ರಜನೀಕಾಂತ್ಗೇ ಸವಾಲು ಹಾಕಿದಹುಡುಗಿ ಈಗ ‘ಆಂಧ್ರ ಹೆಂಡ್ತಿ
ಸೂಪರ್ ಸ್ಟಾರ್ ರಜನೀಕಾಂತ್ಗೇ 'ಪಡೆಯಪ್ಪ " ಚಿತ್ರದಲ್ಲಿ ಸವಾಲು ಹಾಕಿದ್ದ ಹುಡುಗಿ, ರಮ್ಯ ಕೃಷ್ಣ ಈ ಶುಕ್ರವಾರ 'ಆಂಧ್ರ ಹೆಂಡ್ತಿ"ಯಾಗಿ ಸವಾಲು ಹಾಕಲು ಕರ್ನಾಟಕಕ್ಕೆ ಬರುತ್ತಾಳೆ ಎಂದು ನಿರ್ಮಾಪಕ ಎನ್.ಎಲ್. ನಾರಾಯಣಪ್ಪ ಜಗಜ್ಜಾಹೀರು ಮಾಡಿದ್ದಾರೆ. ಕರ್ನಾಟಕದ ಅದೂ ಕನ್ನಡದ ಹುಡುಗನೊಬ್ಬ ಆಂಧ್ರದ ಹುಡುಗಿಯನ್ನು ಮದುವೆಯಾಗಿ ಕನ್ನಡ ನಾಡಿಗೆ ಕರೆತರುವ ಕಥೆಯುಳ್ಳ ಆಂಧ್ರಹೆಂಡ್ತಿ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗ್ತಾ ಇದ್ದಾಳೆ.
ಎ.ಆರ್. ಬಾಬು ನಿರ್ದೇಶನದ ಈ ಚಿತ್ರದ ಪ್ರಥಮ ಪ್ರಿಂಟ್ ವೀಕ್ಷಿಸಿದ ಸ್ಯಾಂಡಲ್ವುಡ್ ಮಂದಿ ಇದೊಂದು ಹಾಸ್ಯಮಯ ಫ್ಯಾಮಿಲಿ ಫಿಲಂ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಆನಂದ್ ಆಡಿಯೋ ಸಂಸ್ಥೆ ಆಂಧ್ರ ಹೆಂಡ್ತಿ ಚಿತ್ರದ ಹಾಡಿನ ಕ್ಯಾಸೆಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಇದರಲ್ಲಿ ಜಾನಪದ ಗಾಯಕ ಗುರುರಾಜ ಹೊಸಕೋಟೆ ಸಾಹಿತ್ಯ ಬರೆದು ಹಾಡಿದ್ದಾರೆ. 'ಬೊಂಬಾಟು ಹುಡುಗಿ ತಕಥೈ ಅಂತ ಬಂದೇ ಬಿಟ್ಟಿತಲ್ಲ. ಮುಂದೇನು ಇಲ್ಲಿ ನಡೆಯೋದಂತ ಆ ಶಿವನೇ ಬಲ್ಲ " ಗೀತೆಗಳು ಇದರಲ್ಲಿವೆ. ಚಿತ್ರಕ್ಕೆ ಪ್ರಸಾದ್ ಬಾಬು ಛಾಯಾಗ್ರಹಣ, ಶಿವಮಯಾ ಸಂಗೀತ ಇದೆ.
ತಾರಾಬಳಗದಲ್ಲಿ ಅನಂತ್ನಾಗ್, ಥ್ರಿಲ್ಲರ್ ಮಂಜು, ಮದನ್ಮಲ್ಲು, ರಮ್ಯಕೃಷ್ಣ, ಜಯಂತಿ, ಶೋಭರಾಜ್, ಅವಿನಾಶ್, ದೊಡ್ಡಣ್ಣ, ಟೆನ್ನಿಸ್ ಕೃಷ್ಣ, ಆಶಾಲತಾ, ಕರಿಬಸವಯ್ಯ, ಮಿಮಿಕ್ರಿ ದಯಾನಂದ್, ಆಲ್ಫೋನ್ಸ್ ಮೊದಲಾದವರಿದ್ದಾರೆ.
ಪ್ರದರ್ಶನ: ಸುಪ್ರೀಂ ಸ್ಟಾರ್ ಮೂವೀಸ್ ಅವರ ಈ ಚಿತ್ರ ಬೆಂಗಳೂರಿನ ತ್ರಿವೇಣಿ, ಪ್ರಮೇದ್, ಉಮಾ, ಶಾಂತಿ, ಸಂಪಿಗೆ, ಆದರ್ಶ, ಗೋವರ್ಧನ್, ವೀರಭದ್ರೇಶ್ವರ, ಸಿದ್ಧಲಿಂಗೇಶ್ವರ, ಬಾಲಾಜಿ, ಮೋಹನ್, ರಾಜೇಶ್ವರಿ (ದಿನ 3 ಆಟ), ಬೆಳಗಿನ ಪ್ರದರ್ಶನ - ತ್ರಿವೇಣಿ, ಪ್ರಮೇದ್, ಆದರ್ಶ, ನಂದ, ನಳಂದ, ಅಜಂತಾ, ನಂದಿನಿ ಹಾಗೂ ಗೀತಾಂಜಲಿ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ.


Click it and Unblock the Notifications