ಖಳನಟರಾದ ಅನಿಲ್, ಉದಯ್ ಮರೆಯಾಗಿ ಇಂದಿಗೆ ಒಂದು ವರ್ಷ
Recommended Video

'ನವೆಂಬರ್ 7' ಕನ್ನಡ ಸಿನಿಮಾರಂಗಕ್ಕೆ ಮರೆಯಲಾಗದ ದಿನ. ಈ ಕರಾಳ ದಿನ ಸ್ಯಾಂಡಲ್ ವುಡ್ ನಲ್ಲಿ ಕಪ್ಪು ಚುಕ್ಕೆ ಆಗಿ ಉಳಿದುಕೊಂಡಿದೆ. ಪ್ರತಿಭಾವಂತ ಖಳನಟರಾದ ಅನಿಲ್ ಮತ್ತು ಉದಯ್ ಮರೆಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ಕಳೆದಿದೆ.
'ಮಾಸ್ತಿಗುಡಿ' ಸಿನಿಮಾದ ಚಿತ್ರೀಕರಣದ ವೇಳೆ ಅನಿಲ್ ಮತ್ತು ಉದಯ್ ಮೃತಪಟ್ಟಿದ್ದರು. ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ನಲ್ಲಿ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ ಈ ಇಬ್ಬರು ಸ್ನೇಹಿತರು ಶವವಾಗಿ ಪತ್ತೆಯಾದರು. ಇನ್ನು ಅನಿಲ್ ಮತ್ತು ಉದಯ್ ಇಂದು ಇದ್ದಿದ್ದರೆ ಕನ್ನಡದ ಟಾಪ್ ಖಳನಟರಾಗುತ್ತಿದ್ದರು. ಮಾತ್ರವಲ್ಲದೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದರು.

ಈ ಇಬ್ಬರು ನಟರು ಮರೆಯಾಗಿ ವರ್ಷಗಳು ಕಳೆದರೂ, ಇಂದಿಗೂ ಅವರ ನಟನೆಯ ಚಿತ್ರಗಳು ಬರುತ್ತಿದೆ. 'ಶ್ರೀಕಂಠ', 'ರಾಜಕುಮಾರ', 'ಭರ್ಜರಿ' ಸೇರಿದಂತೆ ಸಾಕಷ್ಟು ಚಿತ್ರಗಳು ಅವರ ನಿಧನದ ನಂತರ ಬಿಡುಗಡೆಯಾಗಿತ್ತು. ಇನ್ನು ಉದಯ್ ಅಭಿನಯದ 'ಕಾಣದಂತೆ ಮಾಯವಾದನು' ಮತ್ತು ಅನಿಲ್ ನಟನೆಯ 'ಮೂಕಹಕ್ಕಿ' ಚಿತ್ರಗಳು ಇನ್ನೂ ರಿಲೀಸ್ ಆಗಬೇಕಿದೆ.
ಅಂದಹಾಗೆ, ನಿರ್ಮಾಪಕ ಸುಂದರ್ ಪಿ.ಗೌಡ ತಮ್ಮ ಗೆಳೆಯರಾದ ಅನಿಲ್, ಉದಯ್ ಹೆಸರಿನಲ್ಲಿ 'ಅನಿಲ್ ಉದಯ್ ಚಾರಿಟಬಲ್ ಟ್ರಸ್ಟ್' ಪ್ರಾರಂಭ ಮಾಡಿದ್ದಾರೆ. ಈ ಟ್ರಸ್ಟ್ ಅಡಿಯಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಸುಂದರ್ ನಿರ್ಧಾರ ಮಾಡಿದ್ದಾರೆ.


Click it and Unblock the Notifications











