ದರ್ಶನ್ ಬಿಡುಗಡೆ ಬೆನ್ನಲ್ಲೇ ಜೈಲಿಂದ ಹೊರ ಬಂದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ..!
ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ಯಾರು ತಾನೇ ಹೇಗೆ ಮರೆಯಲು ಸಾಧ್ಯ. ದರ್ಶನ್ ವೃತ್ತಿ ಬದುಕಿನ ಪ್ರಮುಖ ಮೈಲಿಗಲ್ಲಿನಲ್ಲಿ ಈ ಚಿತ್ರ ಕೂಡ ಒಂದು. ರಾಯಣ್ಣನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ದರ್ಶನ್ ತಮ್ಮ ಅಭಿನಯದಿಂದ ಜನ ಮನಸೂರೆಗೊಂಡಿದ್ದರು.
ಇನ್ನೂ.. ಈ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಆ ಕಾಲಕ್ಕೆ ಹಣವನ್ನು ನೀರಿನಂತೆ ಖರ್ಚು ಮಾಡಿದ್ದರು. ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆಯನ್ನು ಮಾಡಿದ್ದರು. ಆದರೆ, ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನಿರ್ಮಾಣ ಮಾಡಿದ ಆನಂದ್ ಅಪ್ಪುಗೋಳ್ ಆ ನಂತರ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡರು.

ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಶಾಖೆ ಹೊಂದಿದ್ದ ಸೊಸೈಟಿಯಲ್ಲಿ ಠೇವಣಿ ಇಟ್ಟ ಹಣವನ್ನು ಆನಂದ ಅಪ್ಪುಗೋಳ ಹಾಗೂ ಸೊಸೈಟಿಯ ನಿರ್ದೇಶಕರು ಸ್ವಂತ ಬಳಕೆಗೆ ಬಳಸಿಕೊಂಡ ಬಗ್ಗೆ 2017ರಲ್ಲಿ ಸಹಕಾರ ಇಲಾಖೆ ನಿಬಂಧಕರು ದೂರು ದಾಖಲಿಸಿದ್ದರು. ಸಂಕಷ್ಟಕ್ಕೆ ಒಳಗಾದ ಗ್ರಾಹಕರು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿ ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದರು. ಹೀಗೆ 250 ಕೋಟಿ ರೂ.ಗೂ ಅಧಿಕ ಮೊತ್ತದ ಠೇವಣಿ ವಂಚನೆ ಹಿನ್ನೆಲೆಯಲ್ಲಿ ಸಿಲುಕಿಕೊಂಡ ಆನಂದ ಅಪ್ಪುಗೋಳ ಆ ನಂತರ ಪ್ರೇಮಾ ಅಪ್ಪುಗೋಳ ಹಾಗೂ ಮುಖ್ಯ ವ್ಯವಸ್ಥಾಪಕರ ಜೊತೆ ಜೈಲು ಪಾಲಾಗಿದ್ದರು.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಆನಂದ್ ಅಪ್ಪುಗೋಳ್ ಆ ನಂತರ ಜಾಮೀನು ಪಡೆದು ಹೊರ ಬಂದರಾದರೂ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಹಕರಿಂದ ಠೇವಣಿಯಾಗಿ ಪಡೆದ ಕೋಟ್ಯಂತರ ರೂಪಾಯಿಯನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸಿತ್ತು. 2020ರಲ್ಲಿ ಆನಂದ ಅಪ್ಪುಗೋಳ್ ಒಡೆತನದಲ್ಲಿದ್ದ 31.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದಿರುವುದಾಗಿ ಇಡಿ ತಿಳಿಸಿತ್ತು.

ಅಪ್ಪುಗೋಳ್ ಅವರ ಹನುಮಾನ್ ನಗರದಲ್ಲಿನ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿನ ಜಾಗ, ತಾಲ್ಲೂಕಿನ ಬಿ. ಕೆ. ಬಾಳೇಕುಂದ್ರಿಯಲ್ಲಿನ ಮನೆ ಮತ್ತು ನೆಹರೂ ನಗರದಲ್ಲಿನ ಕಚೇರಿ ಹಾಗೂ ಅವರ ಹೆಸರಿನಲ್ಲಿನ ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಕುರಿತು ಬೆಳಗಾವಿಯ ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಆನಂದ ಅಪ್ಪಗೋಳ ಸೇರಿದಂತೆ ಇನ್ನು 15 ಜನರ ಮೇಲೆ ಐಪಿಸಿ 420, 408 ಮತ್ತು 406 ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಈಗ ಈ ವಿಚಾರದಲ್ಲಿ ಆನಂದ್ ಅಪ್ಪುಗೋಳ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಸಿಕ್ಕಿದೆ. ಈ ಮೂಲಕ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಸೆರೆವಾಸದಲ್ಲಿದ್ದ ಆನಂದ್ ಅಪ್ಪುಗೋಳ್ ಅವರಿಗೆ ರಿಲೀಫ್ ಸಿಕ್ಕಿದೆ ಎಂದು ಹಿರಿಯ ಪತ್ರಕರ್ತ ಶ್ಯಾಮ್ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ಧಾರೆ. ಅಂದ್ಹಾಗೇ ಆನಂದ್ ಅಪ್ಪುಗೋಳ್ ನಿರ್ಮಾಣದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಇದೇ ನವೆಂಬರ್ 22ರಂದು ರಾಜ್ಯದೆಲ್ಲೆಡೆ ಮರು ಬಿಡುಗಡೆಯಾಗುತ್ತಿದೆ. ತಮ್ಮ ಚಿತ್ರದ ರೀ ರಿಲೀಸ್ ಸಂದರ್ಭದಲ್ಲಿಯೇ ಆನಂದ್ ಅಪ್ಪುಗೋಳ್ ಜೈಲಿಂದ ಬಿಡುಗಡೆಯಾಗುತ್ತಿರುವುದು ವಿಶೇಷ.


Click it and Unblock the Notifications











