ತೆರೆಗೆ ಬರಲು ‘ಅಮ್ಮ’ನ ಸಿದ್ಧತೆ
ಈ ತಾಂತ್ರಿಕ - ವೈಜ್ಞಾನಿಕ - ಸ್ಪರ್ಧಾ ಯುಗದಲ್ಲಿ ಮಾನವ ಜೀವನ ಶೈಲಿ ಮೌಲ್ಯ ಬದಲಾಗಿದ್ದರೂ, ಸಂಸ್ಕೃತಿ ಎಂದಿಗೂ ಬದಲಾಗದು ಎಂಬ ಸಂದೇಶ ಸಾರುವ 'ಅಮ್ಮ" ಚಿತ್ರೀಕರಣ, ಮಾತುಗಳ ಮರುಲೇಪನ, ಹಿನ್ನೆಲೆ ಸಂಗೀತವೇ ಮೊದಲಾದ ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ತೆರೆಗೆ ಬರುವ ಸಿದ್ಧತೆ ನಡೆಸಿದೆ.
ಶ್ರೀ ಸಂಗಮೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಶ್ರೀಮತಿ ಗಿರಿಜಾಂಬಾ ಅರ್ಪಿಸಿ, ಕೆ. ವೆಂಕಟೇಶ್ ಮತ್ತು ಎನ್.ಸಿ. ಅಂಬರೀಶ್ ನಿರ್ಮಿಸುತ್ತಿರುವ ಶುದ್ಧ ಕೌಟುಂಬಿಕ ಚಿತ್ರದ ಮೊದಲ ಪ್ರತಿಯೂ ಒಂದೆರಡು ದಿನದಲ್ಲಿ ರೆಡಿ ಆಗಲಿದೆ. ಡಿ. ರಾಜೇಂದ್ರ ಬಾಬು ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರಕ್ಕೆ ಕೀರ್ವಾಣಿ ಸಂಗೀತ ಸಂಯೋಜನೆ, ಪ್ರಸಾದ್ ಬಾಬು ಛಾಯಾಗ್ರಹಣ ಇದೆ. ತಾರಾಗಣದಲ್ಲಿ ಅನಂತ್ನಾಗ್, ಲಕ್ಷ್ಮೀ, ಜೈಜಗದೀಶ್, ಪವಿತ್ರಾ ಲೋಕೇಶ್, ಮೋಹನ್, ತಾರಾ, ಸಂಜಯ್, ನೀತೂ ಸಿಂಗ್, ರಮೇಶ್ ಭಟ್, ಕರಿಬಸವಯ್ಯ, ರೇಖಾದಾಸ್ ಮೊದಲಾದವರಿದ್ದಾರೆ.
ಕವಿ ಬಿ.ಆರ್.ಲಕ್ಷ್ಮಣರಾಯರ ಜನಪ್ರಿಯಗೀತೆಗಳಲ್ಲಿ ಒಂದಾದ 'ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರು.. .." ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 'ಅಮ್ಮ" ರಜತ ಪರದೆ ಅಲಂಕರಿಸುವ ಸಾಧ್ಯತೆ ಇದೆ. ಮುದುಡಿದ ತಾವರೆ ಅರಳಿತು, ನಾನಿನ್ನ ಬಿಡಲಾರೆ, ಬೆಂಕಿಯಬಲೆ, ಇಬ್ಬನಿ ಕರಗಿತು, ಚಂದನದ ಬೊಂಬೆ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ಹೆಸರು ಮಾಡಿದ ಅನಂತ್ನಾಗ್ - ಲಕ್ಷ್ಮೀ ಬಹಳ ವರ್ಷಗಳ ನಂತರ ಈ ಚಿತ್ರದಲ್ಲಿ ಅಪ್ಪ- ಅಮ್ಮನ ಪಾತ್ರ ನಿರ್ವಹಿಸಿದ್ದಾರೆ.


Click it and Unblock the Notifications