ತಮ್ಮ ಕೊನೆಯ ನಾಟಕದಲ್ಲಿ ನಟಿಸಲು ಅನಂತ್ ನಾಗ್ ರಿಗೆ ಆಫರ್ ನೀಡಿದ್ರು ಕಾರ್ನಾಡ್
ಕಾರ್ನಾಡರ ಬರವಣಿಗೆ ನಿಂತಿದೆ. ಕೊನೆಯ ದಿನಗಳವರೆಗೆ ನಾಟಕಗಳ ರಚನೆಯಲ್ಲಿ ನಿರತರಾಗಿದ್ದ ಶ್ರೇಷ್ಠ ನಾಟಕಕಾರ ಪೆನ್ ಅನ್ನು ಪಕ್ಕಕ್ಕೆ ಇಟ್ಟು ಚಿರನಿದ್ರೆಗೆ ಜಾರಿದ್ದಾರೆ.
ಗಿರೀಶ್ ಕಾರ್ನಾಡ್ ನಿಧನಕ್ಕೆ ಹಿರಿಯ ನಟ ಅನಂತ್ ನಾಗ್ ಸಂತಾಪ ಸೂಚಿಸಿದ್ದಾರೆ. ಕಾರ್ನಾಡರು ತಮ್ಮ ಕೊನೆಯ ನಾಟಕ 'ರಾಕ್ಷಸ ತಂಗಡಿ'ಯಲ್ಲಿ ನಟಿಸು ಎಂದು ಅನಂತ್ ರಿಗೆ ಆಫರ್ ನೀಡಿದ್ದರಂತೆ. ಆದರೆ, ಈ ವಯಸ್ಸಿನಲ್ಲಿ ಮತ್ತೆ ರಂಗದ ಮೇಲೆ ನಟಿಸುವಷ್ಟು ಶಕ್ತಿ ಇಲ್ಲ ಎಂದು ಅನಂತ್ ನಾಗ್ ಹೇಳಿದ್ದರಂತೆ.
ಕಳೆದ ವರ್ಷ 'ರಾಕ್ಷಸ ತಂಗಡಿ' ನಾಟಕ ಬರೆದಾಗ ಫೋನ್ ಮಾಡಿ ಮಾತನಾಡಿದ್ದರು. ಅದನ್ನು ಓದಿದೆ. ತುಂಬ ಸುಂದರವಾಗಿ ಬರೆದಿದ್ದರು. ಅದರಲ್ಲಿ ಬರುವ ರಾಮರಾಯ ಪಾತ್ರದಲ್ಲಿ ನಟಿಸುತ್ತೀಯಾ ಎಂದು ಕೇಳಿದ್ದರು. ಈಗ ಆಗಲ್ಲ ಎಂದಿದ್ದೆ.'' ಎಂದು ಅವರ ಜೊತೆಗೆ ಮಾತನಾಡಿದ್ದ ಕೊನೆಯ ಸಂಭಾಷಣೆಯನ್ನು ವಿವರಿಸಿದರು.

''ಅವರು ನಮ್ಮ ನಾಡಿನ ದೊಡ್ಡ ನಾಟಕಕಾರರು. ಶಂಕರ್ ನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು. ನಾನು ಕೂಡ ಅವರ ಜೊತೆಗೆ ನಟಿಸಿದ್ದೇ. ಅವರು ಸಿನಿಮಾ ಮಾಡಿದ್ದರೂ ನನಗೆ ನಾಟಕಕಾರರಾಗಿ ತುಂಬ ಇಷ್ಟ. ಅವರ ಕುಟುಂಬಕ್ಕೆ ದೇವರು ನಿರ್ಗಮನವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ.'' ಎಂದು ಗಿರೀಶ್ ಕಾರ್ನಾಡ್ ರಿಗೆ ಅನಂತ್ ನಾಗ್ ಸಂತಾಪ ಸೂಚಿಸಿದ್ದಾರೆ.
ಇನ್ನು, ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಇಂದು ಬೆಳಗ್ಗೆ ಬೆಂಗಳೂರಿನ ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಳಿದಂತೆ, ನಟ ಕಮಲ್ ಹಾಸನ್, ಶಿವರಾಜ್ ಕುಮಾರ್, ಅನಂತ್ ನಾಗ್, ಸುಮಲತಾ ಅಂಬರೀಶ್ ಹೀಗೆ ಅನೇಕರು ಕಾರ್ನಾಡರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.


Click it and Unblock the Notifications











