Amitabh Bachchan: ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಬ್ ಬಚ್ಚನ್
ಸಿದ್ದಗಂಗಾ ಶ್ರೀಗಳ ಜೀವನವೇ ಒಂದು ಪಾಠ. ಸೇವೆಯಲ್ಲೇ ಜೀವನ ಕಳೆದ ಶ್ರೀಗಳ ಜೀವನ ಕತೆಯನ್ನು ದೃಶ್ಯದ ಮೂಲಕ ಕಟ್ಟಿಕೊಡುವ ಯತ್ನವೊಂದು ಜಾರಿಯಲ್ಲಿದ್ದು, ಸಿದ್ದಗಂಗಾ ಶ್ರೀಗಳ ಪಾತ್ರವನ್ನು ಅಮಿತಾಬ್ ಬಚ್ಚನ್ ನಿರ್ವಹಿಸುವ ಸಾಧ್ಯತೆ ಇದೆ.
ಸಿದ್ದಗಂಗಾ ಶ್ರೀಗಳ ಜೀವನ ಕತೆ ಒಳಗೊಂಡ ಮಿಸಿ ಸಿನಿ ಸರಣಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸಿದ್ದಗಂಗಾ ಶ್ರೀಗಳ ಪಾತ್ರ ನಿರ್ವಹಣೆಗೆ ಅಮಿತಾಬ್ ಬಚ್ಚನ್ ಅವರನ್ನು ಕರೆತರುವ ಯತ್ನ ಜಾರಿಯಲ್ಲಿದೆ.
ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಿ ಮಿನಿ ಸಿನಿ ಸರಣಿಯ ಕತೆಯನ್ನು ಹೇಳಲಾಗಿದೆ. ಆದರೆ ಅಮಿತಾಬ್ ಬಚ್ಚನ್ರಿಂದ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರ ಆರೋಗ್ಯದಲ್ಲಿ ತುಸು ಏರು ಪೇರಾಗಿರುವ ಕಾರಣ ಅವರ ಪ್ರತಿಕ್ರಿಯೆ ತಡವಾಗಿದೆ ಎಂದು ಹಂಸಲೇಖ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಮಿನಿ ಸಿನಿ ಸರಣಿ 52 ಎಪಿಸೋಡ್ಗಳನ್ನು ಒಳಗೊಂಡಿರಲಿದೆ. ಏಳು ತಂಡಗಳು ಒಟ್ಟು ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿ ಈ ಮಿನಿ ಸಿನಿ ಸರಣಿಗಾಗಿ ಕೆಲಸ ಮಾಡಲಿದ್ದಾರೆ.
ಡಾ ಹಂಸಲೇಖ ಅವರ ಸಾರಥ್ಯದಲ್ಲಿ ಈ ಮಿನಿ ಸರಣಿ ನಿರ್ಮಾಣಗೊಳ್ಳುತ್ತಿದ್ದು, ಏಪ್ರಿಲ್ 1 ರಂದು ಸಿದ್ದಗಂಗಾ ಮಠದಲ್ಲಿ ಸಿನಿ ಸರಣಿಗೆ ಚಾಲನೆ ಸಿಗಲಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಸಿನಿಮಾಕ್ಕೆ ಚಾಲನೆ ನೀಡಲಿರುವುದು ವಿಶೇಷ. ಅಂದಿನ ಕಾರ್ಯಕ್ರಮದಲ್ಲಿ 115 ಜನ ಗಾಯಕರು ಹಂಸಲೇಖ ಅವರ ಸಾರಥ್ಯದಲ್ಲಿ 6 ಹಾಡುಗಳನ್ನ ಹಾಡಲಿದ್ದಾರೆ. ಅಮಿತ್ ಶಾ ಜೊತೆಗೆ ರಾಜ್ಯದ ನಾಯಕರು ಇರಲಿದ್ದಾರೆ.
ಕನ್ನಡ ಚಿತ್ರರಂಗ ಅಮಿತಾಬ್ ಬಚ್ಚನ್ಗೆ ಹೊಸದೇನೂ ಅಲ್ಲ. ಡಾ ರಾಜ್ಕುಮಾರ್ ಅವರೊಟ್ಟಿಗೆ ಬಹಳ ಆತ್ಮೀಯ ಬಂಧವನ್ನು ಬಚ್ಚನ್ ಹೊಂದಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತಧಾರೆ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಚ್ಚನ್ ಕಾಣಿಸಿಕೊಂಡಿದ್ದರು, ಸಿನಿಮಾದಲ್ಲಿ ಕನ್ನಡದ ಡೈಲಾಗ್ ಹೇಳಿದ್ದರು ಬಚ್ಚನ್. ಈಗ ಸಿದ್ದಗಂಗಾ ಶ್ರೀಗಳ ಸರಣಿಯಲ್ಲಿ ನಟಿಸಿದರೆ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲಿ ಅಮಿತಾಬ್ ಬಚ್ಚನ್ ನಟಿಸಿದಂತಾಗುತ್ತದೆ.
ಅಮಿತಾಬ್ ಬಚ್ಚನ್ ನಟನೆಯ 'ರನ್ ವೇ 24' ಹಾಗೂ 'ಬ್ರಹ್ಮಾಸ್ತ್ರ' ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಅದರ ಹೊರತಾಗಿ ಹಾಲಿವುಡ್ ಸಿನಿಮಾ 'ದಿ ಇಂಟರ್ನ್' ಸಿನಿಮಾದ ಹಿಂದಿ ರೀಮೇಕ್ನಲ್ಲಿ ನಟಿಸಲಿದ್ದಾರೆ. ತಮಿಳಿನ 'ಉಯಿರಂದಾ ಮಣಿದನ್' ಸಿನಿಮಾದಲ್ಲಿ ನಟಿಸಲಿದ್ದಾರೆ. 'ತೇರ ಯಾರ್ ಹೂ ಮೇ', 'ಜುವೆಲ್ ಆಫ್ ಇಂಡಿಯಾ', 'ಊಂಚಾಯಿ' ಸಿನಿಮಾಗಳಲ್ಲಿ ನಟಿಸಲಿದ್ದಾರೆ.


Click it and Unblock the Notifications











