ಸಿನಿಮಾ ನಿರ್ದೇಶನ ಮಾಡ್ತಾರಾ ಅನಿರುದ್ದ್, 'ಸೂರ್ಯವಂಶ'ದ ಸೂರ್ಯವರ್ಧನನ ಮುಂದಿನ ಯೋಜನೆಗಳೇನು ?
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ ಪ್ರತಿಯೊಬ್ಬ ತಾರೆಯರಲ್ಲಿಯೂ ಒಂದಿಲ್ಲೊಂದು ದಿನ ತಾವು ನಿರ್ದೇಶಕನಾಗಬೇಕೆಂಬ ಬಯಕೆ ಇರುತ್ತೆ. ಈ ಕನಸಿನ ಬೆನ್ನೇರಿಯೇ ಹಲವರು ಇಲ್ಲಿ ನಿರ್ದೇಶನದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಹಿಡಿದು ರಂಜನಿ ರಾಘವನ್ವರೆಗೆ ಇಲ್ಲಿ ಹಲವರು ಚಿತ್ರವನ್ನು ನಿರ್ದೇಶಿಸುವ ಪ್ರಯತ್ನ ಮಾಡಿದ್ದಾರೆ. ಮಾಡುತ್ತಿದ್ದಾರೆ. ಆ ಪೈಕಿ ಕೆಲವರು ಗೆದ್ದಿದ್ದಾರೆ.
ಇನ್ನು ಕೆಲವರು ಸೋತಿದ್ದಾರೆ. ಈ ಸಾಲಿಗೆ ಶೀಘ್ರದಲ್ಲಿಯೇ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ದ್ ಜತ್ಕರ್ ಕೂಡ ಶೀಘ್ರದಲ್ಲಿಯೇ ಸೇರಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.

ಹೌದು, ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾದವರು ಅನಿರುದ್ಧ್. ಚಿಟ್ಟೆ.. ಚಿತ್ರಾ.. ತುಂಟಾಟ.. ಚಿತ್ರಗಳ ಮೂಲಕ ಕರುನಾಡಿನ ಮನ ಗೆದ್ದ ಅನಿರುದ್ದ್ ಆ ನಂತರ ಜೇಷ್ಠ.. ರಾಮ ಶಾಮ ಭಾಮ.. ನೀನೆಲ್ಲೋ ನಾನಲ್ಲಿ.. ಚಿತ್ರಗಳ ಮೂಲಕ ಕನ್ನಡಿಗರಿಗೆ ಇನ್ನು ಹತ್ತಿರವಾದರು.
ಇನ್ನು, ಈಗೆಲ್ಲ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದರೆ ಅದೇ ದೊಡ್ಡ ಸಾಧನೆಯೆಂದುಕೊಂಡವರು ತುಂಬಾ ಜನ ಇದ್ದಾರೆ. ಆದರೆ ಅನಿರುದ್ಧ್ ಆ ಕಾಲದಲ್ಲಿಯೇ ಮೆಲ್ಲನೆ ಹಿಂದಿ ಚಿತ್ರರಂಗದಲ್ಲಿ ಕೂಡ ತಮ್ಮ ಚಾಪು ಮೂಡಿಸಿದ್ದರು. ಪ್ರಖ್ಯಾತ ನಿರ್ದೇಶಕ ನಾಗೇಶ್ ಕುಕನೂರು ನಿರ್ದೇಶನದ 'ಡೋರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮರಾಠಿಯ 'ಸಾಮ್ ದಾಮ್ ದಂಡ್ ಭೇದ್' ಚಿತ್ರದಲ್ಲಿ ಕೂಡ ಅನಿರುದ್ಧ್ ಕಾಣಿಸಿಕೊಂಡಿದ್ದರು.
ಇನ್ನು ಇವರ 'ಜೊತೆ ಜೊತೆಯಲ್ಲಿ' ಧಾರಾವಾಹಿ ಬಗ್ಗೆ ಹೇಳುವ ಅಗತ್ಯವೇ ಇಲ್ಲ. 'ಆರ್ಯವರ್ಧನ್' ಎಂದೇ ಈ ಧಾರಾವಾಹಿಯ ಮೂಲಕ ಜನಜನಿತರಾದವರು ಅನಿರುದ್ಧ್.
ಹೀಗೆ ಕಿರುತೆರೆಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ಖ್ಯಾತಿಯ ಶಿಖರಕ್ಕೇರಿದ ಅನಿರುದ್ದ್ ಕಳೆದ ವರ್ಷ 'Chef ಚಿದಂಬರ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಿದ್ದರು. ಎಂ.ಆನಂದರಾಜ್ ನಿರ್ದೇಶನದ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಪ್ರೇಕ್ಷಕರ ಚಿತ್ತವನ್ನು ಕೂಡ ಕದ್ದಿತ್ತು. ಇನ್ನು ಕಿಚ್ಚ ಸುದೀಪ್ ಸೇರಿ ಅನೇಕರು ಈ 'Chef ಚಿದಂಬರ'ನ ಬೆನ್ನಿಗೆ ಬೆಂಬಲವಾಗಿ ನಿಂತುಕೊಂಡಿದ್ದರು.
ಇಂಥಾ ಅನಿರುದ್ಧ್ ಅವರಿಗೆ ನಿರ್ದೇಶನದತ್ತ ಅಪಾರವಾದ ಒಲವು ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಅನಿರುದ್ದ್ ಈಗಾಗಲೇ ಸಾಮಾಜಿಕ ಕಳಕಳಿಯನ್ನೊಂದಿರುವ ಆರು ಕಿರುಚಿತ್ರಗಳನ್ನು ನಿರ್ದೇಶಿಸಿದ್ಧಾರೆ. ಹಾರರ್, ಹಾಸ್ಯ, ಕ್ರೈಮ್, ನೃತ್ಯ, ರಾಜಕೀಯ ವಿಡಂಬನೆ, ಹೀಗೆ 6 ವಿಭಿನ್ನ ಜಾನರ್ನಲ್ಲಿ ನಿರ್ಮಾಣವಾದ ಈ ಕಿರುಚಿತ್ರಗಳು ನೋಡುಗರ ಗಮನ ಸೆಳೆದಿದ್ದವು. ಕ್ಯಾಂಡಲ್ಲೈಟ್, ಉಳಿಸಿ, ಶಾಂತಂ ಪಾಪಂ, ಧೂಮ, ನೀರು, ವೈಷ್ಣವ ಜನ ತೋ ಎಂದು ತಮ್ಮ ಕಿರುಚಿತ್ರಗಳಿಗೆ ಅನಿರುದ್ದ್ ಹೆಸರು ಇಟ್ಟಿದ್ದರು.
ತಮ್ಮ ಈ ಕಿರುಚಿತ್ರಗಳಿಗೆ ಕಲಾಮ್ಸ್ ಗೋಲ್ಡನ್ ಅವಾರ್ಡ್, ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್, ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ.ಇದಿಷ್ಟೇ ಅಲ್ಲದೇ ಭಾರತಿ ವಿಷ್ಣುವರ್ಧನ್ ಅವರ ಬಾಳೇ ಬಂಗಾರ ಸಾಕ್ಷ್ಯ ಚಿತ್ರವನ್ನು ಕೂಡ ಅನಿರುದ್ದ್ ಹೊರ ತಂದಿದ್ದಾರೆ.
ಹೀಗೆ ನಿರ್ದೇಶನದಲ್ಲಿ ಈಗಾಗಲೇ ತಮ್ಮ ಪ್ರಯೋಗಗಳ ಮೂಲಕ ಹೆಸರು ಮಾಡಿರುವ ಅನಿರುದ್ಧ್ ತಮ್ಮ ಚಿತ್ರ ನಿರ್ದೇಶನದ ಕನಸನ್ನು ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅನಿರುದ್ದ್ ''ನಿರ್ದೇಶನ ಮಾಡಬೇಕೆನ್ನುವ ಆಲೋಚನೆ ನನಗೆ ಮೊದಲಿಂದ ಇದೆ. ಇದಕ್ಕೆ ಪೂರಕವಾಗಿ ಡಾಕ್ಯುಮೆಂಟರಿಯನ್ನು ಮಾಡಿದೀನಿ, ಶಾರ್ಟ್ ಸಿನಿಮಾಗಳನ್ನು ಮಾಡಿದೀನಿ, ಸಿನಿಮಾದ ಕಥೆ ಕೂಡ ತಲೆಯಲ್ಲಿದೆ ಅದನ್ನು ಕಾರ್ಯರೂಪಕ್ಕೆ ತರಬೇಕಷ್ಟೇ'' ಎಂದು ಹೇಳಿದ್ದಾರೆ. ಆದಷ್ಟು ಬೇಗ ನಿರ್ದೇಶನದ ಕುರಿತು ಸುದ್ದಿಯನ್ನು ನೀಡುವ ಭರವಸೆಯನ್ನು ಕೂಡ ನೀಡಿದ್ದಾರೆ.
ಇನ್ನು, ಜೊತೆ ಜೊತೆಯಲಿ ನಂತರ ಅನಿರುದ್ಧ್ ಸೂರ್ಯವಂಶ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಇದರ ನಡುವೆ ಕೂಡ ಅನಿರುದ್ದ್ ಹಲವು ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಅನಿರುದ್ಧ್ ''ಸದ್ಯ ಸೂರ್ಯವಂಶ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದೇನೆ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಹತ್ ಹತ್ರ 400 ಎಪಿಸೋಡ್ವರೆಗೆ ಬಂದು ನಿಂತಿದೆ ಇದರ ಜೊತೆ ನನ್ನ ಬರವಣಿಗೆಯ ಕೆಲಸ ನಡೆಯುತ್ತಿದೆ, ಕಾದಂಬರಿಯನ್ನು ಕೂಡ ಸದ್ಯ ನಾನು ಬರೀತಾ ಇದೀನಿ'' ಎಂದು ಹೇಳಿದ್ದಾರೆ.
ಇನ್ನು ಸಿನಿಮಾದಲ್ಲಿ ಅಭಿನಯಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅನಿರುದ್ಧ್ ''ಸದ್ಯಕ್ಕೆ ಯಾವುದು ಒಪ್ಪಿಕೊಂಡಿಲ್ಲ, ಹೊಸತನದ ಕಥೆಗಳು ಸಿಕ್ಕಿಲ್ಲ, ನಾನು ಕಾದಂಬರಿ ಬರೆಯುವ ಕೆಲಸದಲ್ಲಿ ತೋಡಗಿಸಿಕೊಂಡಿರುವುದರಿಂದ ಆ ಕಡೆ ಹೆಚ್ಚಿನ ಗಮನ ನೀಡುತ್ತಿಲ್ಲ'' ಎಂದು ಹೇಳಿದ್ದಾರೆ.
ಹೀಗೆ ಸದ್ಯ ಅನಿರುದ್ಧ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಮುಂದಿನ ಯೋಜನೆಗಳ ಕುರಿತು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ. ಒಟ್ನಲ್ಲಿ ನಿರ್ದೇಶನ ಮಾಡುವ ಕನಸನ್ನು ಹೊಂದಿರುವ ಅನಿರುದ್ಧ್ ಆದಷ್ಟು ಬೇಗ ಚಿತ್ರ ನಿರ್ದೇಶನಕ್ಕೆ ಮುಂದಾಗಲಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ವಿಶೇಷವಾದ ಪ್ರಯೋಗಗಳನ್ನು ಮಾಡಲಿ ಎನ್ನುವುದೇ ನಮ್ಮ ಆಶಯ.


Click it and Unblock the Notifications











