ಅಮೃತಾಗೆ ಶುಭ ಕೋರಿದ ಧನಂಜಯ್: ಮದುವೆ ಯಾವಾಗ ಎಂದ ನೆಟ್ಟಿಗರು?
ಸಿನಿಮಾ ಲೋಕದಲ್ಲಿ ದಿನಕ್ಕೊಂದು ಕ್ಷಣಕ್ಕೊಂದು ಗಾಸಿಪ್ಗಳು ಜೀವ ಪಡೆದು ಕೊಳ್ಳುತ್ತವೆ. ಆದರೆ ಅದೆಲ್ಲವೂ ನಿಜ ಆಗಿರಬೇಕು ಎಂದೇನಿಲ್ಲ. ಆದರೆ ಹಲವು ಬಾರಿ ಗಾಸಿಪ್ ರೂಪದಲ್ಲಿ ಹುಟ್ಟಿದ ಸುದ್ದಿಗಳೇ ನಿಜವಾಗಿ ಬಿಡುತ್ತವೆ. ಈಗ ಸ್ಯಾಂಡಲ್ವುಡ್ನಲ್ಲಿ ಹರಿದಾಡುತ್ತಿರುವ ಹೊಸ ಗಾಸಿಪ್ ಎಂದರೆ ನಟಿ ಅಮೃತಾ ಅಯ್ಯಂಗಾರ್ ಮತ್ತು ಡಾಲಿ ಧನಂಜಯ್ ಪ್ರೇಮ್ ಕಹಾನಿ.
ಅಮೃತಾ ಮತ್ತು ಧನಂಜಯ್ ಹಲವು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರ್ತಿತ್ತು. ಈ ಸುದ್ದಿಗೆ ತುಪ್ಪ ಸುರಿದು ಮತ್ತಷ್ಟು ಹೆಚ್ಚು ಮಾಡಿದ್ದು, ಕಾರ್ಯಕ್ರಮದಲ್ಲಿ ನಟ ಧನಂಜಯ್ ಅಮೃತಾಗೆ ಪ್ರಪೋಸ್ ಮಾಡಿದ ಸನ್ನಿವೇಶ.
ಈ ಬಗ್ಗೆ ನಟಿ ಅಮೃತಾ ಅಯ್ಯಂಗಾರ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಈಗ ಈ ವಿಚಾರ ಮತ್ತೆ ಸದ್ದು ಮಾಡುತ್ತಿದ್ದು, ಇದಕ್ಕೆ ಕಾರಣ ಧನಂಜಯ್, ಅಮೃತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು. ಅಮೃತಾ ಬಗ್ಗೆ ಧನಂಜಯ್ ಟ್ವೀಟ್ ಮಾಡಿದ ಕೂಡಲೇ, ಮದುವೆ ಬಗ್ಗೆ ಪ್ರಶ್ನೆಯ ಸುರಿಮಳೆ ಸುರಿಯುತ್ತಿದೆ.

ನಟಿ ಅಮೃತಾ ಬರ್ತ್ಡೇ
ನಟಿ ಅಮೃತಾ ಅಯ್ಯಂಗಾರ್ ಸ್ಯಾಂಡಲ್ವುಡ್ನಲ್ಲಿ ' ಜೋ' ಎಂದೇ ಖ್ಯಾತಿ ಗಳಿಸಿದ್ದಾರೆ. ಅಷ್ಟರ ಮಟ್ಟಿಗೆ ಜೋ ಪಾತ್ರದ ಮೂಲಕ ಜನರ ಮನಸ್ಸಿನಲ್ಲಿ ಹೆಸರು ಗಳಿಸಿದ್ದಾರೆ. ಇಂದು (ಜುಲೈ 26) ನಟಿ ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಅಮೃತಾ ಅಯ್ಯಂಗಾರ್ ಬರ್ತ್ ಡೇ ಖುಷಿಯಲ್ಲಿದ್ದಾರೆ. ಆದರೆ ತಮ್ಮ ಹುಟ್ಟುಹಬ್ಬ ಎನ್ನುವುದಕ್ಕಿಂತಲೂ, ಡಾಲಿ ಧನಂಮಯ್ ಶುಭ ಕೋರಿರುವುದು ಹೆಚ್ಚಾಗಿ ಗಮನ ಸೆಳೆದಿದೆ. ಈ ನಟಿಯ ಮುಂದಿನ ಸಿನಿಮಾಗಳು ಯಾವುವು? ಸಿನಿ ಜರ್ನಿ ಹೇಗಿತ್ತು? ಇಲ್ಲಿದೆ ಮಾಹಿತಿ.
ಅಮೃತಾಗೆ ಧನಂಜಯ್ ವಿಶ್!
ಅಮೃತಾ ಹುಟ್ಟುಹಬ್ಬದ ಪ್ರಯುಕ್ತ ನಟ ಧನಂಜಯ್ ಶುಭಕೋರಿದ್ದಾರೆ. ಇವರ ಲವ್ ಸ್ಟೋರಿ ಚರ್ಚೆ ಆಗಿದ್ದ ಕಾರಣ, ಧನಂಜಯ್ ಬರೆದ ಸಂದೇಶ ವೈರಲ್ ಆಗಿದೆ. "ಹುಟ್ಟು ಹಬ್ಬದ ಶುಭಾಶಯಗಳು ಅಮೃತಾ.. ದೇವರ ಆಶೀರ್ವಾದವಿರಲಿ, ಕೀಪ್ ರಾಕಿಂಗ್.. ಈ ವರ್ಷ ಮತ್ತಷ್ಟು ಯಶಸ್ಸು ತಂದು ಕೊಡಲಿ ಎಂದು ಹಾರೈಸುತ್ತೇನೆ." ಎಂದು ಬರೆದುಕೊಂಡು, ಅಮೃತಾಗೆ ಟ್ಯಾಗ್ ಮಾಡಿದ್ದಾರೆ. ಧನಂಜಯ್ ಈ ಶುಭ ಸಂದೇಶ ಮತ್ತೆ ಚರ್ಚೆಯಾಗುತ್ತಿದೆ.

ಮದುವೆ ಯಾವಾಗ ಎಂದ ನೆಟ್ಟಿಗರು?
ನಟ ಧನಂಜಯ್ ಅಮೃತಾ ಅಯ್ಯಂಗಾರ್ಗೆ ಶುಭಕೋರುವುದರ ಜೊತೆಗೆ, ಅಮೃತಾ ಜೊತೆಗಿನ ಸುಂದರ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಪೋಟೊದಲ್ಲಿ ಇಬ್ಬರ ಆತ್ಮೀಯತೆ ಕಂಡು, ಮದುವೆ ಯಾವಾಗ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಈ ಫೋಟೊದಲ್ಲಿ ಇಬ್ಬರು ಒಂದು ಎಲ್ಇಡಿ ಸ್ಕ್ರೀನ್ ಮುಂದೆ ನಿಂತಿದ್ದಾರೆ. ಅದರಲ್ಲಿ ಹೃದಯದ ಚಿಹ್ನೆಗಳಿವೆ. ಹಾಗಾಗಿ ಇವರು ಮದುವೆ ಆಗುವುದು ಪಕ್ಕಾ ಎನ್ನುವ ಚರ್ಚೆಗಳು ಮತ್ತೆ ಹುಟ್ಟಿಕೊಂಡಿವೆ.

ಅಮೃತಾಗೆ ರೋಜ್ ಕೊಟ್ಟಿದ್ದ ಡಾಲಿ!
ನಿಮಗೂ ನೆನಪಿರಬಹುದು 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮಕ್ಕೆ ಬಂದ ಈ ಜೋಡಿ ಹೆಚ್ಚು ಗಮನ ಸೆಳೆದಿತ್ತು. ಅದರಲ್ಲೂ ಧನಂಜಯ್ ಕಾರ್ಯಕ್ರಮದ ಭಾಗವಾಗಿ ಅಮೃತಾಗೆ ಪ್ರಪೋಸ್ ಮಾಡಿದ ರೀತಿ ಅಚ್ಚರಿ ಮೂಡಿಸಿತ್ತು. ಅಮೃತಾ ಮುಂದೆ ಮಂಡಿಯೂರಿ ಕುಳಿತು, ರೊಮ್ಯಾಂಟಿಕ್ ಆಗಿ ಕವಿತೆಯೊಂದನ್ನು ಬರೆದು ಹೇಳಿದ್ದರು. "ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೆನು, ತೆಗೆದು ಬಚ್ಚಿಟ್ಟುಕೋ.. ಇಲ್ಲ ತುಳಿದು, ಕಾಲ್ ತೊಳೆದುಕೋ. ಬೇಡ ಈ ಮೌನ, ಮಾಡು ತೀರ್ಮಾನ" ಎಂದು ಕವಿತೆ ಹೇಳಿ ಬೆರಗು ಮೂಡಿಸಿದ್ದರು.

ಲವ್ ಬಗ್ಗೆ ಅಮೃತಾ ಪ್ರತಿಕ್ರಿಯೆ!
ಅದಾದ ಬಳಿಕ ಇವರ ನಡುವಿನ ಪ್ರೇಮ್ ಕಹಾನಿ ನಿಜವೇ ಎಂದು ನಂಬಲಾಗಿತ್ತು. ಆದರೆ ಈ ಬಗ್ಗೆ ಕೇಳಿದರೆ ಅಮೃತಾ ಹೇಳುವುದೇ ಬೇರೆ ಉತ್ತರ ಕೊಟ್ಟಿದ್ದರು. "ಇಬ್ಬರ ನಡುವೆ ಏನು ಇಲ್ಲ. ನಾವು ಸ್ನೇಹಿತರಷ್ಟೇ" ಎಂದಿದ್ದರು. "ನಾನು ಧನಂಜಯ್ ಒಟ್ಟಿಗೆ ಹಲವು ಚಿತ್ರಗಳನ್ನು ಮಾಡಿದ್ದೇವೆ. ಸಿನಿಮಾ ಪ್ರಚಾರಕ್ಕಾಗಿ ಇಬ್ಬರೂ ಒಟ್ಟಿಗೆ ಹೋಗಿದ್ದೇವೆ. ಪ್ರಪೋಸ್ ಮಾಡಿದ್ದು ಕೇವಲ ಕಾರ್ಯಕ್ರಮಕ್ಕಾಗಿ ಅಷ್ಟೆ. ಹಾಗಂತಾ ನಾವು ಪ್ರೇಮಿಗಳು ಎನ್ನುವುದು ಸರಿಯಲ್ಲ" ಎಂದು ಉತ್ತರ ಕೊಟ್ಟಿದ್ದರು.


Click it and Unblock the Notifications











