ಕಮಲ್ ಹಾಸನ್ ವಿವಾದ ; ದೂಷಿಸುವುದು- ದ್ವೇಷಿಸುವುದು ಎರಡು ತಪ್ಪು- ಅನಿರುದ್ದ್..!
ಮೂರು ದಶಕದ ನಂತರ ಕಮಲ್ ಹಾಸನ್ ಮತ್ತು ಮಣಿರತ್ನಂ ಜೊತೆ ಸೇರಿ ಮಾಡಿರುವ ಚಿತ್ರ ಥಗ್ ಲೈಫ್. ಇನ್ನೇನು ಈ ವಾರ ಈ ಚಿತ್ರ ಬಿಡುಗಡೆ ಆಗಲಿದೆ. ಆದರೆ, ಕಮಲ್ ಹಾಸನ್ ಮಾತನಾಡಿದ ಮಾತೊಂದು ಕರುನಾಡಿನಲ್ಲಿ ಚಿತ್ರದ ಬಿಡುಗಡೆಗೆ ತಡೆ ಗೋಡೆಯಾಗಿದೆ. ಒಂದು ಕ್ಷಮೆಗೆ ಈ ಗೋಡೆ ಬೀಳಿಸುವ ಶಕ್ತಿ ಇದೆ. ಆದರೆ ಕಮಲ್ ಹಾಸನ್ ಕ್ಷಮೆ ಕೇಳುವ ಮನಸ್ಸು ಮಾಡುತ್ತಿಲ್ಲ.
ಬದಲಿಗೆ ಹಠ ಹಿಡಿದು ಕುಂತಿದ್ದಾರೆ. ನಾನೇನು ತಪ್ಪು ಮಾಡಿಲ್ಲ ಎನ್ನುವ ಮೊಂಡು ವಾದವನ್ನೇ ಮಾಡುತ್ತಿದ್ದಾರೆ. ಚಿತ್ರದ ಬಿಡುಗಡೆಗೆ ಅವಕಾಶ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇನ್ನು ಕಮಲ್ ಹಾಸನ್ ಅವರ ಈ ನಡೆ ಮತ್ತು ನುಡಿಯನ್ನು ಕನ್ನಡ ಚಿತ್ರರಂಗದ ಹಲವರು ಖಂಡಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ನಾದ ಬ್ರಹ್ಮ ಹಂಸಲೇಖಾ, ಆ ದಿನಗಳು ಚೇತನ್, ರಚಿತಾ ರಾಮ್, ವಸಿಷ್ಠ ಸಿಂಹ, ಸುಮಲತಾ ಅಂಬರೀಶ್, ವಿನೋದ್ ಪ್ರಭಾಕರ್, ಹೀಗೆ ಅನೇಕರು ಕಮಲ್ ಹಾಸನ್ ಮಾತನಾಡಿದ್ದು ತಪ್ಪು ಎಂದು ಹೇಳಿದ್ದಾರೆ. ಕ್ಷಮೆ ಕೇಳಿ ಕಮಲ್ ಹಾಸನ್ ದೊಡ್ಡವರಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ್ ಹಾಸನ್ ಅವರನ್ನು ಹತ್ತಿರದಿಂದ ನೋಡಿರುವ ಅವರ ಜೊತೆ ರಾಮ ಶ್ಯಾಮ ಭಾಮ ಚಿತ್ರದಲ್ಲಿ ಅಭಿನಯಿಸಿರುವ ಕನ್ನಡದ ನಟ ಮತ್ತು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ನಿಮ್ಮ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಹಾಗಿದ್ದರೆ ಕಮಲ್ ಹಾಸನ್ ವಿವಾದದ ಕುರಿತು ಅನಿರುದ್ಧ್ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಇತಿಹಾಸ ನನಗೆ ಗೊತ್ತಿಲ್ಲ
''ನಿಜಾ ಹೇಳಬೇಕು ಅಂದರೆ ನನಗೆ ಸಂಪೂರ್ಣ ಇತಿಹಾಸ ಗೊತ್ತಿಲ್ಲ. ಈಗಷ್ಟೇ ಕೆಲವು ದಿನಗಳ ಹಿಂದೆ ದ್ರಾವಿಡ ಭಾಷೆಗಳ ಉಗಮದ ಚಾರ್ಟ್ನ್ನು ನೋಡಿದ್ದೇನೆ, ಆದರೆ ಯಾವ ಭಾಷೆಯ ಉಗಮ ಯಾವತ್ತು ಆಯ್ತು ಎನ್ನುವ ದಿನಾಂಕ ನಮಗೆ ಗೊತ್ತಿಲ್ಲ. ಈ ಚರ್ಚೆ ಆ ದಿನಾಂಕಗಳನ್ನು ತಿಳಿಯಲು, ಭಾಷೆಯ ಕುರಿತ ಜ್ಞಾನವನ್ನು ಹೆಚ್ಚಿಸಲು ನಾಂದಿಯಾಗಲಿ ಎನ್ನುವುದು ನನ್ನ ಆಶಯ. ಯಾವ ಭಾಷೆ ಯಾವಾಗ ಹುಟ್ಟಿಕೊಂಡಿದೆ, ಹೇಗೆ ಹುಟ್ಟಿಕೊಂಡಿದೆ ಎಂಬ ಇತಿಹಾಸದ ಕುರಿತು ಆಳವಾದ ಅಧ್ಯಯನ ಆಗಬೇಕು ಎನ್ನುವುದು ನನ್ನ ಭಾವನೆ'' ಎಂದು ಅನಿರುದ್ಧ್ ಹೇಳಿದ್ದಾರೆ.
ವಸುದೈವ ಕುಟುಂಬಕಂ
''ಎಲ್ಲ ಭಾಷೆಗಳು ನಮ್ಮ ಭಾಷೆಗಳೇ. ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆ ಹೊಂದಿರುವ ವ್ಯಕ್ತಿ ನಾನು. ನಾವೆಲ್ಲ ಪ್ರತಿಯೊಬ್ಬರು ಒಂದೇ ಕುಟುಂಬದವರು. ಹೀಗಾಗಿ ಯಾರನ್ನು ದೂಷಿಸುವುದು ಬೇಡ ದ್ವೇಷಿಸುವುದು ಬೇಡ ಎನ್ನುವುದು ನನ್ನ ವ್ಯೆಯಕ್ತಿಕ ಅಭಿಪ್ರಾಯ'' ಎಂದು ಫಿಲ್ಮಿ ಬೀಟ್ ಕನ್ನಡಗೆ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಮೇಲೆ ಗೌರವ-ಅಭಿಮಾನ ಇದೆ.
'' ನನಗೆ ಅವರ ಮೇಲೆ ವ್ಯೆಯಕ್ತಿಕವಾಗಿ ತುಂಬಾ ಅಭಿಮಾನ ಇದೆ. ಅವರ ಜೊತೆ ನಾನು ಕೆಲಸ ಕೂಡ ಮಾಡಿದ್ದೇನೆ. ಒಬ್ಬ ಕಲಾವಿದನಾಗಿ ಒಬ್ಬ ಕಲಾವಿದನ ಮೇಲೆ ನನಗೆ ಗೌರವ ಇದೆ ಎನ್ನುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಅವರು ಅವತ್ತು ನಾವು ದೊಡ್ಡವರು ನೀವು ಚಿಕ್ಕವರು ಎಂದು ಹೇಳಿಲ್ಲ. ತುಂಬಾ ಪ್ರೀತಿಯಿಂದ ಅವರು ಆ ಮಾತು ಹೇಳಿದ್ದಾರೆ.
ತಾಯಿ ಮತ್ತು ಮಕ್ಕಳ ಸಂಬಂಧ ಹೇಗಿರುತ್ತೆ ಆ ದಿಸೆಯಲ್ಲಿ ವಾತ್ಸಲ್ಯಪೂರ್ವಕವಾಗಿ ಅವರು ಮಾತನಾಡಿದ್ದಾರೆ. ನನಗೆ ಯಾವ ಭಾಷೆ ಎಲ್ಲಿಂದ ಬಂತು ಎನ್ನುವುದು ಗೊತ್ತಿಲ್ಲ. ಅದನ್ನು ಇತಿಹಾಸಕಾರರು ಹೇಳಬೇಕು. ನಾನು ಅದಕ್ಕೆ ಸೂಕ್ತವಾದ ವ್ಯಕ್ತಿಯಲ್ಲ. ನನಗೆ ಇತಿಹಾಸ ಗೊತ್ತಿಲ್ಲ. ಇತಿಹಾಸದ ದೃಷ್ಟಿಯಲ್ಲಿ ಅವರು ಹೇಳಿದ್ದು ತಪ್ಪಿರಬಹುದು, ಅದನ್ನು ಇತಿಹಾಸ ತಜ್ಞರೇ ಹೇಳಬೇಕಾದರೂ ಅವರು ಹೇಳಿರುವ ಮಾತು ಅವರ ಭಾವನೆ ಅವರು ಹೇಳಿದ ರೀತಿ ದುರಂಹಕಾರದಿಂದ ಕೂಡಿರಲಿಲ್ಲ ಬದಲಿಗೆ ಅವರು ಪ್ರೀತಿಯಿಂದ ಹೇಳಿದ್ದಾರೆ'' ಎಂದು ಅನಿರುದ್ದ್ ಹೇಳಿದ್ದಾರೆ.
ಕ್ಷಮೆ ಕೇಳುವುದರಲ್ಲಿ ತಪ್ಪೇನು ಇಲ್ಲ
''ಇನ್ನು ಅವರ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಅದು ಸ್ಪಷ್ಟವಾಗಿ ಕಾಣ್ತಿದೆ ಕೂಡ. ತುಂಬಾ ಬೇಜಾರಿದೆ. ಅವರ ಮನೋಭಾವ ಬೇರೆ ಇರಬಹುದು, ಅವರು ಹೇಳಿದ ರೀತಿ ಬೇರೆ ಇರಬಹುದು. ಆದರೆ ನಮ್ಮ ಯಾವುದೋ ಒಂದು ಮಾತು ಜನರಿಗೆ ಬೇಸರವನ್ನುಂಟು ಮಾಡಿದಾಗ, ನೋವುಂಟು ಮಾಡಿದಾಗ ಕ್ಷಮೆ ಕೇಳುವುದರಲ್ಲಿ ತಪ್ಪೇನು ಇಲ್ಲ.
ನಿಮಗೆ ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ ಆ ಭಾವನೆ ನನ್ನಲ್ಲಿ ಇರಲಿಲ್ಲ ಆದರೂ ಕೂಡ ನಿಮಗೆ ನನ್ನ ಮಾತುಗಳಿಂದ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ ಎನ್ನುವುದರಲ್ಲಿ ತಪ್ಪೇನು ಇಲ್ಲ ಅವರ ದೊಡ್ಡತನ ಅದರಿಂದ ಕಡಿಮೆ ಕೂಡ ಆಗುವುದಿಲ್ಲ. ಅವರ ಮೇಲೆ ನಮಗೆ ಇದ್ದ ಅಭಿಮಾನ ಕೂಡ ಕಿಂಚಿತ್ತೂ ಕಡಿಮೆಯಾಗಲ್ಲ, ಕ್ಷಮೆ ಕೇಳಿದ ತಕ್ಷಣ ತಮಿಳು ಜನರ ಅಭಿಮಾನ ಕೂಡ ಕಡಿಮೆಯಾಗಲ್ಲ'' ಎಂದು ಅನಿರುದ್ದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಅಂದರೆ ಅವರಿಗೆ ತುಂಬಾನೇ ಅಭಿಮಾನ
''ಕನ್ನಡದ ಮೇಲೆ ಅವರಿಗೆ ತುಂಬಾ ಅಭಿಮಾನ ಮತ್ತು ಪ್ರೀತಿ ಇದೆ. ಅವರಿಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ ಅದರಲ್ಲಿಯೂ ಉತ್ತರ ಕರ್ನಾಟಕದ ಭಾಷೆಯನ್ನು ಅವರು ಚಿತ್ರದಲ್ಲಿ ಮಾತನಾಡಿದ್ದಾರೆ, ಪ್ರತಿಯೊಂದು ಸಲ ಕೂಡ ಅವರು ಇದು ಸರಿಯಾಗಿದೆಯಾ ಎಂದು ಕೇಳಿ ಅಭಿನಯಿಸುತ್ತಿದ್ದರು. ಭಾಷಾಭಿಮಾನ ಇಲ್ಲ ಅಂದಿದ್ದರೆ ಅವರು ಬೇಕಾಬಿಟ್ಟಿಯಾಗಿ ಅಭಿನಯಿಸಿ ಹೋಗಬಹುದಿತ್ತು.
ಆದರೆ ಅವರಲ್ಲಿ ಕನ್ನಡ ಭಾಷಾಭಿಮಾನ ಇದೆ. ಹೀಗಾಗಿಯೇ ನಾನು ಕನ್ನಡ ಸರಿಯಾಗಿ ಮಾತನಾಡಬೇಕು, ನಾನು ಮಾತನಾಡುವ ಪ್ರತಿಯೊಂದು ಪದ ಸರಿಯಾಗಿರಬೇಕು, ಪ್ರೇಕ್ಷಕರಿಗೆ ಅದು ಅಭಾಸ ಆಗಬಾರದು ಎನ್ನುವ ದೃಷ್ಟಿಯಿಂದ ಅವರು ತುಂಬಾನೇ ಮುತುವರ್ಜಿ ವಹಿಸಿಕೊಂಡು ಕೆಲಸ ಮಾಡಿದಾರೆ ಈ ಮಾತುಗಳನ್ನು ಅವರು ಹೇಳಿದ್ದಾರೆ ಕೂಡ. ನಾನು ಕೂಡ ಗಮನಿಸಿದ್ದೇನೆ.
ಇನ್ನು ನಾನು ಕೂಡ ಉತ್ತರ ಕರ್ನಾಟಕದವನು. ಹೀಗಾಗಿ ನನ್ನನ್ನೂ ಕೂಡ ಅವರು ಕೇಳ್ತಿದ್ದರು. ಸರಿಯಾಗಿ ಮಾತನಾಡ್ತಿದ್ದೀನಾ ? ಡೈಲಾಗ್ ಸರಿಯಾಗಿ ಹೇಳ್ತಿದ್ದೀನಾ ? ಹೇಳಿ ಅನ್ನೋರು. ನಾನು ವಯಸ್ಸಿನಲ್ಲಿ ಅವರಿಗಿಂತ ತುಂಬಾ ಚಿಕ್ಕವನು. ಆದರೂ ಭಾಷಾಭಿಮಾನ ಇರುವುದರಿಂದನೇ ಅವರು ಬಂದು ನನ್ನ ಕೇಳ್ತಿದ್ದರು. ನನ್ನಿಂದ ಏನೂ ತಪ್ಪಾಗಬಾರದು ಎನ್ನುವುದಷ್ಟೇ ಅವರ ಉದ್ದೇಶವಾಗಿತ್ತು'' ಎಂದು ಅನಿರುದ್ಧ್ ಫಿಲ್ಮಿ ಬೀಟ್ ಕನ್ನಡ ವೆಬ್ ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











