ನಮ್ಮ ಒಳ್ಳೆಯ ಕನ್ನಡ ಸಿನಿಮಾ ಉಳಿಸಿಕೊಡಿ: ಕೈಮುಗಿದ ನಟ, ನಿರ್ದೇಶಕ
'ರಾಮಾರ್ಜುನ' ಸಿನಿಮಾ ಕಳೆದ ವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು, ಜನ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಆದರೆ ಚಿತ್ರಮಂದಿರಗಳಲ್ಲಿ ಜನರಿಲ್ಲದಂತಾಗಿದೆ.
ಎರಡನೇ ವಾರಕ್ಕೆ ಚಿತ್ರಮಂದಿರದಲ್ಲಿ ಜನರು ಇಲ್ಲದಾಗಿದೆ. ಈ ಬಗ್ಗೆ 'ರಾಮಾರ್ಜುನ' ಸಿನಿಮಾದ ನಟ, ನಿರ್ದೇಶಕ ಅನೀಶ್ ತೇಜೇಶ್ವರ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಪ್ರೇಕ್ಷಕ ಪ್ರಭುಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ.
'ಸೂಪರ್ ಕಾಮಿಡಿ, ಅದ್ಭುತವಾದ ಫೈಟ್ಸ್, ಇಂಟರ್ವಲ್ ಶಾಕ್ ಅಂತೂ ಸೂಪರ್, ಕ್ಲೈಮ್ಯಾಕ್ಸ್ ನೆನಪಿರುತ್ತೆ' ಎಂಬೆಲ್ಲಾ ಒಳ್ಳೆಯ ಮಾತುಗಳನ್ನು ನಾನು ಈ ಸಿನಿಮಾಕ್ಕೆ ಕೇಳಿದೆ. ಇದೇ ಮೊದಲ ಬಾರಿಗೆ ಇಷ್ಟೊಳ್ಳೆ ಮಾತುಗಳನ್ನು ನಾನು ನನ್ನ ಸಿನಿಮಾಕ್ಕೆ ಕೇಳುತ್ತಿರುವುದು, ಆದರೆ ಎರಡನೇ ವಾರದಲ್ಲಿ ಜನರೇ ಇಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅನೀಶ್.

'ಕಾಡಿ-ಬೇಡಿ ಎರಡನೇ ವಾರಕ್ಕೆ ಉಳಿಸಿಕೊಂಡಿದ್ದೇನೆ'
'ಕಾಡಿ ಬೇಡಿ ನಮ್ಮ ಸಿನಿಮಾವನ್ನು ಎರಡನೇ ವಾರಕ್ಕೆ ಕೆಲವು ಚಿತ್ರಮಂದಿರಗಳಲ್ಲಿ ಉಳಿಸಿಕೊಂಡಿದ್ದೇನೆ. ದಯವಿಟ್ಟು ಒಂದೊಳ್ಳೆ ಸಿನಿಮಾವನ್ನು ಉಳಿಸಿಕೊಡಿ. ಮೊದಲ ವಾರ ಸಿನಿಮಾ ನೋಡಿದವರನ್ನು ಕೇಳಿಯೇ ಸಿನಿಮಾಕ್ಕೆ ಬನ್ನಿ ಪರವಾಗಿಲ್ಲ. ಆದರೆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಂದು ನೋಡಿ' ಎಂದು ಅನೀಶ್ ಮನವಿ ಮಾಡಿದ್ದಾರೆ.

ಇದು ನಮ್ಮ ಕೊನೆಯ ಪ್ರಯತ್ನ: ಅನೀಶ್
'ಈ ಬಾರಿ ಒಂದೊಳ್ಳೆ ಸಿನಿಮಾ ಮಾಡಿಯೂ ಸೋಲು ಅನುಭವಿಸುತ್ತಿದ್ದೇವಾ ಎಂಬ ಭಯ ಕಾಡುತ್ತಿದೆ. ಇದು ನಮ್ಮ ಕೊನೆಯ ಪ್ರಯತ್ನ. ಸಾಕಷ್ಟು ಶ್ರಮ ಪಟ್ಟು ಸಿನಿಮಾ ಮಾಡಿದ್ದೇವೆ. ನಮ್ಮನ್ನು, ಸಿನಿಮಾವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ' ಎಂದಿದ್ದಾರೆ ಅನೀಶ್.

ಮುಂದಿನ ವಾರ ನಮ್ಮ ಸಿನಿಮಾವನ್ನು ತೆಗೆದು ಬಿಡುತ್ತಾರೆ: ಅನೀಶ್
'ಈ ವಾರ ಬೇಡ, ಮುಂದಿನ ವಾರ ಹೋಗಿ ಸಿನಿಮಾ ನೋಡೋಣ ಎಂದುಕೊಳ್ಳದಿರಿ. ಮುಂದಿನ ವಾರದ ವೇಳೆಗೆ ನಮ್ಮ್ ಸಿನಿಮಾಗಳನ್ನು ತೆಗೆದು ಹಾಕಿಬಿಡುತ್ತಾರೆ, ದಯವಿಟ್ಟು ಈಗಲೇ ಬಂದು ಸಿನಿಮಾ ನೋಡಿ, ಒಂದೊಳ್ಳೆ ಸಿನಿಮಾವನ್ನು ಉಳಿಸಿಕೊಡಿ' ಎಂದಿದ್ದಾರೆ ಅನೀಶ್.
Recommended Video

ಜನವರಿ 29 ರಂದು ಬಿಡುಗಡೆ ಆದ ಸಿನಿಮಾ
'ರಾಮಾರ್ಜುನ' ಸಿನಿಮಾವು ಜನವರಿ 29 ಕ್ಕೆ ಬಿಡುಗಡೆ ಆಗಿದೆ. ಸಿನಿಮಾವನ್ನು ಅನೀಶ್ ನಿರ್ದೇಶಿಸಿ, ಅವರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು, ರಂಗಾಯಣ ರಘು, ಹರೀಶ್ ರಾಜ್, ಶರತ್ ಲೋಹಿತಾಶ್ವ ಇತರರು ಅಭಿನಯಿಸಿದ್ದಾರೆ. ಇನ್ಶುರೆನ್ಸ್ ಏಜೆಂಟ್ ಒಬ್ಬ ಹೇಗೆ ಕಾರ್ಪೊರೇಟ್ ದುಷ್ಟರ ಹುಟ್ಟಡಗಿಸುತ್ತಾನೆ ಎಂಬ ಕತೆ ಸಿನಿಮಾದಲ್ಲಿದೆ. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿಬಂದಿವೆ.


Click it and Unblock the Notifications











