ಪವಿತ್ರಾ ಗೌಡ ಬಗ್ಗೆ ನಾನು ಮಾತನಾಡಬೇಕು ಅಂದರೆ ಅರ್ಧ ಗಂಟೆಗೆ 3000 ಕೊಡಿ, ಮಾಜಿ ಪತಿಯ ಆಡಿಯೋ ವೈರಲ್ ?
ಸೆರೆವಾಸ ಮುಗಿಸಿ ಹೊರ ಬಂದ ಪವಿತ್ರಾ ಗೌಡ ಪೂರ್ವಾಶ್ರಮದಲ್ಲಿ ನಾಯಕಿಯಾಗಿದ್ದವರು ಮಾತ್ರ ಅಲ್ಲ ಬದಲಿಗೆ 'ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿ ಕೂಡ ಹೌದು. ಹತ್ ಹತ್ರ ಎರಡು ಕೋಟಿ ಬೆಲೆ ಬಾಳುವ ಮೂರು ಫ್ಲೋರ್ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುವ ಪವಿತ್ರಾ ಬಳಿ ಇಂದು ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಕೈಗೊಬ್ಬರು - ಕಾಲಿಗೊಬ್ಬರು ಸಹಾಯಕರಿದ್ದಾರೆ.
ಆದರೆ ಇವರನ್ನು ಒಂದುಕಾಲದಲ್ಲಿ ಮದ್ವೆಯಾದ ಸಂಜಯ್ ಸಿಂಗ್ ಎಂಬ ವ್ಯಕ್ತಿಯ ಬದುಕಿನಲ್ಲಿ ಮಾತ್ರ ಹೆಚ್ಚು ಬದಲಾವಣೆಗಳಾಗಿಲ್ಲ. ಇಂತಹದ್ದೊಂದು ಅನುಮಾನ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಅದೊಂದು ಆಡಿಯೋ. ಹೌದು, ಪವಿತ್ರಾ ಗೌಡ ಆ ಕಡೆ ಜೈಲು ಪಾಲಾಗುತ್ತಿದ್ದಂತೆ ಈ ಕಡೆ ದುತ್ತೆಂದು ಪ್ರತ್ಯಕ್ಷವಾದ ಸಂಜಯ್ ಸಿಂಗ್ ಆಗಲೂ ಸಂದರ್ಶನ ನೀಡಿದ್ದರು. ಈಗ ಜೈಲಿನಾಚೆ ಹೊರ ಬಂದ ನಂತರ ಕೂಡ ಸಂದರ್ಶನ ನೀಡುತ್ತಿದ್ದಾರೆ.

ಪವಿತ್ರಾ ಗೌಡ ಮೇಲೆ ಚೂರು ಪ್ರೀತಿ ಕಡಿಮೆಯಾಗಿಲ್ಲವೆನ್ನುವಂತೆ ತಮ್ಮ ಮಾಜಿ ಪತ್ನಿಯ ವ್ಯಕ್ತಿತ್ವವನ್ನು ಬಣ್ಣಿಸುತ್ತಿದ್ದಾರೆ. ಬಾಯ್ತುಂಬ ಹೊಗಳುತ್ತಿದ್ದಾರೆ. ದರ್ಶನ್ ಜೊತೆ ತಮ್ಮ ಮಾಜಿ ಪತ್ನಿ ಸಾಂಗತ್ಯ ಬೆಳೆಸಿದ ಕೋಪವಾಗಲಿ, ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾದ ಬೇಸರವಾಗಲಿ ಯಾವುದು ಕೂಡ ಸಂಜಯ್ ಸಿಂಗ್ ಅವರ ಮಾತುಗಳಲ್ಲಿ ಕಾಣುತ್ತಿಲ್ಲ. ಹೀಗಿರುವಾಗ ಸಂದರ್ಶನಗಳನ್ನು ನೀಡಲು ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ವಾಹಿನಿಗಳ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಂಜಯ್ ಸಿಂಗ್ ಅವರದ್ದೇ ಎನ್ನಲಾದ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆದ ಈ ಆಡಿಯೋದಲ್ಲಿ 'ನಾನು ಹಣ ಚಾರ್ಜ್ ಮಾಡುತ್ತೇನೆ. ಹಣ ಇಲ್ಲದೇ ನಾನು ಯಾವ ಸಂದರ್ಶನ ಕೂಡ ಕೊಡಲು ಆಗುವುದಿಲ್ಲ. ನಾನು ಈವರೆಗೂ ಎಷ್ಟು ಸಂದರ್ಶನ ಕೊಟ್ಟಿದ್ದೇನೋ, ಅಷ್ಟಕ್ಕೂ ನಾನು ಹಣ ಪಡೆದುಕೊಂಡಿದ್ದೇನೆ. ನಾನೇನು ಲಕ್ಷಾಂತರ ರೂಪಾಯಿ ಹಣ ಕೇಳುವುದಿಲ್ಲ. ಅರ್ಧ ಗಂಟೆಯ ಸಂದರ್ಶನಕ್ಕೆ ಮೂರು ಸಾವಿರ ಕೊಡಿ ಸಾಕು ಎಂಬ ಮಾತುಗಳನ್ನಾಡಲಾಗಿದೆ.
ಇನ್ನು ಈ ಹಿಂದೆ ನಾನು ಫ್ರೀಯಾಗಿ ಅನೇಕರಿಗೆ ಸಂದರ್ಶನವನ್ನು ನೀಡಿದ್ದೇನೆ, ಇದರಿಂದ ನನಗೆ ಕಷ್ಟ ಆಗಿದೆ. ಆದರೆ ನನ್ನ ಕಷ್ಟಕ್ಕೆ ಯಾರು ಸ್ಪಂದಿಸಿಲ್ಲ. ನಾನು ಎಷ್ಟು ಕಷ್ಟದಲ್ಲಿ ಇದ್ದೇನೆ ಎನ್ನುವುದನ್ನು ಕೂಡ ಯಾರೂ ನೋಡಲಿಲ್ಲ. ಹೀಗಾಗಿ ಈಗ ಹಣ ಕೊಟ್ಟರೆ ಮಾತ್ರ ಸಂದರ್ಶನ ಕೊಡುತ್ತೇನೆ ಬೇಕಾದರೆ ತೆಗೆದುಕೊಳ್ಳಿ, ಇಲ್ಲವಾದರೆ ಬಿಡಿ ಎಂದು ಸಂಜಯ್ ಸಿಂಗ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಆಡಿಯೋ ಸತ್ಯಾಸತ್ಯತೆಯ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
ಇನ್ನುಳಿದಂತೆ ಪವಿತ್ರಾ ಗೌಡ ಅವರನ್ನು ಸಂಜಯ್ ಸಿಂಗ್ 2007ರ ಆಸು ಪಾಸಿನಲ್ಲಿ ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಒಬ್ಬಳು ಮಗಳು ಕೂಡ ಇದ್ದಾಳೆ. 2013ರ ಆಗಸ್ಟ್ ತಿಂಗಳಿನಲ್ಲಿ ವಿಚ್ಛೇದನ ಪಡೆದು ಇಬ್ಬರು ದೂರವಾದರು. ಅಲ್ಲಿಂದ ಸಂಜಯ್ ಸಿಂಗ್ ಎಲ್ಲಿದ್ದರೋ ಗೊತ್ತಿಲ್ಲವಾದರೂ ಪವಿತ್ರಾ ಗೌಡ ಅವರ ಹೆಸರು ರೇಣುಕಾ ಸ್ವಾಮಿ ಪ್ರಕರಣದಲ್ಲಿ ಕೇಳಿ ಬಂದ ನಂತರ ಸಂಜಯ್ ಸಿಂಗ್ ಮಾಧ್ಯಮದವರ ಮುಂದೆ ಬಂದಿದ್ದರು. ಮಾತನಾಡಲು ಶುರು ಮಾಡಿದ್ದರು. ಇನ್ನು ಪವಿತ್ರಾ ಗೌಡ ಮೊನ್ನೆ ಜೈಲಿಂದ ಹೊರ ಬಂದ ನಂತರ TV9 ಕನ್ನಡ ಜೊತೆ ಮಾತನಾಡಿದ್ದ ಸಂಜಯ್ ಸಿಂಗ್ ಹೇಗಾದರೂ ಅವರು ಹೊರಗೆ ಬರಲಿ ಎಂದು ನಾನು ಪ್ರಾರ್ಥನೆ ಮಾಡುತ್ತಿದ್ದೆ, ಪವಿತ್ರಾ ಗೌಡ ಈ ಕೇಸ್ನಿಂದ ಶಾಶ್ವತವಾಗಿ ಹೊರ ಬರಲಿ ಎಂದು ಹರಕೆ ಹೊತ್ತುಕೊಂಡಿದ್ದೇನೆ ಎಂದು ಹೇಳಿದ್ದರು.


Click it and Unblock the Notifications











