ಈಡೇರದೇ ಉಳಿದ ಕನಸಿನ ಬಗ್ಗೆ ಅನಂತ್ನಾಗ್ ಮಾತು
ಕನ್ನಡ ಚಿತ್ರರಂಗದ ಜಂಟಲ್ ಮ್ಯಾನ್, ಹಿರಿಯ ನಟ ಅನಂತ್ ನಾಗ್ ತನ್ನ ಬದುಕಿನ ಪರಮೋಚ್ಚ ಗುರಿಯ ಬಗ್ಗೆ ಮೊದಲ ಬಾರಿ ಮನಬಿಚ್ಚು ಮಾತನಾಡಿದ್ದಾರೆ. ನಟನಾಗುವ ಮೊದಲು ತಾನು ದೇಶ ಸೇವೆ ಮಾಡಲು ಸೇನೆಗೆ ಸೇರಲು ಪ್ರಯತ್ನಿಸಿದ್ದಾಗಿ ಅನಂತ್ ನಾಗ್ ಹೇಳಿದ್ದಾರೆ.
ತಮ್ಮ ಮುಂದಿನ ಚಿತ್ರ 'ಅಬ್ರಕಡಾಬ್ರ' ಚಲನಚಿತ್ರದ ಚಿತ್ರೀಕರಣಕ್ಕಾಗಿ ಉಡುಪಿಗೆ ಬಂದಿದ್ದ ಅನಂತ್ ನಾಗ್, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚಿಕ್ಕಂದಿನಿಂದಲೂ ದೇಶ ಸೇವೆ ಮಾಡಬೇಕೆಂದು ಬಹಳ ಆಸೆಯಿತ್ತು. ಸೇನೆಯ ಮೇಲೆ ಚಿಕ್ಕಂದಿನಿಂದಲೂ ಅಪಾರವಾದ ಒಲವಿತ್ತು. ಸೇನೆಗೆ ಸೇರಬೇಕೆಂದು ತುಂಬಾ ಆಸೆಯಿತ್ತು. ಅದಕ್ಕಾಗಿಯೇ ಶಾಲೆ ಮತ್ತು ಕಾಲೇಜಿನಲ್ಲಿ ಎನ್.ಸಿ.ಸಿ ಯನ್ನು ಸೇರಿಕೊಂಡೆ. ಎನ್.ಸಿ.ಸಿ ಯಲ್ಲಿ ದೇಶ,ಸೇನೆಯ ಬಗ್ಗೆ ಜ್ಞಾನ ಹೆಚ್ಚಾಯಿತು. ಕಾಲೇಜು ಜೀವನದಲ್ಲಿ ಎನ್.ಸಿ.ಸಿ ಯಲ್ಲಿ ಇದ್ದ ಸಂಧರ್ಭದಲ್ಲಿ ವಾಯು ಸೇನೆಯ ನೇರ ನೇಮಕಾತಿ ಪ್ರಕ್ರಿಯೆಗೆ ಹಾಜರಾಗಿದ್ದೆ. ಆದರೆ ಆಗ ನನ್ನ ದೇಹದ ತೂಕ ತುಂಬಾ ಕಡಿಮೆಯಾಗಿದ್ದ ಕಾರಣಕ್ಕೆ ರಿಜೆಕ್ಟ್ ಆದೆ. ಮತ್ತೆ ವಾಯು ಸೇನಾ ನೇಮಕಾತಿಗೆ ಹಾಜರಾದೆ. ಆದರೆ ಆ ಸಂಧರ್ಭದಲ್ಲೂ ನನ್ನ ಎಡಕಣ್ಣು ವೀಕ್ ಎಂದು ಅವಕಾಶವನ್ನು ನಿರಾಕರಿಸಿದ್ದರು ಅಂತಾ ಅನಂತ್ ನಾಗ್ ತನ್ನ ಜೀವನದ ಗುರಿಯ ಬಗ್ಗೆ ಹೇಳಿದ್ದಾರೆ.
ರಾಷ್ಟ್ರೀಯತೆಯ ವಿಚಾರದಲ್ಲಿ ಸದಾ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಅನಂತ್ ನಾಗ್ ಉಡುಪಿಯಲ್ಲೂ ತಾನು ಯಾಕೆ ದೇಶದ ಪರ ಎಂಬುವುದನ್ನು ಪುನರುಚ್ಚಿಸಿದ್ದಾರೆ. ಕೆಲವರು ಸ್ವಾರ್ಥ ರಾಜಕಾರಣಕ್ಕಾಗಿ ದೇಶದ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಾರೆ. ಇದನ್ನು ಸಹಿಸಲು ಆಗಲ್ಲ. ನನಗೇನು ರಾಜಕೀಯ, ರಾಜಕಾರಣದ ತೆವಲಿಲ್ಲ. ಆದರೆ ಕೆಲವರು ಸ್ವಾರ್ಥಕ್ಕಾಗಿ ದೇಶವನ್ನು ತೆಗಳುವಾಗ ಕೆಟ್ಟ ಕೋಪ ಬರುತ್ತದೆ ಅಂತಾ ಅನಂತ್ ನಾಗ್ ಹೇಳಿದ್ದಾರೆ.

ಮೋದಿಯನ್ನು ಹೊಗಳಿದ ಅನಂತ್ನಾಗ್
ಇನ್ನು ಪ್ರಧಾನಿಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯಸಾಧನೆಯ ಬಗ್ಗೆಯೂ ಮಾತನಾಡಿದ ಅನಂತ್ ನಾಗ್, ದೇಶದ ಹಿತಕ್ಕಾಗಿ ಪ್ರಧಾನಿ ಮೋದಿ ಅತ್ಯತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಾರೆ.ಇದಕ್ಕೆ ನನ್ನ ಬೆಂಬಲ ಸದಾ ಇದೆ. ನಮ್ಮ ಪೂರ್ವಜರು ಕಾಶ್ಮೀರಿ ಪಂಡಿತರಾಗಿದ್ದರು. ಆ ಬಳಿಕ ಕಾಶ್ಮೀರದಲ್ಲಿ ಏನೇನಾಯಿತು ಎಂಬುವುದು ಎಲ್ಲರಿಗೂ ತಿಳಿದಿದೆ. ಮೋದಿ ಪ್ರಧಾನಿಯಾದ ಮೇಲೆ ಕಾಶ್ಮೀರದಲ್ಲಿ ಮಾಡಿದ ಬದಲಾವಣೆ,ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣ, ಸೇನೆಯನ್ನು ಮೋದಿ ಹುರಿದುಂಬಿಸುವ ಪರಿಯ ಬಗ್ಗೆ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ ಅಂತಾ ಅನಂತ್ ನಾಗ್ ಹೇಳಿದ್ದಾರೆ.

ಬಾಲ್ಯವನ್ನು ಕಾಸರಗೋಡುವಿನ ಅನಂದಾಶ್ರಯದಲ್ಲಿ ಕಳೆದಿದ್ದೆ: ಅನಂತ್ ನಾಗ್
ಇನ್ನು ಕರಾವಳಿಯ ಬಗೆಗಿನ ನಂಟಿನ ಬಗ್ಗೆಯೂ ಅನಂತ್ ನಾಗ್ ಮಾತನಾಡಿದ್ದಾರೆ. ಬಾಲ್ಯವನ್ನು ಕಾಸರಗೋಡುವಿನ ಅನಂದಾಶ್ರಯದಲ್ಲಿ ಕಳೆದಿದ್ದೆ. ಆರರಿಂದ ಎಂಟನೇ ವಯಸ್ಸಿನ ವರೆಗೆ ಉಡುಪಿಯ ಅಜ್ಜರಕಾಡುವಿನ ಸಂತ ಸಿಸಿಲಿ ಕಾನ್ವೆಂಟ್ ನಲ್ಲಿ ಕಳೆದಿದ್ದೆ. ಉಡುಪಿ ಮತ್ತು ಕರಾವಳಿಗೆ ಬರುವಾಗ ಯಾವಗಲೂ ಬಾಲ್ಯದ ಅತ್ಯುತ್ತಮ ಜೀವನ ನೆನಪಾಸಗುತ್ತದೆ ಅಂತಾ ಅನಂತ್ ನಾಗ್ ಹೇಳಿದ್ದಾರೆ.

ಉಡುಪಿಗೆ ಬಂದಾಗಲೆಲ್ಲ ಕೃಷ್ಣ ಮಠಕ್ಕೆ ಭೇಟಿ ಮಾಡುವ ಅನಂತ್ನಾಗ್
ಉಡುಪಿಗೆ ಬಂದ ಪ್ರತಿ ಬಾರಿ ಯೂ ಅನಂತ್ ನಾಗ್ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ,ಕೃಷ್ಣ ನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದೇ ರೀತಿ ಈ ಬಾರಿಯೂ ಹುಟ್ಟಿದ ಹಬ್ಬದ ದಿನದಂದೇ ಶ್ರೀ ಕೃಷ್ಣ ದರ್ಶನ ಮಾಡಿದ ಅನಂತ್ ನಾಗ್, ಬಳಿಕ ಪರ್ಯಾಯ ಅದಮಾರು ಮಠದ ಈಶಪ್ರೀಯ ತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಅನಂತ್ ನಾಗ್ ಗೆ ಪತ್ನಿ ಗಾಯತ್ರಿಯೂ ಸಾಥ್ ನೀಡಿದ್ದಾರೆ. ಅನಂತ್ನಾಗ್ ನಿನ್ನೆಯಷ್ಟೆ 73ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಹೊಸಬರ ಸಿನಿಮಾದಲ್ಲಿ ನಟಿಸುವುದು ಇಷ್ಟ: ಅನಂತ್ನಾಗ್
ಅನಂತ್ನಾಗ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಅಬ್ರಕಡಬ್ರ' ಸಿನಿಮಾವನ್ನು ರಕ್ಷಿತ್ ಶೆಟ್ಟಿ ಮತ್ತು ರಾಜ್ ಮೋಹನ್ ನಿರ್ಮಾಣ ಮಾಡುತ್ತಿದ್ದಾರೆ. ಶಿಶಿರ್ ರಾಜ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ''ಹೊಸಬರ ಸಿನಿಮಾ ಆದರೂ ಕತೆ ಬಹಳ ಚೆನ್ನಾಗಿದೆ ಎಂಬ ಕಾರಣಕ್ಕೆ ಸಿನಿಮಾವನ್ನು ಒಪ್ಪಿಕೊಂಡೆ'' ಎಂದು ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಅನಂತ್ನಾಗ್ ಹೇಳಿದ್ದರು. ''ಹೊಸಬರು ಬಹಳ ಭಿನ್ನವಾದ ಕತೆ ಮಾಡಿಕೊಂಡು ಬರುತ್ತಾರೆ ಹಾಗಾಗಿ ನನಗೆ ಹೊಸಬರೊಟ್ಟಿಗೆ ಕೆಲಸ ಮಾಡಲು ಇಷ್ಟ. ನನ್ನ 'ಮೇಡ್ ಇನ್ ಬೆಂಗಳೂರು' ಸಿನಿಮಾವನ್ನು ಸಹ ಹೊಸಬರೇ ನಿರ್ದೇಶನ ಮಾಡುತ್ತಿದ್ದಾರೆ'' ಎಂದಿದ್ದರು ಅನಂತ್ನಾಗ್.


Click it and Unblock the Notifications











