ಸಂಸದನ ಜೊತೆ ಚಿತ್ರ, ನೆಟ್ಟಿಗರಿಂದ ನೆಗೆಟಿವ್ ಕಮೆಂಟ್: ಸ್ಪಷ್ಟನೆ ಕೊಟ್ಟ ಅನಿರುದ್ಧ
ಒಂದು ಕಾಲದ ಬ್ಯುಸಿ ನಟ ಅನಿರುದ್ಧ ಕಳೆದು ಹೋಗಿದ್ದ ತಮ್ಮ ಚಾರ್ಮ್ ಅನ್ನು ಜೊತೆ-ಜೊತೆಯಲಿ ಧಾರಾವಾಹಿ ಮೂಲಕ ಮರಳಿ ಗಳಿಸಿಕೊಂಡಿದ್ದಾರೆ.
Recommended Video

ಹಿಂದೊಮ್ಮೆ ಸಿನಿಮಾಗಳ ಮೂಲಕ ಎಷ್ಟು ಖ್ಯಾತಿ ಗಳಿಸಿದ್ದರೊ ಅದಕ್ಕಿಂತಲೂ ಹೆಚ್ಚಿನ ಖ್ಯಾತಿ ಗಳಿಸಿದ್ದಾರೆ ಒಂದೇ ಧಾರಾವಾಹಿ ಮೂಲಕ. ತಮ್ಮ ನಟನೆಯಿಂದ ಮನೆಮಾತಾಗಿರುವ ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಸಕ್ರಿಯರಾಗಿದ್ದಾರೆ. ಅಭಿಮಾನಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ.
ಇತ್ತೀಚೆಗೆ ಯುವ ಸಂಸದರೊಬ್ಬರ ಜೊತೆಗೆ ಚರ್ಚಿಸುತ್ತಿರುವ ಕೆಲವು ಚಿತ್ರಗಳನ್ನು ನಟ ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಇದಕ್ಕೆ ಸಾಕಷ್ಟು ಋಣಾತ್ಮಕ ಪ್ರತಿಕ್ರಿಯೆಗಳು ನೆಟ್ಟಿಗರಿಂದ ವ್ಯಕ್ತವಾಯಿತು.

ತೇಜಸ್ವಿ ಸೂರ್ಯ ಅನ್ನು ಭೇಟಿಯಾದ ಅನಿರುದ್ಧ
ನಟ ಅನಿರುದ್ಧ ಅವರು, ಬಿಜೆಪಿ ಯುವ ಸಂಸದ ಹಾಗೂ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯ ಅವರೊಂದಿಗೆ ಚರ್ಚೆ ಮಾಡುತ್ತಿರುವ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬಂದಿವೆ
ಇದಕ್ಕೆ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬಂದಿದ್ದವು. ರಾಜಕಾರಣಿಗಳ ಸಹವಾಸ ಬೇಡವೆಂದು ಕೆಲವರು ಸಲಹೆ ನೀಡಿದ್ದರೆ, ಇನ್ನು ಕೆಲವರು ಅನಿರುದ್ಧ ಸಹ ಬಿಜೆಪಿ ಸೇರಲಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ತೇಜಸ್ವಿ ಸೂರ್ಯ ಕನ್ನಡಿಗರ ವಿರೋಧಿ ಎಂದು ಮೂದಲಿಸಿದ್ದರು.

'ಸ್ಮಾರಕದ ವಿಚಾರವಾಗಿ ಹಲವು ರಾಜಕಾರಣಿಗಳ ಭೇಟಿ ಮಾಡಿದ್ದೇನೆ'
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನಿರುದ್ಧ, ನಾನು ಅಪ್ಪಾವರ ಸ್ಮಾರಕದ ವಿಚಾರವಾಗಿ ಇದುವರೆಗೂ ಹಲವಾರು ರಾಜಕೀಯ ವ್ಯಕ್ತಿಗಳನ್ನ ಭೇಟಿ ಮಾಡಿದ್ದೇನೆ ಮುಂದೆ ಕೂಡ ಭೇಟಿ ಮಾಡಲೇ ಬೇಕು ಮತ್ತು ನಾನು ಭೇಟಿ ಮಾಡುತ್ತೇನೆ ಕೂಡಾ. ವಿಷಯ ಗೊತ್ತಿಲ್ಲದೆ ಕೆಲವರು ನಕಾರಾತ್ಮಕ ಸಂದೇಶಗಳನ್ನ ಬರೆದಿದ್ದಾರೆ, ಆದ್ರೆ ಎಷ್ಟೋ ಅಭಿಮಾನಿಗಳು ಅವುಗಳಿಗೆ ಸಕಾರಾತ್ಮಕ ಉತ್ತರಗಳನ್ನ, ಸಂದೇಶಗಳನ್ನ ಬರೆದಿದ್ದಿರ, ತಮ್ಮ ಪ್ರೀತಿಗೆ ನಾನು ಚಿರ ಋಣಿ ಎಂದಿದ್ದಾರೆ ಅನಿರುದ್ಧ.

ಭೇಟಿಯ ಕಾರಣ ಮುಂದೆ ತಿಳಿಯಲಿದೆ: ಅನಿರುದ್ಧ
ಮುಂದುವರೆದು, 'ನಾನು ಅವರನ್ನ (ತೇಜಸ್ವಿ ಸೂರ್ಯ) ಯಾಕೆ ಭೇಟಿ ಮಾಡಿದ್ದೇನೆ ಅದು ಕೆಲವು ದಿನಗಳ ನಂತರ ತಮ್ಮೆಲ್ಲರಿಗೂ ಗೊತ್ತಾಗುತ್ತೆ. ಸ್ಮಾರಕಕ್ಕೆ, ಅವರಿಗೆ ಏನು ಸಂಬಂಧ ಎಲ್ಲವೂ ಗೊತ್ತಾಗುತ್ತೆ. ಎಲ್ಲರು ಖುಷಿಯಾಗಿ ಇರಿ' ಎಂದಿದ್ದಾರೆ ಅನಿರುದ್ಧ.


Click it and Unblock the Notifications











