ಕಡಪ ದಿಕ್ಕಿನವರನ್ನು ನಂಬಬಾರದು ಎಂದು ಅಕಿರಾ ಅನೀಶ್ ಬಗ್ಗೆ ಟ್ರೋಲ್ ಯಾಕೆ?
ಒಂದೊಳ್ಳೆ ಗೆಲುವಿಗಾಗಿ ನಟ ಅನೀಶ್ ತೇಜೇಶ್ವರ್ ಕಾಯುತ್ತಿದ್ದಾರೆ. ಅವರು ನಟಿಸಿರುವ 'ಲವ್ ಓಟಿಪಿ' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ ಸಿನಿಮಾ ಬಿಡುಗಡೆ ಆಗ್ತಿದ್ದು ಭರ್ಜರಿ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ಕನ್ನಡ ಮಾಧ್ಯಮಗಳ ಸಂದರ್ಶನದಲ್ಲಿ ಮಾತ್ರವಲ್ಲ ತೆಲುಗು ಸಂದರ್ಶನಗಳಲ್ಲಿ ಕೂಡ ಅನೀಶ್ ಭಾಗವಹಿಸಿ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ತೆಲುಗು ಸಂದರ್ಶನವೊಂದರಲ್ಲಿ ಕನ್ನಡ ಭಾಷೆಯ ಬಗ್ಗೆ ಅವರ ಹೇಳಿಕೆ ಇದೀಗ ವೈರಲ್ ಆಗ್ತಿದೆ. ಈ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅನೀಶ್ ಹೇಳಿಕೆಯಲ್ಲಿ ತಪ್ಪೇನು ಇಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ತೆಲುಗಿನ ಸುಮನ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಇತ್ತೀಚೆಗೆ ಅನೀಶ್ ಭಾಗವಹಿಸಿದ್ದರು. ತಮ್ಮ 'ಲವ್ ಓಟಿಪಿ' ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಕೂಡ ಮಾತನಾಡಿದ್ದಾರೆ. ಇನ್ನು ಸ್ಪಷ್ಟವಾಗಿ ತೆಲುಗಿನಲ್ಲಿ ಮಾತನಾಡಿದ್ದು ನಿರೂಪಕಿ ಕೂಡ ಅಚ್ಚರಿಗೊಂಡಿದ್ದಾರೆ. ಈ ವೇಳೆ ಅನೀಶ್ ತಮ್ಮ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಅನೀಶ್ ಮಾತನಾಡಿ "ನಾವು ಮನೆಯಲ್ಲಿ ತೆಲುಗು ಭಾಷೆ ಮಾತನಾಡ್ತೀವಿ. ನಾವು ಮೂಲತಃ ತೆಲುಗಿನವರು ಬೆಂಗಳೂರಿನಲ್ಲಿ ನೆಲೆಸಿದ್ದೇವೆ. ನಮ್ಮ ಹಿನ್ನೆಲೆ ಸಂಪೂರ್ಣವಾಗಿ ಬೆಂಗಳೂರು. ನಮ್ಮ ತಂದೆ ಅವರದ್ದು ಕಡಪದ ಬಳಿ ಚಿಂತಾಮಣಿ. ಹಾಗಾಗಿ ನಮಗೆ ಎರಡು ಭಾಷೆ ಮಾತನಾಡಲು ಚೆನ್ನಾಗಿ ಬರುತ್ತೆ. ತಮಿಳು ಬರುತ್ತೆ. ಬೆಂಗಳೂರಿನಲ್ಲಿರುವವರು ಯಾವ ಭಾಷೆ ಬೇಕಾದ್ರೂ ಮಾತನಾಡ್ತೀವಿ" ಎಂದು ಹೇಳಿದ್ದಾರೆ.
ಅನೀಶ್ ಹೇಳಿಕೆ ವೀಡಿಯೋ ವೈರಲ್ ಮಾಡಿ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮನೆಯಲ್ಲಿ ತೆಲುಗು ಮಾತನಾಡ್ತಾರಂತೆ, ಬೆಂಗಳೂರಿನವರು ಯಾವ ಭಾಷೆ ಬೇಕಾದರೂ ಮಾತನಾಡ್ತಾರಂತೆ, ಕರ್ನಾಟಕದಲ್ಲಿ ಇದ್ದು ಹೀಗೆ ಹೇಳುವುದು ಎಷ್ಟು ಸರಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕಡಪ ದಿಕ್ಕಿನವರನ್ನು ನಂಬಬಾರದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಸಾಕಷ್ಟು ಜನ ಮನೆಯಲ್ಲಿ ತಮ್ಮ ಮಾತೃಭಾಷೆ ಮಾತನಾಡ್ತಾರೆ, ಬೆಂಗಳೂರಿನವರಿಗೆ ಬೇರೆ ಭಾಷೆಗಳು ಮಾತನಾಡಲು ಬರುತ್ತದೆ ಎನ್ನುವುದು ನಿಜ ಅಲ್ವಾ? ಇದಕ್ಕೆ ಯಾಕೆ ಅನೀಶ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ಕೆಲವರು ಬೆಂಬಲ ಸೂಚಿಸುತ್ತಿದ್ದಾರೆ. 15 ವರ್ಷಗಳ ಹಿಂದೆ 'ಪೊಲೀಸ್ ಕ್ವಾಟರ್ಸ್' ಸಿನಿಮಾ ಮೂಲಕ ಅನೀಶ್ ಚಿತ್ರರಮಗ ಪ್ರವೇಶಿಸಿದ್ದರು.
'ನಮ್ ಏರಿಯಾಲ್ ಒಂದಿನ', 'ಅಕಿರಾ', 'ವಾಸು ಪಕ್ಕಾ ಲೋಕಲ್', 'ರಾಮಾರ್ಜುನ', 'ಆರಾಮ್ ಅರವಿಂದ್ ಸ್ವಾಮಿ' ಹೀಗೆ ಹಲವು ಸಿನಿಮಾಗಳಲ್ಲಿ ಅನೀಶ್ ನಟಿಸಿದ್ದಾರೆ. ಆದರೆ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಆದರೂ ಪ್ರಯತ್ನ ಬಿಡದೇ ಒಳ್ಳೆ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ. 'ಲವ್ ಓಟಿಪಿ' ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
'ವಾಸು ಪಕ್ಕಾ ಲೋಕಲ್' ಚಿತ್ರದ ಮೂಲಕ ಅನೀಶ್ ನಿರ್ಮಾಪಕರು ಆಗಿದ್ದರು. 'ರಾಮಾರ್ಜುನ' ಚಿತ್ರಕ್ಕಾ ಡೈರೆಕ್ಟರ್ ಕ್ಯಾಪ್ ತೊಟ್ಟರೂ ಪ್ರಯೋಜನವಾಗಿರಲಿಲ್ಲ. ಇದೇ ವರ್ಷ ಬಂದಿದ್ದ 'ಫಾರೆಸ್ಟ್' ಚಿತ್ರದಲ್ಲಿ ನಟಿಸಿದ್ದರು. ಇದೀಗ 'ಲವ್ ಒಟಿಪಿ' ಸಿನಿಮಾ ಬಗ್ಗೆ ಬಹಳ ಭರವಸೆಯಿಂದ ಇದ್ದಾರೆ. ವಿಜಯ್ ಎಂ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರವನ್ನು ಕೂಡ ಅನೀಶ್ ನಿರ್ದೇಶನ ಮಾಡಿದ್ದಾರೆ.
ಅನೀಶ್ ಜೊತೆ ಜಾಹ್ನವಿ ಕಲಕೇರಿ, ಆರೋಹಿ ನಾರಾಯಣ್, ರಾಜೀವ್ ಕನಕಾಲ, ಪ್ರಮೋದಿನಿ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು ಈಗಾಗಲೇ ಹಾಡುಗಳು, ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.


Click it and Unblock the Notifications











