ಮತ್ತೆ ಬೆಳ್ಳಿ ಪರದೆಯಲ್ಲಿ ಅನಿರುದ್ಧ್ ಅದೃಷ್ಟ ಪರೀಕ್ಷೆ: ವಿಷ್ಣು ಸ್ಮಾರಕದಲ್ಲಿ ಹೊಸ ಸಿನಿಮಾ ಶುರು
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಸಕ್ಸಸ್ ಕಂಡಿದ್ದರು. ಅದಕ್ಕು ಮುನ್ನ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ. ಆದರೆ ಇದ್ದಕ್ಕಿಂದಂತೆ 'ಜೊತೆ ಜೊತೆಯಲಿ' ಟೀಂ ಜೊತೆ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದರು. ಬಳಿಕ 'ಸೂರ್ಯವಂಶ' ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಮತ್ತೆ ಬೆಳ್ಳೆತೆರೆಗೆ ಅನಿರುದ್ಧ್ ವಾಪಸ್ ಆಗ್ತಿದ್ದಾರೆ.
ಇತ್ತೀಚೆಗೆ ವಿಜಯ್ ರಾಘವೇಂದ್ರ ನಟನೆಯ 'ರಾಘು' ಸಿನಿಮಾ ರಿಲೀಸ್ ಆಗಿತ್ತು. ಆ ಚಿತ್ರದ ನಿರ್ದೇಶಕ ಎಂ.ಆನಂದರಾಜ್ ಹೊಸ ಚಿತ್ರದಲ್ಲಿ ಅನಿರುದ್ಧ್ ಜತ್ಕರ್ ಹೀರೊ ಆಗಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಮೈಸೂರಿನ ಡಾ. ವಿಷ್ಣುವರ್ಧನ್ ಸ್ಮಾರಕದಲ್ಲಿ ಭಾರತಿ ವಿಷ್ಣುವರ್ಧನ್ ಚಾಲನೆ ನೀಡಿದರು. ಇದೊಂದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಆಗಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಸ್ಕ್ರಿಪ್ಟ್ ಪೂಜೆ ನಡೆದಿದ್ದು ದಾದಾ ಆಶಿರ್ವಾದ ಪಡೆದು ಅನಿರುದ್ಧ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಆಗಸ್ಟ್ 10ರಿಂದ ಇನ್ನು ಹೆಸರಿಡದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ದಮ್ತಿ ಪಿಕ್ಚರ್ಸ್ ಬ್ಯಾನರ್ನಲ್ಲಿ ರೂಪ ಡಿ. ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಇನ್ನು ಎಂ.ಆನಂದರಾಜ್ ಚಿತ್ರಕ್ಕೆ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆಯುತ್ತಿದ್ದಾರೆ. ಉಳಿದಂತೆ ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಚಿತ್ರದಲ್ಲಿ ಅನಿರುದ್ಧ್ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್- 2 ಖ್ಯಾತಿ ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೀಘ್ರದಲ್ಲೇ ಸಿನಿಮಾ ಟೈಟಲ್ ರಿವೀಲ್ ಆಗಲಿದೆ.

2001ರಲ್ಲಿ 'ಚಿಟ್ಟೆ' ಸಿನಿಮಾ ಮೂಲಕ ಅನಿರುದ್ಧ್ ಜತ್ಕರ್ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ಅನಿರುದ್ಧ್ ಮಾಡಿದ್ದ 'ಹಯವದನ' ನಾಟಕ ನೋಡಿ ವಿಷ್ಣುವರ್ಧನ್ ಮೆಚ್ಚಿಕೊಂಡಿದ್ದರು. ಅನಿರುದ್ಧ್ ನಟನೆಯನ್ನು ಶಂಕರ್ ನಾಗ್ ನಟನೆಗೆ ಹೋಲಿಸಿದ್ದರಂತೆ. ಬಳಿಕ ದಾದಾ ತಮ್ಮ ಮಗಳನ್ನು ಮದುವೆ ಆಗುವಂತೆ ಕೇಳಿದ್ದರಂತೆ. ಆಗಿನ್ನು 2ನೇ ಸಿನಿಮಾದಲ್ಲಿ ನಟಿಸೋಕೆ ಸಿದ್ಧವಾಗುತ್ತಿದ್ದರು. ಅದೇ ಸಮಯದಲ್ಲಿ ಅಂದರೆ 2002ರಲ್ಲಿ ಅನಿರುದ್ಧ್ ಹಾಗೂ ವಿಷ್ಣುವರ್ಧನ್ ಪುತ್ರಿ ಕೀರ್ತಿ ಮದುವೆ ಆಯಿತು.
'ಚಿತ್ರ', 'ತುಂಟಾಟ', 'ಜೇಷ್ಠ', 'ನೀನೆಲ್ಲೋ ನಾನಲ್ಲೆ', 'ಇಜ್ಜೋಡು', 'ರಾಜಸಿಂಹ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಅನಿರುದ್ಧ್ ಜತ್ಕರ್ ನಟಿಸಿದರು. ಮುಂಬೈನಲ್ಲಿ ಆರ್ಕಿಟೆಕ್ಚರ್ ಕಲಿತಿದ್ದ ವಿಷ್ಣುವರ್ಧನ್ ಅಳಿಯ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ನಾಟಕಗಳಲ್ಲಿ ನಟಿಸುತ್ತಿದ್ದರು. ಸಿನಿಮಾಗಳನ್ನು ದೊಡ್ಡ ಸಕ್ಸಸ್ ಸಿಗದೇ ಇದ್ದಾಗ ಕಿರುತೆರೆಗೆ ಎಂಟ್ರಿ ಕೊಟ್ಟರು. ಇನ್ನು ಭಾರತಿ ವಿಷ್ಣುವರ್ಧನ್ ಕುರಿತು 'ಬಾಳೆ ಬಂಗಾರ' ಡಾಕ್ಯುಮೆಂಟರಿ ಕೂಡ ನಿರ್ದೇಶನ ಮಾಡಿದ್ದರು.


Click it and Unblock the Notifications











