ಕೋರ್ಟ್ ಆದೇಶಕ್ಕೆ ತಲೆಬಾಗಿದ 'ಅಂಜನಿಪುತ್ರ': ಡೈಲಾಗ್ ಗೆ ಬಿತ್ತು ಕತ್ತರಿ
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಚಿತ್ರದ ಪ್ರದರ್ಶನ ನಿಲ್ಲಿಸುವಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದ ನಂತರ ಚಿತ್ರತಂಡ ತಮ್ಮ ನಿಲುವವನ್ನ ಬದಲಿಸಿಕೊಂಡಿದೆ.
ದೂರುದಾರರ ಒತ್ತಾಯದಂತೆ ವಿವಾದಕ್ಕೆ ಕಾರಣವಾಗಿದ್ದ ಸಂಭಾಷಣೆಯನ್ನ ಚಿತ್ರದಿಂದ ತೆಗೆದುಹಾಕಿದೆ. ಈ ಮೂಲಕ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿದ 'ಅಂಜನಿಪುತ್ರ'ನ ಪ್ರದರ್ಶನ ಎಂದಿನಂತೆ ಸಾಗಿದೆ. ಯಾವುದೇ ಚಿತ್ರಮಂದಿರಗಳಲ್ಲಿಯೂ ಅಂಜನಿಪುತ್ರ ಪ್ರದರ್ಶನ ರದ್ದಾಗಿಲ್ಲ. ಕೋರ್ಟ್ ಆದೇಶ ನೀಡುತ್ತಿದ್ದಂತೆ, ಮನದಟ್ಟು ಮಾಡಿಕೊಂಡ ಚಿತ್ರತಂಡ ಡೈಲಾಗ್ ಗೆ ಕತ್ತರಿ ಹಾಕಿದೆ.

ವಿವಾದ ಹಿನ್ನೆಲೆ ಕಾರಣವೇನು?
''ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ" ಎಂದು ಇನ್ಸ್ ಪೆಕ್ಟರ್ ರವಿ ಶಂಕರ್, ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆ ವಕೀಲರಿಗೆ ಅವಮಾನ ಮಾಡುವ ರೀತಿಯಲ್ಲಿ ಇದೆ. ಹೀಗಾಗಿ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಸಂಭಾಷಣೆಯನ್ನ ತೆಗೆಯುವಂತೆ ವಕೀಲರಾದ ನಾರಾಯಣ ಸ್ವಾಮಿ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.
ಈ ಅರ್ಜಿಯನ್ನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2ನೇ ತಾರೀಖಿನವರೆಗೂ ಚಿತ್ರದ ಪ್ರದರ್ಶನ ರದ್ದು ಮಾಡಿ ಎಂದು ತಡೆಯಾಜ್ಞೆ ನೀಡಿತ್ತು. ಆದ್ರೆ, ಕೋರ್ಟ್ ಆದೇಶ ನಮ್ಮ ಕೈಗೆ ಸಿಕ್ಕಿಲ್ಲ ಎಂಬ ಕಾರಣ ನೀಡಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿತ್ತು. ಹೀಗಾಗಿ, ದೂರುದಾರರು ನ್ಯಾಯಾಂಗ ನಿಂದನೆಯಾಗಿದೆ ಎಂದು ಮತ್ತೆ ಅರ್ಜಿ ಸಲ್ಲಿಸಿ ಕೋರ್ಟ್ ಗಮನಕ್ಕೆ ತಂದಿದ್ದರು. ಇದರಿಂದ ನ್ಯಾಯಾಲಯ ಡಿಜಿಐಜಿಗೆ ಪ್ರದರ್ಶನ ನಿಲ್ಲಿಸುವಂತೆ ನೋಟಿಸ್ ನೀಡಿದೆ. ಇದೀಗ, ಚಿತ್ರತಂಡ ಈ ಡೈಲಾಗ್ ಗೆ ಕತ್ತರಿ ಹಾಕಿದೆ.


Click it and Unblock the Notifications











