50 ಲಕ್ಷ ವಂಚನೆ, 'ಅಟ್ಟಹಾಸ' ಸಿನಿಮಾ ನಿರ್ದೇಶಕರಿಂದ ದೂರು ದಾಖಲು
ದಂತಚೋರ ವೀರಪ್ಪನ್ ಕುರಿತ ಕತೆ ಹೊಂದಿದ್ದ 'ಅಟ್ಟಹಾಸ' ಸಿನಿಮಾ ನಿರ್ದೇಶನ ಮಾಡಿದ್ದ ಎಎಂಆರ್ ರಮೇಶ್, ತಮಗೆ 50 ಲಕ್ಷ ವಂಚನೆ ಎಸಗಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿನಿಮಾ ನಿರ್ಮಾಪಕ, ವಿತರಕ ಮಹೇಶ್ ಕೊಠಾರಿ ಹಾಗೂ ಡಿಸ್ನಿ ಹಾಟ್ಸ್ಟಾರ್ ಆಪ್ ವಿರುದ್ಧ ಎಎಂಆರ್ ರಮೇಶ್ ದೂರು ದಾಖಲಿಸಿದ್ದು, ತಮಗೆ 50 ಲಕ್ಷ ರು ಹಣ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ತಮ್ಮ 'ಅಟ್ಟಹಾಸ' ಸಿನಿಮಾವನ್ನು ಹಾಟ್ಸ್ಟಾರ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ತಮಗೆ ಹಣ ನೀಡಿಲ್ಲ ಎಂದು ಎಎಂಆರ್ ರಮೇಶ್ ದೂರಿದ್ದಾರೆ.

ಸಿನಿಮಾವನ್ನು ಡಿಸ್ನಿ ಹಾಟ್ಸ್ಟಾರ್ಗೆ ಮಾರಿಕೊಡುತ್ತೇನೆ ನಿಮಗೆ 50 ಲಕ್ಷ ಹಣ ಕೊಡುತ್ತೇನೆ ಎಂದು ಒಪ್ಪಂದ ಮಾಡಿಕೊಂಡ ಮಹೇಶ್ ಕೊಠಾರಿ ಅನಧಿಕೃತವಾಗಿ ನನ್ನ ಸಿನಿಮಾವನ್ನು ಡಿಸ್ನಿ ಹಾಟ್ಸ್ಟಾರ್ಗೆ ಮಾರಿದ್ದಾರೆ ನನಗೆ ಯಾವುದೇ ಹಣ ನೀಡಿಲ್ಲ ಎಂದು ಎಎಂಆರ್ ರಮೇಶ್ ದೂರಿನಲ್ಲಿ ಹೇಳಿದ್ದಾರೆ.
'ಅಟ್ಟಹಾಸ' ಸಿನಿಮಾವನ್ನು ನ್ಯಾಷನಲ್ ಅವಾರ್ಡ್ಗೆ ಕಳಿಸುವಾಗ ಅದಕ್ಕೆ ಸಬ್ಟೈಟಲ್ಸ್ ಹಾಕಿಸಲು ಸಿನಿಮಾದ ಕಾಪಿಯನ್ನು ಮಹೇಶ್ ಕೊಠಾರಿಗೆ ನೀಡಿದ್ದೆ. ಅದನ್ನು ದುರ್ಬಳಕೆ ಮಾಡಿಕೊಂಡು ಆ ಕಾಪಿಯನ್ನು ಡಿಸ್ನಿ ಹಾಟ್ಸ್ಟಾರ್ಗೆ ನೀಡಿದ್ದಾರೆ ಎಂದಿದ್ದಾರೆ ಎಎಂಆರ್ ರಮೇಶ್.
'ಅಟ್ಟಹಾಸ' ಸಿನಿಮಾ ಹಾಗೂ ವೆಬ್ ಸರಣಿ ಬಗ್ಗೆ ಕಳೆದ ವರ್ಷವೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಎಎಂಆರ್ ರಮೇಶ್, ''ವೀರಪ್ಪನ್ ಜೀವನ ಕುರಿತು ಸಂಶೋಧನೆ ನಡೆಸಲು ನನ್ನ ಜೀವನದ 20 ವರ್ಷವನ್ನು ವಿನಿಯೋಗಿಸಿದ್ದೇನೆ. ಹಾಗಾಗಿ 'ಅಟ್ಟಹಾಸ' ಸಿನಿಮಾ ಹಾಗೂ ವೀರಪ್ಪನ್ ಕುರಿತು ಕತೆಯನ್ನು ನೊಂದಣಿ ಮಾಡಿಸಿ ಅದರ ಬೌದ್ಧಿಕ ಹಕ್ಕನ್ನು ಪಡೆದುಕೊಂಡಿದ್ದೇನೆ'' ಎಂದಿದ್ದರು.
ಎಎಂಆರ್ ರಮೇಶ್ ಇದೀಗ ದಂತಚೋರ ವೀರಪ್ಪನ್ ಕುರಿತಾದ ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದಾರೆ. ವೆಬ್ ಸರಣಿಯ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ. 'ಅಟ್ಟಹಾಸ' ಸಿನಿಮಾದಲ್ಲಿ ವೀರಪ್ಪನ್ ಪಾತ್ರ ನಿರ್ವಹಿಸಿದ್ದ ಕಿಶೋರ್ ಅವರೇ ವೆಬ್ ಸರಣಿಯಲ್ಲಿಯೂ ವೀರಪ್ಪನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವೆಬ್ ಸರಣಿಯ ನಂತರ ಎಲ್ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್ ಬಗ್ಗೆ ಸಿನಿಮಾ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.


Click it and Unblock the Notifications











