ಸಂಧಾನದ ಮೂಲಕ ಬಗೆಹರಿದ 'ಅಂಜನಿಪುತ್ರ' ವಿವಾದ
ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಹಾಗೂ ವಕೀಲರ ನಡುವಿನ ವಿವಾದ ಸಂಧಾನದ ಮೂಲಕ ಬಗೆಹರಿದಿದೆ. ಚಿತ್ರದಲ್ಲಿ ವಕೀಲರಿಗೆ ಅವಮಾನ ಮಾಡುವ ರೀತಿಯಲ್ಲಿ ಸಂಭಾಷಣೆ ಬಳಸಲಾಗಿದೆ ಎಂದು ನಾರಾಯಣ ಸ್ವಾಮಿ ಅವರು ಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿತ್ತು.
ಇದೀಗ, ಚಿತ್ರತಂಡ ಮತ್ತು ವಕೀಲ ಮಧ್ಯೆ ಮಾತುಕತೆಯ ಮೂಲಕ ಸಂಧಾನ ಮಾಡಿಕೊಂಡಿದ್ದು, ವಕೀಲ ಸಮುದಾಯಕ್ಕೆ ಕ್ಷಮೆ ಕೇಳುವ ಮೂಲಕ ಈ ವಿವಾದಕ್ಕೆ ಅಂತ್ಯವಾಡಿದ್ದಾರೆ. ಈ ಬಗ್ಗೆ ನಿರ್ಮಾಪಕರು ನ್ಯಾಯಾಲಯಕ್ಕೆ ಪ್ರಮಾಣಪತ್ರ ಬರೆದಿದ್ದಾರೆ.

''ವಕೀಲರಿಗೆ ಅವಮಾನವಾಗಿದ್ದರೇ ದಯವಿಟ್ಟು ಕ್ಷಮಿಸಿ. ನಾವು ಯಾರಿಗೂ ನೋವು ಉಂಟು ಮಾಡುವ ದೃಷ್ಟಿಯಲ್ಲಿ ಡೈಲಾಗ್ ಬರೆದಿಲ್ಲ. ಸಿನಿಮಾಗೆ ಅವಶ್ಯಕತೆ ಇತ್ತು ಅಂತ ಸೇರಿಸಿದ್ದೀವಿ. ಇದರಿಂದ ನೋವಾಗಿದ್ದಲ್ಲಿ ಇಡೀ ವಕೀಲ ಸಮುದಾಯಕ್ಕೆ ಕ್ಷಮೆ ಕೋರುವುದಾಗಿ'' ನಿರ್ಮಾಪಕ ಎನ್ ಕುಮಾರ್ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ, ನ್ಯಾಯಾಲಯ ಕೂಡ ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದ್ದು, ಚಿತ್ರತಂಡಕ್ಕೆ 25 ಸಾವಿರ ದಂಡ ವಿಧಿಸಿದೆ. ಆ ಹಣವನ್ನ ವಕೀಲ ಸಂಘಕ್ಕೆ ಬಳಸುವಂತೆ ಆದೇಶಿಸಿದೆ. ಒಟ್ನಲ್ಲಿ, ಕಳೆದ ಒಂದು ವಾರದಿಂದ ಬಾರಿ ಸುದ್ದಿಯಾಗಿದ್ದ ಅಂಜನಿಪುತ್ರ'ನ ಸಮಸ್ಯೆ ಬಗೆಹರಿದಿದ್ದು, ಇನ್ಮುಂದೆ ಯಾವುದೇ ಅಡ್ಡಿಯಿಲ್ಲದೇ ಪ್ರದರ್ಶನವಾಗಲಿದೆ.


Click it and Unblock the Notifications











