ಅವರ ಮಗ ಅಭಿಷೇಕ್ ಕೈಯಲ್ಲಿ ಯಾಕೆ ಇನ್ನೂ ಗೆದ್ದು ನಿಲ್ಲಲಾಗ್ತಿಲ್ಲ ಎಂದು ಹೇಳಿಕೆ ನೀಡಿದರು.

ನಮ್ಮಲ್ಲಿ ರಂಜಿಸುವ ಸಾಮರ್ಥ್ಯ ಇರಬೇಕು
ಇನ್ನೂ ಮುಂದುವರಿದು ಮಾತನಾಡಿದ ದರ್ಶನ್ ನಟರಾದವರಿಗೆ ಜನರನ್ನು ರಂಜಿಸುವ ಯಾವುದಾದರೊಂದು ಸಾಮರ್ಥ್ಯ ಇರಬೇಕು, ಆಗ ಮಾತ್ರ ಜನರು ಮೆಚ್ಚಿಕೊಳ್ತಾರೆ, ಬೆಳೆಸ್ತಾರೆ, ಪ್ರೀತಿಯನ್ನೂ ಕೊಡ್ತಾರೆ ಹಾಗೂ ಹಣವನ್ನೂ ಕೊಡ್ತಾರೆ ಎಂದು ಹೇಳಿದರು. ಹೀಗೆ ತನ್ನ ಅಭಿಮಾನಿಗಳು ತನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ ಎಂದು ದರ್ಶನ್ ತಿಳಿಸಿದರು.

ಸೆಲೆಬ್ರಿಟಿಗಳ ಮೂಲ ಹುಡುಕಬೇಡಿ
ಇನ್ನು ನಿಮ್ಮ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ಪ್ರೀತಿಯನ್ನು ತೋರಿಸುವುದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್ ಋಷಿ ಮೂಲ, ನದಿ ಮೂಲಗಳನ್ನು ಹೇಗೆ ಹುಡುಕಬಾರದೋ ಅದೇ ರೀತಿ ತಮ್ಮ ಸೆಲೆಬ್ರಿಟಿಗಳ ಮೂಲವನ್ನೂ ಸಹ ಹುಡುಕಬಾರದು ಎಂದು ಹೇಳಿದರು.

ಜನ ಹಣ, ಪ್ರೀತಿ ಎರಡನ್ನೂ ಕೊಟ್ಟು ಬೆಳೆಸುವ ಏಕೈಕ ಕ್ಷೇತ್ರವಿದು
ಹೀಗೆ ಜನ ತಮ್ಮ ಮೇಲೆ ತೋರಿಸುವ ಪ್ರೀತಿಯನ್ನು ಗೌರವದಿಂದ ಹೊಗಳಿದ ದರ್ಶನ್ ಜನರು ಪ್ರೀತಿ ಹಾಗೂ ಹಣ ಎರಡನ್ನೂ ಕೊಟ್ಟು ಬೆಳೆಸುವ ಏಕೈಕ ಕ್ಷೇತ್ರವೆಂದರೆ ಅದು ಸಿನಿಮಾ ಕ್ಷೇತ್ರ, ಉಳಿದ ಯಾವುದೇ ಕ್ಷೇತ್ರದಲ್ಲೂ ಈ ರೀತಿ ನಡೆಯುವುದಿಲ್ಲ ಎಂದರು.


Click it and Unblock the Notifications











