ಪರಮಾತ್ಮನನ್ನು ಕಸಿದುಕೊಂಡ ದೇವರಿಗೆ ಶಾಪ ಹಾಕಿದ ಅನುಶ್ರೀ..!
ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ಇಲ್ಲ ಎನ್ನುವ ಸತ್ಯವನ್ನು ಇವತ್ತು ಕೂಡ ಅನೇಕರು ಒಪ್ಪಲು ತಯಾರಿಲ್ಲ. ಆ ಪೈಕಿ ಅನುಶ್ರೀ ಕೂಡ ಒಬ್ಬರು. ಕುಂತರೂ .. ನಿಂತರೂ .. ಅಪ್ಪು ಅವರನ್ನೇ ಆರಾಧಿಸುತ್ತಾ ಬಂದ ಅನುಶ್ರೀ, ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಜಯಂತಿಯ ಹಿನ್ನೆಲೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕವನ ಬರೆದಿದ್ದಾರೆ. ಅಪ್ಪು ಅವರನ್ನು ಕನ್ನಡಿಗರಿಂದ ಕಸಿದುಕೊಂಡ ದೇವರಿಗೆ ಶಾಪವನ್ನು ಹಾಕಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀ ಬರೆದುಕೊಂಡಿದ್ದು, ಅನುಶ್ರೀ ಬರೆದ ಕವಿತೆ ಇಲ್ಲಿದೆ.
ಅನುಶ್ರೀ ಕವಿತೆ
ನಿಮ್ಮನ್ನು ನೋಡಿ ನಾಚಿ ಕೆಂಪಾಗುತ್ತಿದ್ದ ಕೆನ್ನೆ ...
ಇಂದು ಕಣ್ಣೇರಿಗೆ ದಾರಿಯಾಗಿದೆ !!!
ನಿಮ್ಮನ್ನು ನೋಡಿ ತಾಳ ತಪ್ಪುತ್ತಿದ್ದ ಹೃದಯ
ಇಂದು ಮಂಕಾಗಿ ಕೂತಿದೆ !!!
ನಿಮ್ಮನ್ನು ಹಾಡಿ ಹೊಗಳುತ್ತಿದ್ದ ಕಂಠ
ಇಂದು ಕಂಪಿಸುತ್ತಿದೆ !!!
ನಿಮ್ಮನ್ನು ಅಪ್ಪಿಕೊಳ್ಳುತ್ತಿದ್ದ ಕೈಗಳು
ಇಂದು ನಿಮ್ಮನ್ನು ಅಪ್ಪಿಕೊಳ್ಳೋಕೆ ಹಾತೊರೆಯುತ್ತಿದೆ !!!!
ನಿಮ್ಮನ್ನು ಪರಮಾತ್ಮ ಎಂದು ಕೂಗಿದ ನಾಲಿಗೆ
ಇಂದು ಆ ಭಗವಂತನಿಗೆ ಶಾಪ ಹಾಕುತ್ತಿದೆ !!!
ನಿಮ್ಮನ್ನು ಎಂದೆಂದಿಗೂ ಸಂಭ್ರಮಿಸೋ ಕೋಟ್ಯಂತರ ಹೃದಯಗಳಿಗೆ
ಇಂದು ನಿಮ್ಮನ್ನು ಮತ್ತೆ ಹುಟ್ಟಿ ಬನ್ನಿ ಎಂದು ಬೇಡಿದೆ !!
HAPPIEST BIRTHDAY TO MY ONE AND ONLY FAVOURITE APPU SIR
Miss u sir
Love u forever and ever
Appu fan Forever

ಇನ್ನು ಕಂಠೀರವ ಸ್ಟುಡಿಯೋಗೆ ಬಂದು ತಮ್ಮ ನೆಚ್ಚಿನ ಪರಮಾತ್ಮನ ದರ್ಶನವನ್ನು ಪಡೆದ ಅನುಶ್ರೀ, ಆ ನಂತರ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಅಪ್ಪು ಸ್ಮಾರಕಕ್ಕೆ ಇವತ್ತು ಜಾತ್ರೆಯಂತೆ ಜನ ಬಂದು ಸೇರಿದ್ದಾರೆ. ಈ ತರಹದ 50ನೇ ವರ್ಷದ ಹುಟ್ಟುಹಬ್ಬ ಯಾರಿಗೂ ಆಗಿರಲಿಲ್ಲ ಎಂದಿರುವ ಅನುಶ್ರೀ, ಲಕ್ಷಾಂತರ ಜನ ಅವರ ಹೆಸರನ್ನು ಕೂಗೋದನ್ನು ನೋಡಿದರೆ ರೋಮಾಂಚನವಾಗುತ್ತೆ ಎಂದು ಹೇಳಿದ್ದಾರೆ. ಅಪ್ಪು ಸರ್ ಇದೆನ್ನೆಲ್ಲವನ್ನು ಕೇಳಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಮುಂದುವರೆದು ದಿನಗಳು ಉರುಳಿದಂತೆ ಅಪ್ಪು ಸರ್ ಮೇಲಿನ ಅಭಿಮಾನಿಗಳ ಅಭಿಮಾನ ಜಾಸ್ತಿಯಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ ಎಂದಿರುವ ಅನುಶ್ರೀ ಸೂರ್ಯ ಚಂದ್ರ ಇರುವವರೆಗೆ ಅಪ್ಪು ಸರ್ ಮೇಲಿನ ಅಭಿಮಾನಿಗಳ ಈ ಪ್ರೀತಿ ಹೀಗೆಯೇ ಇರುತ್ತೆ ಎಂದು ಹೇಳಿದ್ದಾರೆ. ಈ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬಳು, ಸುಖದಲ್ಲಿ ನಿಮ್ಮ ಜೊತೆ ಅನೇಕ ಜನ ಬಂದು ನಿಲ್ಲಬಹುದು ಆದರೆ ದುಖದಲ್ಲಿ ಕಷ್ಟದಲ್ಲಿ ನಿಮ್ಮೊಂದಿಗೆ ನಿಲ್ಲುವವರೇ ನಿಜವಾದ ಹೀರೋ ಎಂದು ಹೇಳಿರುವ ಅನುಶ್ರೀ ನನ್ನ ಕಷ್ಟಕಾಲದಲ್ಲಿ ನನ್ನ ಜೊತೆ ನಿಂತಿದ್ದು ಅಪ್ಪು ಸರ್, ಅದನ್ನು ನಾನು ಯಾವತ್ತು ಮರೆಯುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಕೆಲಸವನ್ನು ತುಂಬಾ ಮೆಚ್ಚಿಕೊಳ್ಳುತ್ತಿದ್ದರು ಇವತ್ತು ಅವರನ್ನು ನೆನಪು ಮಾಡಿಕೊಂಡರೆ ಅನೇಕ ವಿಚಾರಗಳು ನೆನಪಾಗುತ್ತವೆ ಎಂದು ಅಪ್ಪು ನೆನೆದು ಭಾವುಕರಾಗಿದ್ದಾರೆ. ಅವರದ್ದು ಅನ್ನ ಹಾಕಿದ ಕೈ, ಅವರಿಗೆ ಕೊಟ್ಟು ಅಭ್ಯಾಸವೇ ಹೊರತು ತೆಗೆದುಕೊಂಡು ಅಭ್ಯಾಸ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಅಪ್ಪು ಚಿತ್ರ ಮರು ಬಿಡುಗಡೆಯಾದ ನಂತರ ಬೆಳ್ಳಿಪರದೆಯ ಮೇಲೆ ತಮ್ಮ ಆರಾಧ್ಯ ದೈವವನ್ನು ಕಣ್ತುಂಬಿಕೊಂಡ ಕ್ಷಣವನ್ನು ಕೂಡ ಮೆಲುಕು ಹಾಕಿರುವ ಅನುಶ್ರೀ, ಮೊನ್ನೆ ಅಪ್ಪು ಚಿತ್ರ ನೋಡುವಾಗ ಆರಂಭದಲ್ಲಿ ಅವರು ನಮ್ಮ ನಡುವೆ ಇಲ್ಲ ಎಂದು ಎಲ್ಲಿಯೂ ಭಾವನೆ ಬರಲಿಲ್ಲ ಆದರೆ ಸಿನಿಮಾ ಮುಗಿಯುತ್ತಾ ಬಂದಂತೆ ಅಪ್ಪು ಅವರನ್ನು ನೋಡಲು ಇನ್ನೂ ಒಂದು ವರ್ಷ ಕಾಯಬೇಕಾ ಎಂದು ಅನಿಸಿತ್ತು, ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲದೇ ಇದ್ದರೂ ಮಾನಸಿಕವಾಗಿ ಸದಾ ನಮ್ಮ ಜೊತೆ ಅವರು ಇದ್ದೇ ಇರುತ್ತಾರೆ ಎಂದು ಹೇಳಿದ್ದಾರೆ. ಒಳ್ಳೆತನದಲ್ಲಿ ಅಪ್ಪು ಸರ್ ಸದಾ ಜೀವಂತವಾಗಿರುತ್ತಾರೆ ಎಂದು ಹೇಳಿದ್ದಾರೆ.
ನನ್ನ ಪ್ರಕಾರ ಈ ಸಮಾಧಿ ಬಳಿ ಒಂದು ರೀತಿಯ ಎನರ್ಜಿ ಇದೆ ಎಂದು ಹೇಳಿರುವ ಅನುಶ್ರೀ, ಮಗುವಿನ ನಗುವಿನಲ್ಲಿ ಅಪ್ಪು ಇರಬಹುದು ಅಥವಾ ಅವರು ಮಗು ರೂಪದಲ್ಲಿ ಮತ್ತೆ ಹುಟ್ಟಿ ಬಂದಿರಬಹುದು ಎಂದು ಹೇಳಿದ್ದಾರೆ. ಇಲ್ಲಿ ಒಳ್ಳೆಯ ಮನಸಿಂದ ಬಂದು ಪ್ರಾರ್ಥನೆ ಮಾಡಿದರೆ ಆ ಕೆಲಸ ಆಗೇ ಆಗುತ್ತೆ ಎನ್ನುವ ನಂಬಿಕೆ ನನಗೆ ಇದೆ ಎಂದಿರುವ ಅನುಶ್ರೀ ಅಪ್ಪು ಸರ್ ಅವರನ್ನು ವೇದಿಕೆ ಮೇಲೆ ಕರೆಯುವುದು ಅಂದರೆ ನನಗೆ ತುಂಬಾ ಇಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ. ಹಿಂದೊಮ್ಮೆ ಅವರ ಹುಟ್ಟುಹಬ್ಬಕ್ಕೆ ಅವರ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದೇ ಆಗ ಕೇಕ್ ಕಟ್ ಮಾಡಿ ಅಪ್ಪು ಸಂಭ್ರಮಿಸಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಅಂದ್ಹಾಗೇ ಇದಕ್ಕೂ ಮುನ್ನ ಜೀ ಕುಟುಂಬ ಅವಾರ್ಡ್ಸ್ನಲ್ಲಿ ಕೂಡ ಜನಪ್ರಿಯ ನಿರೂಪಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಂತರ ಅನುಶ್ರೀ ವೇದಿಕೆಯ ಮೇಲೆ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದಿದ್ದರು. ಇನ್ನೂ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಅಪ್ಪು ಇಲ್ಲದೇ ಅಪೂರ್ಣ. ಈ ಚಾನೆಲ್ನ ಕಣ ಕಣವನ್ನೂ ಅಪ್ಪು ಆವರಿಸಿಕೊಂಡಿದ್ದಾರೆ. ಅಪ್ಪು ಅಗಲಿದ ದಿನದಿಂದ ಇಲ್ಲಿಯವರೆಗೆ ಅನುಶ್ರೀ ಅಪ್ಪು ಅವರ ಪುಣ್ಯಭೂಮಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ.ತಮ್ಮ ನೆಚ್ಚಿನ ನಾಯಕನನ್ನು ನೆನಪು ಮಾಡಿಕೊಂಡು ಕಣ್ಣೀರಾಗಿದ್ದಾರೆ. ಸಮಾಧಿಗೆ ನಮನ ಸಲ್ಲಿಸಿ ಅಪ್ಪು ಆಶೀರ್ವಾದ ಪಡೆದಿದ್ದಾರೆ. ಇದಲ್ಲದೇ ಅನುಶ್ರೀ ನಿರೂಪಣೆ ಮಾಡುವ ಬಹುತೇಕ ಕಾರ್ಯಕ್ರಮದಲ್ಲಿ ಅಪ್ಪು ನೆನಪು ಇದ್ದೇ ಇರುತ್ತೆ. ಪುನೀತ್ ಹೆಸರು ಆ ಕಾರ್ಯಕ್ರಮದಲ್ಲಿ ಅನುಶ್ರೀ ಬಾಯಿಂದ ಬಂದೇ ಬರುತ್ತೆ.
ಇನ್ನು ಕಳೆದ ಕೆಲ ತಿಂಗಳ ಹಿಂದೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಕೂಡ ಅನುಶ್ರೀ, ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಬಿಕ್ಕಿದ್ದರು. ಟೈಮ್ ಟ್ರಾವೆಲ್ ಮೂಲಕ ಅಗಲಿದ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡುವಂತೆ ಇದ್ದರೆ ಹೇಗಿರುತ್ತೆ ಎನ್ನುವುದನ್ನು ತೋರಿಸಲಾಗಿತ್ತು. ಆಗ ಜ್ಯೂನಿಯರ್ ಪುನೀತ್ ಅವರನ್ನು ನೋಡಿ ಅನುಶ್ರೀ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ವಾಪಸ್ ಬಂದು ಬಿಡಿ ಸಾರ್ ಪ್ಲೀಸ್...ನೀವಿಲ್ಲದೆ ಇಲ್ಲಿ ಏನೂ ಸರಿಯಾಗಿ ನಡೆಯುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು. ಎಲ್ಲರಿಗೂ ಅಪ್ಪು ಅಂದ್ರೆ ಎಷ್ಟು ಇಷ್ಟನೋ, ಅಷ್ಟೂ ನನಗೆ ಪಂಚ ಪ್ರಾಣ. ಅಪ್ಪು ಸರ್ ಇಲ್ಲಿ ನಿಂತುಕೊಂಡಿದ್ದರು. ಆಗ ನನಗೆ ಅವರು ಹೇಳಿದ್ದರು.ಆಗ ನನ್ನ ಕೈ ಹಿಡಿದುಕೊಂಡು ಹೇಳಿದ್ದರು. ನೀವು ಸುಧಾರಿಸಿಕೊಳ್ಳಿ, ನೀವು ಸಮಾಧಾನವಾಗಿ ಇರಬೇಕು ಎಂದು ಕೊನೆಯದಾಗಿ ನನ್ನ ಜೊತೆಗೆ ಮಾತನಾಡಿದ್ದರು ಎಂದು ಅನುಶ್ರೀ ಕಣ್ಣೀರು ಹಾಕಿದ್ದರು.
ಒಟ್ನಲ್ಲಿ ಡಾ.ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ಇದ್ದಿದ್ದರೆ ಇಂದು 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ಭಗವಂತ ಅದಕ್ಕೆ ಅವಕಾಶವನ್ನು ನೀಡಲಿಲ್ಲ. ಅಪ್ಪು ಅಗಲಿಕೆಯ ನೋವು ಇನ್ನೂ ಕೂಡ ಕನ್ನಡಿಗರನ್ನು ಕಾಡುತ್ತಿದೆ. ಮುಂದೆ ಕೂಡ ಕಾಡುತ್ತಲೇ ಇರುತ್ತದೆ. ಯಾಕೆಂದರೆ ಸೂರ್ಯನೊಬ್ಬ.. ಚಂದ್ರನೊಬ್ಬ.. ಈ ರಾಜನೂ ಒಬ್ಬ....ಅಪ್ಪು ಅಭಿಮಾನಿಗಳ ಹೃದಯಲ್ಲಿ ಸದಾ ಜೀವಂತವಾಗಿರುತ್ತಾರೆ.


Click it and Unblock the Notifications











