twitter
    For Quick Alerts
    ALLOW NOTIFICATIONS  
    For Daily Alerts

    ಮುಕ್ಕಾಲು ಭಾಗ ಸ್ವಯಂಕೃತಾಪರಾಧಕ್ಕೆ, ಕಾಲು ಭಾಗ ಪರಿಸ್ಥಿತಿಯ ಪಿತೂರಿಗೆ ಬಲಿಯಾದ ಅನಂತ್‌ ಇವತ್ತು ಏನು ಮಾಡುತ್ತಿದ್ದಾರೆ ? ಸಿನಿಮಾ ಶೈಲಿಯ ತನಿಖಾ ವರದಿ !

    By Staff
    |

    * ಸತ್ಯನಾರಾಯಣ

    ಮುಂಜಾನೆದ್ದು ಜಗತ್ತಲ್ಲಿರುವ ಎಲ್ಲಾ ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಾರೆ, ಆಗಾಗ ಕಿರುಗುಟ್ಟುವ ಫೋನ್‌ಗೆ ಉತ್ತರಿಸುತ್ತಾರೆ, ತಮ್ಮ ಸಹಾಯಕ ಸುಬ್ಬು ಜೊತೆ ರಾಜಕೀಯದ ಬಗ್ಗೆ ಚರ್ಚಿಸುತ್ತಾರೆ. ಕಾಫಿ ಕುಡಿಯುತ್ತಾರೆ, ಮತ್ತೆ ಪೇಪರ್‌ ಹಿಡಿಯುತ್ತಾರೆ.

    ಮಧ್ಯಾಹ್ನದ ಹೊತ್ತಲ್ಲಿ ಮೂಡ್‌ ಬಂದರೆ ಒಂದು ರೌಂಡ್‌ ಅಶೋಕ ಹೋಟೆಲ್‌ ಕಡೆ ಹೋಗಿ ಬರುತ್ತಾರೆ. ಬಿಸಿಲು ಜಾಸ್ತಿಯಿದ್ದರೆ ಬಿಯರ್‌, ಕೊಂಚ ಚಳಿಯೆನಿಸಿದರೆ ಜಿನ್‌. ಸಂಜೆ ಆರಕ್ಕೆ ಮತ್ತೆ ಫ್ರೆಶ್‌ ಆಗುತ್ತಾರೆ. ಆಮೇಲೆ ಮುಂದಿನ ರೌಂಡ್‌ಗಳು ಶುರುವಾಗುತ್ತವೆ.

    ರಾಜಕೀಯದಲ್ಲಾಗಲಿ, ಸಿನಿಮಾದಲ್ಲಾಗಲೀ ಅನಂತ್‌ಗೆ ಈಗ ಆತ್ಮೀಯರ ಅಭಾವವಿದೆ. ಸಚಿವರಾಗಿದ್ದಾಗ ಮನೆ ಮುಂದೆ ಗಿಜಿಗುಡುತ್ತಿದ್ದ ಪಕ್ಷದ ಸದಸ್ಯರಾಗಲಿ, ಮನವಿಗಳನ್ನು ಹೊತ್ತು ಕಾಯುತ್ತಿದ್ದ ಸಾಮಾನ್ಯರಾಗಲೀ ಈಗ ಕಾಣೆಯಾಗಿದ್ದಾರೆ. ಇದು ರಾಜಕಾರಣಿಗಳೆಲ್ಲರೂ ಒಂದಲ್ಲಾ ಒಂದು ಹಂತದಲ್ಲಿ ಅನುಭವಿಸಲೇಬೇಕಾದ ಕರ್ಮ. ಸಚಿವರಾಗಿದ್ದಾಗ ಪಟೇಲ್‌ ಅವರ ಪರವಾಗಿ ನಿಂತಿದ್ದರಿಂದಾಗಲೀ, ಹೆಗಡೆ ಅವರನ್ನು ಎದುರು ಹಾಕಿಕೊಂಡಿದ್ದರಿಂದಾಗಲಿ ಅನಂತ್‌ಗೆ ಏನೂ ಲಾಭವಾಗಲಿಲ್ಲ. ಆ ಕ್ಷಣಕ್ಕೆ ಮಂತ್ರಿ ಪದವಿ ಸುರಕ್ಷಿತವಾಗಿ ಉಳಿದರೂ ಅನಂತರ ಪಟೇಲ್‌- ಹೆಗಡೆ ಪರಸ್ಪರ ಕೈ ಕುಲುಕಿದರು. ಅನಂತ್‌ಗೆ ಚುನಾವಣೆಯಲ್ಲಿ ಸೀಟು ಕೂಡ ಸಿಗಲಿಲ್ಲ. ಆ ಸಿಟ್ಟಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಏನೂ ಗಿ-ಟ-್ಟ-ಲಿಲ್ಲ.

    ಹೆಣ್ಣು ಮಕ್ಕಳೇ ಮೂತಿ ತಿರುವುತ್ತಾರೆ : ಹೀಗೆ ಮುಕ್ಕಾಲು ಭಾಗ ಸ್ವಯಂಕೃತಾಪರಾಧಕ್ಕೆ, ಕಾಲು ಭಾಗ ಪರಿಸ್ಥಿತಿಯ ಪಿತೂರಿಗೆ ಬಲಿಯಾದ ಅನಂತ್‌ ಒಂಟಿಯಾದರು. ರಾಜಕೀಯದಲ್ಲಿ ಇನ್ನು ಹೆಚ್ಚಿನ ಭವಿಷ್ಯವಿಲ್ಲ ಅನ್ನುವುದು ಅರಿವಾದದ್ದಕ್ಕೋ ಏನೋ ಮತ್ತೆ ಹಳೇ ಬೇರಿಗೆ ವಾಪಾಸಾಗುವ ಪ್ರಯತ್ನದಲ್ಲಿ ಈಗ ಅವರಿದ್ದಾರೆ. ಆದರೆ ಅಲ್ಲೂ ಇವರಿಗೆ ಸ್ನೇಹಿತರಿಲ್ಲ. ಅನಂತ್‌ ಇದ್ದರೆ ಮಧ್ಯಮ ವರ್ಗದ ಹೆಣ್ಮಕ್ಕಳು ಸಿನಿಮಾಗೆ ಬರುತ್ತಾರೆ ಅನ್ನುವ ಕಾಲವೂ ಆಗಿ ಹೋಗಿದೆ. ಅಷ್ಟೇಕೆ, ಅವರೇ ಪ್ರತಿನಿಧಿಸಿದ್ದ ಮಲ್ಲೇಶ್ವರಂ ಏರಿಯಾದ ಹೆಣ್ಮಕ್ಕಳೇ ಅನಂತ್‌ ಹೆಸರು ಹೇಳಿದರೆ ಮೂತಿ ತಿರುವುತ್ತಾರೆ.

    ರಾಜಕೀಯ ಒಗ್ಗಲಿಲ್ಲ , ರಾಜಕಾರಣಿಗೆ ಬೇಕಾದ ಯಾವ ಅರ್ಹತೆಯೂ ಅವರಲ್ಲಿಲ್ಲ

    ಅನಂತ್‌ ಮೇಲಿರುವ ಆರೋಪಗಳ ಪಟ್ಟಿ ದೊಡ್ಡದು. ಸಚಿವರಾಗಿದ್ದಾಗ ಕೆಲಸ ಮಾಡಲಿಲ್ಲ. ಸ್ವಂತಕ್ಕೆ ಚೆನ್ನಾಗಿ ದುಡಿದರು, ಚಿತ್ರೋದ್ಯಮದ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ತಮ್ಮ ರಾಜಕೀಯ ಗುರುವಿಗೇ ತಿರುಗಿ ಬಿದ್ದರು.... ಇತ್ಯಾದಿ. ಇವೆಲ್ಲದರ ಸತ್ಯಾಸತ್ಯತೆಯನ್ನು ಕೆದಕುವ ಬದಲಾಗಿ ಒಂದೇ ಮಾತಲ್ಲಿ ಹೇಳುವುದಾದರೆ, ರಾಜಕೀಯ ಅನಂತ್‌ಗೆ ಒಗ್ಗಲಿಲ್ಲ , ರಾಜಕಾರಣಿಗೆ ಬೇಕಾದ ಯಾವ ಅರ್ಹತೆಯೂ ಅವರಲ್ಲಿಲ್ಲ ಅನ್ನುವವರೂ ಇದ್ದಾರೆ. ಅವರು ರಾಜಕೀಯಕ್ಕೆ ಪ್ರವೇಶಿಸಿದ್ದರಿಂದ ವೈಯಕ್ತಿಕ ಹಂತದಲ್ಲಿ ಅವರಿಗೆ ಲಾಭವಾಗಿರಬಹುದು. ಇನ್ನೊಂದೆಡೆ ಚಾರಿತ್ರ್ಯಹರಣವೂ ಆಗಿರಬಹುದು. ಆದರೆ ಚಿತ್ರಲೋಕಕ್ಕಂತೂ ನಷ್ಟವಾಗಿದ್ದು ನಿಜ. ಅನಂತ್‌ ಮೂಲತಃ ಒಳ್ಳೆಯ ನಟ. ಸಂವೇದನಾಶೀಲ ನಟನೆಂಬ ಬಿರುದು ಇಂದಿಗೂ ಅವರಿಗೆ ಸಲ್ಲುತ್ತದೆ. ತಮ್ಮ ಮುಂದೆ ಕ್ಯಾಮರಾ ಇದೆ ಎಂದು ಅವರಿಗೆ ಯಾವತ್ತೂ ಅನಿಸಿದ್ದೇ ಇಲ್ಲ.

    ಆದರೆ ಈಗ ಅವರು ನಟಿಸುತ್ತಿರುವ ಸಿನಿಮಾಗಳಲ್ಲಿ ಹಳೇ ಅನಂತ್‌ರನ್ನು ಹುಡುಕುವುದು ಕಷ್ಟವಾಗಬಹುದು. ಅದಕ್ಕೆ ಕಾರಣ ಅವರೊಳಗಿನ ನಟ ನಿರ್ಜೀವವಾಗಿದ್ದಾನೆ ಎಂದಲ್ಲ. ಬದಲಾಗಿ ನಟನೆಯೆನ್ನುವುದು ಅವರಿಗೆ ಈಗ ಮೋಹವಾಗಿ ಉಳಿದಿಲ್ಲ. ಸಾರ್ವಜನಿಕ ಜೀವನದಲ್ಲಿ ಚಲಾವಣೆಯಲ್ಲಿರಬೇಕಾದ ಅನಿವಾರ್ಯಕ್ಕೆ ಪಕ್ಕಾಗಿ ಅವರು ನಟಿಸುತ್ತಿದ್ದಾರೆ. ಈ ಹಿಂ-ದೆ ತಮ್ಮ ವಿಕ್ಷಿಪ್ತತೆಯಿಂದಾಗಿಯೇ ಅನಂತ್‌ ಸೆಟ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದರು. ಸಮಯ ಪಾಲನೆ, ಶಿಸ್ತು, ಇತ್ಯಾದಿ ಪದಗಳು ಅವರ ನಿಘಂಟಿನಲ್ಲಿರಲಿಲ್ಲ. ಅವರು ಎಂದೂ ವೃತ್ತಿ ಪರ ನಟನಾಗಿರಲಿಲ್ಲ. ಆದರೆ ಈಗ ಅನಂತ್‌ ಸರಿಯಾದ ಸಮಯಕ್ಕೆ ಬೇಗನೇ ಹಾಜರಾಗುತ್ತಿದ್ದಾರೆ, ತಮಗೊಪ್ಪಿಸಿದ ಸಂಭಾಷಣೆಯನ್ನು ತಕರಾರಿಲ್ಲದೆ ಹೇಳುತ್ತಿದ್ದಾರೆ. ನಿರ್ಮಾಪಕರ ಮಟ್ಟಿಗೆ ಇದು ಸಂತೋಷದ ಸಂಗತಿಯಾದರೂ ಅನಂತ್‌ಗೆ ಇದು ಅನಿವಾರ್ಯ ಅನ್ನುವುದನ್ನೂ ಗಮನಿಸಬೇಕು.

    1 ಮುಖಪುಟ / ಸ್ಯಾಂಡಲ್‌ವುಡ್‌

    Thursday, March 28, 2024, 19:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X