ಸ್ನೇಹಿತ ಬಿಟ್ಟು ಹೋದರು, ಸ್ನೇಹವನ್ನು ಮರೆಯದ ಧ್ರುವ ಸರ್ಜಾ: ನೆನಪಾಯ್ತು ಆ 'ಕರಾಳ ದಿನ'!
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಾತ್ರವಲ್ಲ, ಇಡೀ ಭಾರತದ ದೇಶದ ಇತಿಹಾಸದಲ್ಲಿ ನವೆಂಬರ್ 7 ಕರಾಳ ದಿನ. ಬೆಟ್ಟದಷ್ಟು ಆಸೆಗಳನ್ನಿಟ್ಟುಕೊಂಡು, ಬಹಳ ಎತ್ತರಕ್ಕೆ ಬೆಳೆಯಬೇಕು ಎಂಬ ಕನಸುಗಳೊಂದಿಗೆ, ಸಿನಿಮಾ ಚೆನ್ನಾಗಿ ಬರಬೇಕು ಅಂದ್ರೆ ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತೇವೆ' ಎಂದು ಛಲ ಹೊಂದಿದ್ದ ಪ್ರತಿಭಾನ್ವಿತ ಕಲಾವಿದರಿಬ್ಬರನ್ನ ಕಳೆದುಕೊಂಡ ದಿನ ಇದು.
ಈ ದಿನವನ್ನ ನೆನಪಿಸಿಕೊಂಡಾಗ, ಪ್ರತಿಯೊಬ್ಬರು ''ಅಯ್ಯೋ.....ಆ ಇಬ್ಬರು ಬದುಕಿ ಉಳಿಯಬಾರದಿತ್ತೆ'' ಎಂದು ಒಂದು ಕ್ಷಣ ಭಾವುಕರಾಗಬಹುದು. ಸ್ಯಾಂಡಲ್ ವುಡ್ ಇಂಡಸ್ಟ್ರಿ ಪಾಲಿಗೆ ಕರಾಳ ದಿನವನ್ನ ನಟ ಧ್ರುವ ಸರ್ಜಾ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

ಸ್ನೇಹಿತನನ್ನು ನೆನೆದ ಧ್ರುವ ಸರ್ಜಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಸಜ್ಜಾಗುತ್ತಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಕೂಡ ಹಂಚಲು ಆರಂಭಿಸಿದ್ದಾರೆ. ಮದುವೆ ಬ್ಯುಸಿಯಲ್ಲಿರುವ ಧ್ರುವ ಸರ್ಜಾ, ತನ್ನ ಸ್ನೇಹಿತನನ್ನು ಮಾತ್ರ ಮರೆಯಲಿಲ್ಲ. ಮಾಸ್ತಗುಡಿ ದುರಂತದಲ್ಲಿ ಕೊನೆಯುಸಿಳೆದಿದ್ದ ಉದಯ್ ಅವರ ಸಮಾಧಿ ಬಳಿ ಧ್ರುವ ಸರ್ಜಾ ಭೇಟಿ ನೀಡಿದ್ದಾರೆ.

ಭಾವುಕರಾದ ಆಂಜನೇಯನ ಭಕ್ತ
ಉದಯ್ ಮತ್ತು ಧ್ರುವ ಸರ್ಜಾ ಬಹಳ ಆತ್ಮೀಯ ಸ್ನೇಹಿತರು. ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಇಬ್ಬರು ಗೆಳೆಯರು. ಧ್ರುವ ಸರ್ಜಾ ನಟನೆಯ 'ಭರ್ಜರಿ' ಚಿತ್ರದಲ್ಲೂ ಉದಯ್ ನಟಿಸಿದ್ದರು. ಇಂದು ಉದಯ್ ಮತ್ತು ಅನಿಲ್ ನಿಧನರಾಗಿ ಮೂರು ವರ್ಷ ಆಗಿದೆ. ಈ ಹಿನ್ನೆಲೆ ಬನಶಂಕರಿಯ ಸ್ಮಶಾನದಲ್ಲಿರುವ ಉದಯ್ ಸಮಾಧಿ ಬಳಿ ಹೋಗಿದ್ದ ಧ್ರುವ ಸರ್ಜಾ ಸಮಾಧಿಗೆ ಕೈಮುಗಿದು ಸಂತಾಪ ಸೂಚಿಸಿದರು. ಒಂದು ಕ್ಷಣ ಭಾವುಕರಾದರು.

ಉದಯ್-ಅನಿಲ್ ದುರಂತ ಸಾವು
ನವೆಂಬರ್ 7, 2016 ರಂದು ಉದಯ್ ಮತ್ತು ಅನಿಲ್ ಇಬ್ಬರು ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದರು. ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರದಲ್ಲಿ ಖಳನಾಯಕರಾಗಿ ನಟಿಸಿದ್ದ ಇಬ್ಬರು, ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಹೆಲಿಕಾಫ್ಟರ್ ಮೇಲಿಂದ ನೀರಿಗೆ ಹಾರಿದ್ದರು. ಈಜು ಬಾರದೆ ಇಬ್ಬರು ನೀರಿನಲ್ಲಿ ಮುಳುಗಿ ಇಹಲೋಕ ತ್ಯಜಿಸಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ಸುದ್ದಿ ಮಾಡಿತ್ತು
ಮಾಸ್ತಿಗುಡಿ ದುರಂತ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಚಿತ್ರತಂಡ ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ, ಇಂತಹ ರಿಸ್ಕ್ ತೆಗೆದುಕೊಂಡಿತ್ತು ಎಂದು ಚಿತ್ರರಂಗದವರು ಆರೋಪಿಸಿದರು. ನಿರ್ಮಾಪಕ, ನಿರ್ದೇಶಕ, ಸಾಹಸ ನಿರ್ದೇಶಕರನ್ನ ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದರು. ಇತ್ತೀಚಿಗಷ್ಟೆ ಅಂತಾರಾಷ್ಟ್ರೀಯ ಸುದ್ದಿವಾಹಿನಿ al jazeera ಅನಿಲ್ ಮತ್ತು ಉದಯ್ ಸಾವಿಗೆ ಬಗ್ಗೆ ಸಾಕ್ಷ್ಯಚಿತ್ರ ಕೂಡ ಮಾಡಿತ್ತು.


Click it and Unblock the Notifications











