ಕಿಚ್ಚ-ದಚ್ಚು ಬಿರುಕಿನ ರಹಸ್ಯ ಸ್ಫೋಟಿಸಿದ ಸುದೀಪ್ ಸಾಂಸ್ಕೃತಿಕ ಪರಿಷತ್ತು: ಇದು ನಿಜವೇ.?
ಒಂದ್ಕಾಲದಲ್ಲಿ ಸ್ನೇಹದ ಕಡಲಿನಲ್ಲಿ ತೇಲಾಡುತ್ತಿದ್ದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯೆ ಬಿರುಗಾಳಿ ಬೀಸಿದೆ. ಪರಿಣಾಮ, ಇಬ್ಬರ ಸ್ನೇಹ ಸೇತುವೆಯಲ್ಲಿ ಬಿರುಕು ಮೂಡಿದೆ.
ಕೆಚ್ಚೆದೆಯ ಕಿಚ್ಚ ಸುದೀಪ್ ಮೇಲೆ ದರ್ಶನ್ ಮುನಿಸಿಕೊಳ್ಳಲು 'ಮೆಜೆಸ್ಟಿಕ್' ಸಿನಿಮಾದ ಕುರಿತು ಸಂದರ್ಶನವೊಂದರಲ್ಲಿ ಸುದೀಪ್ ನೀಡಿದ್ದ ಹೇಳಿಕೆ ಕಾರಣ ಎಂಬುದು ಈಗ ಜಗಜ್ಜಾಹೀರು. ಆದ್ರೆ, ಇದು ನೆಪ ಮಾತ್ರ ಎಂದು 'ಸುದೀಪ್ ಸಾಂಸ್ಕೃತಿಕ ಪರಿಷತ್ತು' ಅಭಿಪ್ರಾಯ ಪಟ್ಟಿದೆ. ಸಾಲದಕ್ಕೆ ಒಂದು ಬಹಿರಂಗ ಪತ್ರ ಬರೆದಿದೆ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]
ಆ ಪತ್ರದಲ್ಲಿ ಸುದೀಪ್-ದರ್ಶನ್ ನಡುವಿನ ಗೆಳೆತನ ಮುರಿದು ಬೀಳುವುದರ ಹಿಂದಿನ ರಹಸ್ಯ ಬರೆಯಲಾಗಿದೆ. ಅಷ್ಟಕ್ಕೂ ಪತ್ರದಲ್ಲಿ ಉಲ್ಲೇಖವಾಗಿರುವ ಅಂಶಗಳು ಎಷ್ಟರ ಮಟ್ಟಿಗೆ ನಿಜ ಎಂಬುದು ಸ್ವತಃ ಸುದೀಪ್ ರವರೇ ಸ್ಪಷ್ಟನೆ ನೀಡಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 'ಸುದೀಪ್ ಸಾಂಸ್ಕೃತಿಕ ಪರಿಷತ್ತು' ಬರೆದಿರುವ ಪತ್ರ ಇಲ್ಲಿದೆ ಓದಿರಿ... ('ಸುದೀಪ್ ಸಾಂಸ್ಕೃತಿಕ ಪರಿಷತ್ತು' ಬರೆದಿರುವ ಪತ್ರದ ಯಥಾವತ್ ಸಾಲುಗಳಿವು)

ಎಲ್ಲರಿಗೂ ಗೊತ್ತಿರುವ ವಿಷ್ಯವಂತೆ.!
''#ಸುದೀಪ್_ನಾನು_ಫ್ರೆಂಡ್ಸ್_ಅಲ್ಲ - #ದರ್ಶನ್''
''ಫ್ರೆಂಡ್ಸ್ ಅಲ್ಲವೆಂಬುದು ಎಲ್ಲರಿಗೂ ತಿಳಿದಿದ್ದ ವಿಷ್ಯ. ಆದ್ರೆ ಈಗ ಘೋಷಣೆಯಾಗಿದೆ ಎಂಬುದಷ್ಟೆ ಹೊಸ ವಿಷಯ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು ['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಇಬ್ಬರ ಸ್ನೇಹ ಬಾಳಿಕೆ ಬರಲ್ಲ ಎಂಬ ಅಂದಾಜಿತ್ತಂತೆ.!
''ಸುದೀಪ್ ಮತ್ತು ದರ್ಶನ್ ಇಬ್ಬರೂ ನೇರ ನಡೆ ನುಡಿಯವರು. ಅನಿಸಿದ್ದನ್ನು ಪರಿಣಾಮಗಳ ಬಗ್ಗೆ ಚಿಂತಿಸದೆ ಹೇಳಿಬಿಡಬಲ್ಲಷ್ಟು ಹುಂಬರು ಕೂಡ. ಇಂತಹ ಮನೋಭಾವದ ಇಬ್ಬರು ಜೊತೆಯಾದಾಗಲೇ ಈ ಸ್ನೇಹ ತುಂಬಾ ದಿನ ಬಾಳಿಕೆ ಬರುವುದಿಲ್ಲವೆಂಬ ಅಂದಾಜಿತ್ತು. ಆ ಅಂದಾಜಿಗೆ ಇವತ್ತು ಒಪ್ಪಿತ ಮುದ್ರೆ ಬಿದ್ದಿದೆ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು [ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ವಿವಾದಗಳ ಕೇಂದ್ರ ಬಿಂದುವಾದ ಸುದೀಪ್
''ಯಾರದೋ ಕೈವಶದಲ್ಲಿದ್ದ ಚಿತ್ರರಂಗದಲ್ಲಿ ಸುದೀಪ್ ಮತ್ತು ದರ್ಶನ್ ಹೊಸಗಾಳಿ ಬೀಸುವಂತೆ ಮಾಡಿದವರು. ಪಟ್ಟಭದ್ರಹಿತಾಸಕ್ತಿಗಳು ಮತ್ತು ಪೂರ್ವಾಗ್ರಹಗಳಿಗೆ ಸೊಪ್ಪು ಹಾಕದೆ ಎತ್ತರವೇರಿ ನಿಂತವರು ಇವರು. ಈ ಕಾರಣಕ್ಕೋ ಏನೋ, ಇವರಿಬ್ಬರನ್ನೂ ವಿವಾದಗಳು ಇಲ್ಲಿವರೆಗೂ ಬಿಡಲೇ ಇಲ್ಲ. ಇದರಲ್ಲಿ ದರ್ಶನ್ ತನಗೆ ಸಂಬಂಧಿತ ವಿಷಯಗಳಿಗೆ ಮತ್ತು ತಾನು ಆಡಿದ ಮಾತುಳಿಂದಾದ ವಿವಾದಗಳಿಗೆ ಮಾತ್ರ ಜವಾಬ್ದಾರಿಯನ್ನು ಹೊರುವಂತಾದರೆ, ಸುದೀಪ್ ಮಾತ್ರ ತನ್ನದು ಮತ್ತು ತನ್ನದಲ್ಲದ ಬೇರೆ ಬೇರೆ ಕಾರಣಗಳಿಗೆ ವಿವಾದದ ಕೇಂದ್ರಬಿಂದು ಆಗುತ್ತಲೇ ಹೋದರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು [ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ಸುದೀಪ್ ಹೆಗಲ ಮೇಲೆ ಕೋವಿಯಿಟ್ಟು, ಗುಂಡು ಹಾರಿಸಿದರು
''ಸುದೀಪರ ಹೆಗಲ ಮೇಲೆ ಕೋವಿಯಿಟ್ಟು, ಬೇರಾವುದೋ ಗುರಿಯತ್ತ ಗುಂಡು ಹಾರಿಸಿದವರು ಒಬ್ಬಿಬ್ಬರಲ್ಲ. ಸುದೀಪ್ ಬಗ್ಗೆ ವಿವಾದಗಳೇನೇ ಇರಲಿ ಅವರು ಅಪ್ಪಟ ಡಾ.ವಿಷ್ಣುವರ್ಧನ್ ಅಭಿಮಾನಿಯೆಂಬುದು ಸೂರ್ಯಚಂದ್ರರಷ್ಟೇ ಸತ್ಯ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು [ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!]

ಮಾನಸಿಕ ಹಿಂಸೆ ಅನುಭವಿಸಿದ ಸುದೀಪ್
''ಸುದೀಪ್ ಅವರ ಜೊತೆ ಒಂದರ್ಧ ಗಂಟೆ ಮಾತನಾಡಿ ಬಂದರೆ ಕನಿಷ್ಠ ನಾಲ್ಕು ಸಲವಾದರೂ ವಿಷ್ಣು ಸರ್ ಪ್ರಸ್ತಾಪ ಅವರ ಮಾತಲ್ಲಿ ಬಂದು ಹೋಗುತ್ತೆ. ಈ ಅಭಿಮಾನ ಅವರಿಗೆ ದೊಡ್ಡ ಅಭಿಮಾನ ಬಳಗವನ್ನು ಕೊಟ್ಟಿತು ನಿಜ, ಆದರೆ ಅದನ್ನು ಮೀರಿಸುವಷ್ಟು ನೋವು ಮತ್ತು ಮಾನಸಿಕ ಹಿಂಸೆಯನ್ನು ಕೊಟ್ಟಿದ್ದು ಸುಳ್ಳಲ್ಲ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು [ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?]

ಕುಹಕ ನುಡಿ ಆರಂಭ
''ವಿಷ್ಣುವರ್ಧನ' ಸಿನಿಮಾಗಿಂತ ಮುಂಚೆಯೇ ಅವರು ಅಮಿತಾಬ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು, ರಾಜಮೌಳಿಯ 'ಈಗ' ಸಿನಿಮಾದಲ್ಲಿ ನಟಿಸುತ್ತಿದ್ದರು ಆದರೂ ವಿಷ್ಣು ಅವರಿಂದಲೇ ಮೇಲೆ ಬಂದ ಎನ್ನುವಂತಹ ಕೆಲವು ಕುಹಕ ನುಡಿಗಳನ್ನು ಅವರು ಕೇಳಬೇಕಾಗಿತ್ತು. ಅದು ಸ್ವಾಭಾವಿಕವಾಗಿಯೇ ಅವರಲ್ಲಿ ಬೇಸರ ತಂದಿದ್ದರೂ ವಿಷ್ಣು ಅವರ ಅಸಂಖ್ಯಾತ ಅಭಿಮಾನಿಗಳ ಜೊತೆಯಾದುದನ್ನು ನೋಡಿ ಅವರಿಗಾಗಿ ಸುಮ್ಮನಿದ್ದರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು [ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!]

ಡಾ.ವಿಷ್ಣು ರವರನ್ನ ವಿರೋಧಿಸಿದವರು ಸುದೀಪ್ ರವರನ್ನೂ ವಿರೋಧಿಸಿದರು!
''ಡಾ.ವಿಷ್ಣು ಅವರು ಬದುಕಿದ್ದಾಗ ಅವರಿಗೆ ತೊಂದರೆ ಕೊಟ್ಟವರು, ಷಡ್ಯಂತ್ರ ರೂಪಿಸಿದವರು 'ವಿಷ್ಣುವರ್ಧನ' ಸಿನಿಮಾ ಬಂದ ಕೂಡಲೇ ಸುದೀಪ್ ವಿರುದ್ಧ ಕಾರ್ಯಪ್ರವೃತ್ತರಾಗಿಬಿಟ್ಟರು. ಡಾ.ವಿಷ್ಣು ಅವರನ್ನು ವಿರೋಧಿಸುತ್ತಿದ್ದವರೆಲ್ಲರೂ ಸುದೀಪ್ ಅವರನ್ನು ವಿರೋಧಿಸಲು ಶುರು ಹಚ್ಚಿಕೊಂಡುಬಿಟ್ಟರು. ಈ ಹಿಂದೆ ವಿಷ್ಣುವರ್ಧನ್ ಅವರಿಗೆ ಏನೆಲ್ಲಾ ತೊಂದರೆಗಳು ಸಿಗುತ್ತಿದ್ದವೋ ಆ ಎಲ್ಲಾ ತೊಂದರೆಗಳು ಸುದೀಪರಿಗೂ ಲಭ್ಯವಾದವು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಸುದೀಪ್-ದರ್ಶನ್ ಗೆಳೆಯರಾಗಿದ್ದು ಹೀಗಂತೆ.!
''ಹೆಜ್ಜೆ ಹೆಜ್ಜೆಗೂ ಅವಮಾನಗಳು, ನೋವುಗಳು ಜಾಗ ಮಾಡಿಕೊಂಡವು. ಇದೇ ಸಮಯಕ್ಕೆ ಸರಿಯಾಗಿ ದರ್ಶನ್ ಕೌಟುಂಬಿಕ ಕಲಹದ ಕಾರಣಕ್ಕೆ ಜೈಲುವಾಸ ಮುಗಿಸಿ ಬಂದಿದ್ದರು. ಹೀಗೆ ಇಬ್ಬರೂ ನೋವುಂಡವರು, ತಮ್ಮ ವಿರುದ್ಧವಿರುವ ಕೆಲವು ಕಾಣದ ಕೈಗಳನ್ನು ಎದುರಿಸಲೋಸುಗ ಕುಚುಕುಗಳಾಗಿ ಮಾರ್ಪಟ್ಟರೇ ವಿನಃ ಇಬ್ಬರ ಮಧ್ಯೆ ಗಾಡ ಸ್ನೇಹವೇನೂ ಇರಲಿಲ್ಲ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಸುದೀಪ್ ವಿರುದ್ಧ ಕತ್ತಿ ಜಳಪಿಸಿಬಿಟ್ಟರು.!
''ಇಬ್ಬರೂ ಜೊತೆಯಾದ ಮೇಲೆ ಬಂದ ಸುದೀಪರ ಮೊದಲ ಸಿನಿಮಾ 'ಬಚ್ಚನ್'. ಆ ಸಿನಿಮಾ ಸುದೀಪರ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಅದ್ಭುತವಾದ ಓಪನಿಂಗ್ ಪಡೆದುಕೊಂಡುಬಿಟ್ಟಿತು. ಇದೊಂದೇ ಕಾರಣವಿಟ್ಟುಕೊಂಡು, ವಿರೋಧಿಗಳು ಸುದೀಪ್ ವಿರುದ್ದ ಮತ್ತೆ ಕತ್ತಿ ಜಳಪಿಸಿಬಿಟ್ಟರು. ನಿನ್ನ ಸ್ನೇಹ ಸಿಕ್ಕ ಕಾರಣಕ್ಕೆ, ನಿನ್ನ ಅಭಿಮಾನಿಗಳು ಸಿನಿಮಾ ನೋಡಿದ ಕಾರಣಕ್ಕೆ ಸುದೀಪ್ ಗೆ ಅಷ್ಟು ದೊಡ್ಡ ಓಪನಿಂಗ್ ಸಿಕ್ಕಿದೆ. ಇನ್ನಾದರೂ ಸುದೀಪ್ ಗೆಳೆತನ ಬಿಟ್ಟುಬಿಡು ಅಂತ ದರ್ಶನ್ ಅವರ ಖಾಸಾ ದೋಸ್ತುಗಳು, ಸಂಬಂಧಿಕರು ದರ್ಶನ್ ಮೇಲೆ ಒತ್ತಡವೇರಲಾರಂಭಿಸಿದರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ದರ್ಶನ್ ಗೆ ಇತ್ತಾ ಅಸಹನೆ.?
''ಕುಚುಕು ಹ್ಯಾಂಗೋವರ್ ನಲ್ಲಿದ್ದ ದರ್ಶನ್ ಇಂತಹ ಮಾತುಗಳಿಗೆ ಸೊಪ್ಪು ಹಾಕಲಿಲ್ಲವಾದರೂ ಮನದ ಮೂಲೆಯಲ್ಲೆಲ್ಲೋ ಒಂದು ರೀತಿಯ ಅಸಹನೆ ಇದ್ದೇ ಇತ್ತು ಅನಿಸುತ್ತೆ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಸುದೀಪ್ ರವರಲ್ಲಿ ಆದ ಬದಲಾವಣೆ
''ಅಲ್ಲಿಂದ ಸುದೀಪ್ ಸಹ ತನ್ನ ನಟನೆಯ ಚಿತ್ರಗಳಲ್ಲಿ ಅಮೂಲಾಗ್ರ ಬದಲಾವಣೆ ಮಾಡಿಕೊಂಡುಬಿಟ್ಟರು. ಆಟೋಗ್ರಾಫ್, ಶಾಂತಿನಿವಾಸ, ಸ್ವಾತಿಮುತ್ತು ತರಹದ ಚಿತ್ರಗಳತ್ತ ವಿಶೇಷ ಒಲವಿದ್ದಂತಹ ಸುದೀಪ್ ಅನಿವಾರ್ಯ ಕಾರಣಗಳಿಂದ ಕಮರ್ಷಿಯಲ್ ಸಿನಿಮಾಗಳತ್ತ ಮುಖಮಾಡಿಬಿಟ್ಟರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಸುದೀಪ್ ಗೆ ಬೇಸರವಾಗಿತ್ತೇ.?
''ಬಹುತೇಕ ಕ್ಲಾಸ್ ಪ್ರೇಕ್ಷಕರನ್ನು ಹೊಂದಿದ್ದ ಸುದೀಪ್ ಮಾಸ್ ಪ್ರೇಕ್ಷಕರತ್ತ ಗಮನ ಹರಿಸಿದರು ಎಂಬಲ್ಲಿಗೆ ಅವರ ಸಿನಿ ಜೀವನದ ಎರಡನೇ ಮಹತ್ವದ ಅಧ್ಯಾಯ ಶುರುವಾಗುತ್ತದೆ. ಆ ಅಧ್ಯಾಯದ ಮೊದಲ ಸಿನಿಮಾ 'ಮಾಣಿಕ್ಯ'. ಆ ಸಿನಿಮಾ ಎಕ್ಟ್ಟ್ರಾಡಿನರಿ ಓಪನಿಂಗ್ ಪಡೆದುಕೊಳ್ಳುತ್ತದೆ. ಅದಕ್ಕೂ ದರ್ಶನ್ ಅಭಿಮಾನಿಗಳೇ ಕಾರಣ ಎನ್ನಲಾಗುತ್ತದೆ. ಸಹಜವಾಗಿಯೇ ಸುದೀಪ್ ಅವರಿಗೆ ಬೇಸರವಾದರೂ ಎಲ್ಲೂ ಸಹ ದರ್ಶನ್ ಅವರನ್ನು ಬಿಟ್ಟುಕೊಟ್ಟು ಮಾತನಾಡಲೇ ಇಲ್ಲ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಹೃದಯ ವೈಶಾಲ್ಯತೆ ಮೆರೆದಿದ್ದ ಸುದೀಪ್
''ದರ್ಶನ್ ಅವರನ್ನು ಎಲ್ಲರೂ ಖಳನಾಯಕನ ತರ ನೋಡುತ್ತಿದ್ದ ಸಂದರ್ಭದಲ್ಲಿ, "ಎಲ್ಲರೂ ತಪ್ಪು ಮಾಡುತ್ತಾರೆ, ಆದರೆ ಕೆಲವರು ಮಾತ್ರ ಸಿಕ್ಕಿಬೀಳುತ್ತಾರೆ ಅಷ್ಟೆ" ಎಂದು ಖಡಕ್ಕಾಗಿ ಉತ್ತರಿಸಿ ದರ್ಶನ್ ಅವರ ಪರವಾಗಿ ಅವರು ನಿಂತಿದ್ದರು. ನಂತರ ತಾನೂ ಒಬ್ಬ ಸೂಪರ್ ಸ್ಟಾರ್ ಆಗಿದ್ದರೂ ಸಹ ನನ್ನ ಗೆಳೆಯ ದರ್ಶನ್ ಕನ್ನಡ ಚಿತ್ರರಂಗದ ಸದ್ಯದ ನಂ.1 ಎಂದು ಟ್ವೀಟ್ ಮಾಡಿ ಹೃದಯ ವೈಶಾಲ್ಯತೆ ಮೆರೆಯುತ್ತಾರೆ. ಅಷ್ಟ್ಯಾಕೆ ಮೊನ್ನೆ ಮೊನ್ನೆ ಜೀ ಟಿವಿ ಸುದೀಪ್ ಅವರಿಗೆ "ಎಂಟರ್ ಟೈನರ್ ಆಫ್ ದಿ ಡಿಕೇಡ್" ಅಂತ ಪ್ರಶಸ್ತಿ ಕೊಟ್ಟರೆ, ಅದನ್ನು ಸ್ವೀಕರಿಸುವಾಗ "ಈ ಪ್ರಶಸ್ತಿಯನ್ನು ನಾನು ದರ್ಶನ್ ಮತ್ತು ಪುನೀತ್" ಪರವಾಗಿ ಪಡೆಯುತ್ತೇನೆ ಅಂತ ನೆನಪಿಸಿಕೊಳ್ಳುತ್ತಾರೆ'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಇದು ನಿಜವೇ.?
''ಮತ್ತೊಂದು ಆಸಕ್ತಿಕರ ವಿಷಯವೇನೆಂದರೆ ಇವರ 'ರನ್ನ' ಸಿನಿಮಾದಲ್ಲಿ ಸಂಭಾಷಣೆಕಾರರು ಒಂದು ಡೈಲಾಗ್ ಬರೆದಿದ್ದರಂತೆ "ನನ್ನ ತಂಟೆಗೆ ಬಂದ್ರೆ ಐರಾವತ ಆದ್ರೂ ಅಡ್ಡಡ್ಡ ಮಲಗಿಸ್ತೀನಿ ಅಂತ" ಶೂಟಿಂಗ್ ಕೂಡ ಮುಗಿದು ಹೋಗಿತ್ತಂತೆ. ಆದ್ರೆ ಅಷ್ಟೊತ್ತಿಗೆ ದರ್ಶನ್ ಅವರ ಐರಾವತ ಸಿನಿಮಾ ಅನೌನ್ಸ್ ಆದ ಸುದ್ದಿ ತಿಳಿದ ಸುದೀಪ್ ಕೂಡಲೇ ಆ ಡೈಲಾಗ್ ಅನ್ನು ತೆಗೆಸುವುದರ ಜೊತೆಗೆ ಆ ಭಾಗವನ್ನು ಹೊಸದಾಗಿ ಶೂಟ್ ಮಾಡಿಸಿದರಂತೆ!! ಇಷ್ಟೆಲ್ಲಾ ಪ್ರೀತಿಯನ್ನು ಮನದಾಳದಲ್ಲಿ ಪ್ರೀತಿ ಇಲ್ಲದಿದ್ದರೆ ತೋರಲಾದೀತೆ..'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಇದು ಸತ್ಯವೇ... ಸುದೀಪ್ ಸ್ಪಷ್ಟನೆ ಕೊಡಿ...
''ಅವತ್ತು ಡಾ.ರಾಜ್ ಸ್ಮಾರಕ ಲೋಕಾರ್ಪಣೆ ಆದ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರೂ ಪ್ರತ್ಯೇಕವಾಗಿ ವೇದಿಕೆಗೆ ಬಂದಾಗಲೇ ಇವರಿಬ್ಬರ ಸ್ನೇಹ ಒಂದು ಲೆವೆಲ್ಲಿಗೆ ಕೆಟ್ಟುಹೋಗಿತ್ತು. ಆ ರಾತ್ರಿ ದರ್ಶನ್ ಡಾ.ಶಿವರಾಜ್ ಕುಮಾರ್ ಅವರ ಜೊತೆ ಫೋಟೋ ತೆಗೆಸಿಕೊಂಡದ್ದು, ಅಂಬರೀಷ್ ದಂಪತಿಗಳು ಮಧ್ಯಸ್ಥಿಕೆ ವಹಿಸಿದ್ದು ಎಲ್ಲವೂ ಪತ್ರಿಕೆಗಳಲ್ಲಿ ಜಗಜ್ಜಾಹೀರು ಆದ ಮೇಲೆ, ಸುದೀಪ್ ಅವರು ಆಲ್ಮೋಸ್ಟ್ ಏಕಾಂಗಿಯಾಗಿಬಿಟ್ಟಿದ್ದರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

'ರಣವಿಕ್ರಮ' ವರ್ಸಸ್ 'ರನ್ನ'
''ರಾಜ್ ಕುಟುಂಬದ ವಿರುದ್ಧ ದರ್ಶನ್ ರನ್ನು ಎತ್ತಿಕಟ್ಟುತ್ತಿರೋದು ಸುದೀಪೇ ಅಂತ ಹುಯಿಲೆಬ್ಬಿಸಿಬಿಟ್ಟರು. ಅಲ್ಲಿಗೆ ದರ್ಶನ್ ಗೆ ಇದ್ದ ಖಳನಾಯಕನ ಇಮೇಜ್ ಸುದೀಪ್ ಗೆ ವರ್ಗಾಯಿಸಲ್ಪಟ್ಟಿತ್ತು. ಅದರ ಎಫೆಕ್ಟ್ ಎಂಬಂತೆ ಪುನೀತ್ ರಾಜ್ ಕುಮಾರ್ ಅವರ 'ರಣವಿಕ್ರಮ' ಸಿನಿಮಾ ಬಿಡುಗಡೆ ದಿನ ಸಂತೋಷ ಥಿಯೇಟರಿನಲ್ಲಿ 'ರನ್ನ' ಚಿತ್ರದ ಟ್ರೈಲರ್ ಹಾಕಿದಾಗ ರಾಜ್ ಕುಟುಂಬದ ಅಭಿಮಾನಿಗಳು ಅಕ್ಷರಶಃ ಸಿಡಿದೆದ್ದಿದ್ದರು. ಪರದೆಯೆತ್ತ ಬಾಟಲ್ ಎಸೆದು, ಕುರ್ಚಿಗಳನ್ನು ಮುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಡಾ.ಶಿವರಾಜ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದರು ಕೂಡ. ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸುದೀಪ್ ತನ್ನದಲ್ಲದ ತಪ್ಪಿಗೆ ತಾನು ವಿಲನ್ ಆಗುತ್ತಿರುವುದನ್ನು ಕಂಡು ಬೇಸತ್ತು ಹೋಗಿದ್ದರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

'ವಿಲನ್' ಆರಂಭ ಆಗಿದ್ದು ಹೇಗೆ.?
''ಯಾರನ್ನೋ ನಂಬಿ ಕಳೆದುಕೊಂಡಿದ್ದ ಸಂಬಂಧಗಳತ್ತ ಮತ್ತೆ ದೃಷ್ಠಿನೆಟ್ಟರು. ತಾನಾಡುವ ಮಾತುಗಳನ್ನು ಅಳೆದು ತೂಗಿ ಹೇಳಲಾರಂಭಿಸಿದರು. ಅದರ ಪ್ರಯುಕ್ತ ಶುರುವಾದ ಸಿನಿಮಾವೇ 'ಕಲಿ' ಅಥವಾ ಈಗಿನ 'ವಿಲನ್''' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಸ್ನೇಹ ಮುರಿದು ಬೀಳಲು ಕಾರಣ ಇದೇನಾ.?
''ಇವೆಲ್ಲವನ್ನು ನೋಡಿ ದರ್ಶನ್ ಯಾವತ್ತೋ ಇವತ್ತಿನ ಟ್ವೀಟ್ ಮಾಡಿರಬೇಕಿತ್ತು. ಆದರೆ ಸುದೀಪ್ ಚಿತ್ರಗಳೆಂದರೆ ಎಬೌ ಆವರೇಜ್ ಅವನ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತ ಅವರ ಪಾಡಿಗೆ ಅವರಿದ್ದುಬಿಟ್ಟಿದ್ದರು. ಆದರೆ ಯಾವಾಗ 'ಹೆಬ್ಬುಲಿ' ಸಿನಿಮಾ ಈ ಪರಿ ರೆಕಾರ್ಡ್ ಬ್ರೇಕ್ ಕಲೆಕ್ಷನ್ ಶುರು ಹಚ್ಚಿಕೊಂಡಿತೋ ಆಗ ದರ್ಶನ್ ತನ್ನ ಪರಮಾಪ್ತರ ಕಿವಿಮಾತನ್ನು ಕೇಳಿಸಿಕೊಂಡುಬಿಟ್ಟರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ದರ್ಶನ್ ಟ್ವೀಟ್
''ಸುದೀಪ್ ಅವರು 'ಮಾಣಿಕ್ಯ', 'ರನ್ನ', 'ಕೋಟಿಗೊಬ್ಬ-2', 'ಹೆಬ್ಬುಲಿ' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಿರುವುದನ್ನು ಮರೆತು, ತನ್ನ ಅಭಿಮಾನಿಗಳಿಂದಲೇ ಸುದೀಪ್ ಇಷ್ಟು ದೊಡ್ಡ ಹಿಟ್ ಪಡೆದುಕೊಂಡು ಬಿಟ್ಟ ಅಂತ ನಿರ್ಧರಿಸಿಬಿಟ್ಟರು. ಅದರ ಫಲವಾಗಿ #ನಾನು_ಸುದೀಪ್_ಸ್ನೇಹಿತರಲ್ಲ_ಕನ್ನಡ_ಚಿತ್ರರಂಗಕ್ಕಾಗಿ_ಕೆಲಸ_ಮಾಡುತ್ತಿದ್ದೇವೆ_ಅಷ್ಟೇ" ಎಂದು ಟ್ವೀಟಿಸಿಬಿಟ್ಟರು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಸುದೀಪ್ ಗೆ ಯಾವುದೇ ನಷ್ಟವಿಲ್ಲವಂತೆ!
''ಬಹುಶಃ ಭಾರತೀಯ ಚಿತ್ರರಂಗದಲ್ಲಿ ಸ್ನೇಹವಿಲ್ಲವೆಂದು ಟ್ವೀಟ್ ಮೂಲಕ ಹೇಳಿದ್ದು ಇವರೊಬ್ಬರೇ ಇರಬೇಕು. ಇದರಿಂದ ಮಗುಮನಸಿನ ದರ್ಶನ್ ಅವರಿಗೆ ಯಾವ ರೀತಿಯ ಪ್ರಯೋಜನವೋ ಗೊತ್ತಿಲ್ಲ. ಆದರೆ ಸುದೀಪ್ ಅವರಿಗಂತೂ ಯಾವುದೇ ನಷ್ಠವಿಲ್ಲ ಅನಿಸುತ್ತೆ. ಯಾಕೆಂದರೆ ಕನ್ನಡ ಸಿನಿಪ್ರಿಯರು ಕಥೆ ಇಷ್ಟವಾಗಿಬಿಟ್ರೆ, ಹೀರೋ, ವಾರು ಎಂಬುದಕ್ಕೆಲ್ಲಾ ತಲೆಕೆಡಿಸಿಕೊಂಡು ಕೂರೋಲ್ಲ. ಹೋಗ್ತಾ ಇರ್ತಾರೆ, ನೋಡ್ತಾ ಇರ್ತಾರೆ. ಅದಕ್ಕೇ ಅಲ್ವೇ 'ಕಿರಿಕ್ ಪಾರ್ಟಿ' 50 ಕೋಟಿ ವಹಿವಾಟು ನಡೆಸ್ತಿರೋದು. 'ಹೆಬ್ಬುಲಿ' ಎಲ್ಲಾ ದಾಖಲೆಗಳನ್ನು ಮುರೀತಿರೋದು'' - ಸುದೀಪ್ ಸಾಂಸ್ಕೃತಿಕ ಪರಿಷತ್ತು

ಇಲ್ಲಿಗೆ ನಿಲ್ಲಿಸೋಣ
''ಇನ್ನಾದರೂ ನಮ್ಮ ಸ್ಟಾರುಗಳಿಂದ ಪ್ರಬುದ್ಧ ನಡೆಯನ್ನು ನಿರೀಕ್ಷಿಸೋಣ. ಹೀರೋಗಳೇ ಈ ರೇಂಜಿಗೆ ಇಳಿದುಬಿಟ್ಟರೆ, ಇನ್ನು ಅಭಿಮಾನಿಗಳು ಯಾವ ರೇಂಜಿಗೆ ಜಗಳವಾಡಬೇಡ ಹೇಳಿ. ಆದ್ದರಿಂದ ಎಲ್ಲವನ್ನೂ ಇಲ್ಲಿಗೇ ನಿಲ್ಲಿಸೋಣ''
ನಿಮ್ಮ
ಸುದೀಪ್ ಸಾಂಸ್ಕೃತಿಕ ಪರಿಷತ್ತು.
('ಸುದೀಪ್ ಸಾಂಸ್ಕೃತಿಕ ಪರಿಷತ್ತು' ಬರೆದಿರುವ ಪತ್ರದ ಯಥಾವತ್ ಸಾಲುಗಳಿವು)


Click it and Unblock the Notifications











