"ಹೆಣ್ಣಾಗಿ ಹುಟ್ಟೋದು ಒಂದು ವರ"; ಗಜಪಡೆ ಪೋಸ್ಟ್ ಬಗ್ಗೆ ಆಂಕರ್ ಅನುಶ್ರೀ ಆಕ್ರೋಶ
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಗಜಪಡೆ ಎನ್ನುವ ಟ್ವಿಟ್ಟರ್ ಪೇಜ್ನಿಂದ ಮಾಡಿದ್ದ ಕಾಮೆಂಟ್ ಬಗ್ಗೆ ಈಗಾಗಲೇ ಪುನೀತ್ ಅಭಿಮಾನಿಗಳು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ನಟ, ನಿರ್ದೇಶಕ ಪ್ರಥಮ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಆಂಕರ್ ಅನುಶ್ರೀ ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 3ರಂದು ಗಜಪಡೆ ಟ್ವಿಟರ್ ಪೇಜ್ನಲ್ಲಿ "ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್ಸಿಬಿ ಪದೇ ಪದೆ ಸೋಲುತ್ತಿದೆ" ಎಂದು ಬರೆದು ಅಶ್ವಿನಿ ಪುನೀತ್ ರಾಜ್ಕುಮಾರ್ ಫೋಟೊ ಹಾಕಲಾಗಿತ್ತು. ಆರ್ಸಿಬಿ ಅನ್ಬಾಕ್ಸ್ ಈವೆಂಟ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಹೋಗಿದ್ದರು. ಈ ಹಿನ್ನೆಲೆ ಈ ರೀತಿ ಕೀಳುಮಟ್ಟದಲ್ಲಿ ಪೋಸ್ಟ್ ಮಾಡಲಾಗಿತ್ತು. ಕೆಟ್ಟ ಪದಗಳನ್ನು ಬಳಸಲಾಗಿತ್ತು.

ಈ ಪೋಸ್ಟ್ ಬಗ್ಗೆ 'O2' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪ್ರತಿಕ್ರಿಯಿಸಿದ್ದರು. "ಪಾಸಿಟಿವ್, ನೆಗೆಟಿವ್ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ. ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು" ಎಂದಿದ್ದಾರೆ.
ಇದೀಗ ನಟಿ, ನಿರೂಪಕಿ ಅನುಶ್ರೀ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ಹೆಣ್ಣಾಗಿ ಹುಟ್ಟೋದು ಒಂದು ವರ .... ಇನ್ನೊಬ್ಬರ ಮನೆ ಬೆಳಗೋ ಲಕ್ಷ್ಮೀ ಸಮಾಜಕ್ಕೆ ಒಂದು ವರ ... ಇದೆಲ್ಲ ಗಾಳಿ ಮಾತುಗಳ ಹೆಮ್ಮರ . ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ ಅಥವಾ ಸಹೋದರಿ ಇದ್ದಿದ್ದರೆ ? ಹೆಣ್ಣಿಗೆ ಗೌರವ ಸಿಗೋದು. ಒಂದು ಕನಸು ಅಷ್ಟೇ.. ಈ ಕೆಟ್ಟ ಬೆಳವಣಿಗೆಗೆ ಕೊನೆಯಿಲ್ಲವೇ ??. ಸ್ತ್ರೀ ಅಂದರೆ ಅಷ್ಟೇ ಸಾಕೆ !!!
ಹೆಣ್ಣೆಂದರೆ ಅಂಬಿಕೆ..ನಿಜ ಮಾಡಿ ಈ ಮೂಢನಂಬಿಕೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











