ದರ್ಶನ್ ಸಹಾಯ ಬೇಡಿದ ಸ್ಮಶಾನದಲ್ಲಿ ಹೆಣ ಸುಡುವ ವ್ಯಕ್ತಿ
Recommended Video
ಕಷ್ಟ ಎಂದು ಮನೆ ಬಾಗಿಲಿಗೆ ಬಂದವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲ ಎನ್ನಲ್ಲ. ಅವರ ಸ್ಥಿತಿಗತಿ ವಿಚಾರಿಸಿ ಕೈಲಾದಷ್ಟು ನೆರವು ನೀಡ್ತಾರೆ. ಸ್ವತಃ ದರ್ಶನ್ ಅವರೇ ಹೇಳಿಕೊಂಡಿರುವ ಪ್ರಕಾರ ''ಪ್ರತಿನಿತ್ಯ ನಮ್ಮ ಮನೆಗೆ ನೂರಾರು ಜನ ಬರ್ತಾರೆ, ನನ್ನ ಸ್ವಂತ ದುಡ್ಡಿನಲ್ಲಿ ಒಂದಿಷ್ಟು ಅಂತ ಸಹಾಯ ಮಾಡ್ತೇನೆ'' ಎಂದು ತಿಳಿಸಿದ್ದರು.
ಇದೀಗ, ಸ್ಮಶಾನದಲ್ಲಿ ಹೆಣ ಸುಡುವ ವ್ಯಕ್ತಿಯೊಬ್ಬರ ನಟ ದರ್ಶನ್ ಅವರ ಸಹಾಯಕ್ಕೆ ಅಂಗಲಾಚಿದ್ದಾರೆ. ತಮ್ಮ ಮಕ್ಕಳನ್ನ ಓದಿಸಲು, ತಮ್ಮ ಸಂಸಾರ ಸಾಗಿಸಲು ಕಷ್ಟವಾಗುತ್ತಿದೆ, ನಾನು ಮಾಡುತ್ತಿರುವ ಕೆಲಸಕ್ಕೆ ಸಂಬಳವೂ ಸಿಗುತ್ತಿಲ್ಲ. ದಯವಿಟ್ಟು ನೆರವು ನೀಡಿ ಎಂದು ಆಂಥೋನಿಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ತನ್ನ ಮಗಳ ಕೈಯಿಂದ ಡಿ ಬಾಸ್ ಗೆ ಮನವಿ ಪತ್ರವೊಂದನ್ನ ಬರೆಸಿದ್ದಾರೆ. ಸಾಧ್ಯವಾದರೇ ತಾವೇ ಖುದ್ದು ಈ ಪತ್ರವನ್ನ ದರ್ಶನ್ ಅವರ ಮನೆಗೆ ಹೋಗಿ ನೀಡಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ, ಆಂಥೋನಿ ಸ್ವಾಮಿ ಬರೆದಿರುವ ಪತ್ರದಲ್ಲಿ ಏನಿದೆ? ಮುಂದೆ ಓದಿ.....

30 ವರ್ಷದಿಂದ ಈ ಕಾಯಕ
ಬೆಂಗಳೂರಿನ ಕಲ್ಲಳ್ಳಿ ಸ್ಮಶಾನದಲ್ಲಿ ಕಳೆದ 30 ವರ್ಷದಿಂದ ಆಂಥೋನಿಸ್ವಾಮಿ ಹೆಣ ಸುಡುವ ಕೆಲಸ ಮಾಡುತ್ತಿದ್ದಾರೆ. ಉಚಿತವಾಗಿ ಈ ಕಾಯಕ ಮಾಡುತ್ತಿದ್ದ ಬಿಬಿಎಂಪಿ ಕಡೆಯಿಂದ ತಿಂಗಳಿಗೆ ಒಂದು ಸಾವಿರ ಸಹಾಯ ಧನ ನೀಡುತ್ತಿದ್ದರು. ಆದ್ರೆ, ಕಳೆದ ಏಳು ವರ್ಷದಿಂದ ಈ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು, ಶಾಸಕರು, ಸಚಿವರು ಹೀಗೆ ಯಾರ ಬಳಿ ಹೋದರು ಪ್ರಯೋಜನವಾಗಿಲ್ಲ.

ದರ್ಶನ್ ಒಮ್ಮೆ ಮಾತನಾಡಿಸಿದ್ದರು
ಹೀಗೆ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಬಂದಿದ್ದ ನಟ ದರ್ಶನ್ ಒಮ್ಮೆ ಆಂಥೋನಿಸ್ವಾಮಿ ಅವರನ್ನ ಮಾತನಾಡಿಸಿದ್ದರಂತೆ. ಉಚಿತವಾಗಿ ಈ ಕೆಲಸ ಮಾಡುತ್ತಿದ್ದನ್ನ ತಿಳಿದು ಹಣ ನೀಡಿ ಹೋಗಿದ್ದರಂತೆ. ಈಗ ಸಂಬಳ ಸಿಗುತ್ತಿಲ್ಲ. ಸಂಸಾರ ಜವಾಬ್ದಾರಿ. ಮಕ್ಕಳ ವಿದ್ಯಾಭ್ಯಾಸ ಎಲ್ಲದರ ಸ್ಥಿತಿ ನೋಡಿ ದರ್ಶನ್ ಅವರನ್ನ ನೆನಪಿ ಮಾಡಿಕೊಂಡಿದ್ದಾರೆ.

ಸಹಾಯ ಬೇಡಿದ ಆಂಥೋನಿಸ್ವಾಮಿ
ಕಳೆದ ಮೂವತ್ತು ವರ್ಷದಿಂದ ಈ ಸ್ಮಶಾನದ ವಿದ್ಯುತ್ ಚಿತಗಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಹಾಗೆ ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ನಿಮ್ಮ ಅಪಾರ ಅಭಿಮಾನ. ಎಲ್ಲರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬಾಡಿಗೆ ಕಟ್ಟಲು ಹಾಗೂ ಕುಟುಂಬ ಸಾಗಿಸಲು ಕಷ್ಟವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸವೂ ಕಷ್ಟವಾಗಿದೆ. ನಿಮ್ಮ ಸಹಾಯ ಗುಣದಿಂದ ನಿಮ್ಮ ನೆರವು ಕೇಳುತ್ತಿದ್ದೇವೆ. ಇದರಿಂದ ಏನಾದರೂ ಸಹಾಯವಾಗುಬಹುದು ಎಂಬ ನಿರೀಕ್ಷೆ'' ಎಂದು ಕೇಳಿಕೊಂಡಿದ್ದಾರೆ.

ಸಹಾಯಹಸ್ತ ಚಾಚುತ್ತಾರಾ ದಾಸ?
ಕಷ್ಟ ಎಂದು ತಿಳಿದ ಕೂಡಲೇ ಸ್ನೇಹಿತರು, ಆಪ್ತರ ಮೂಲಕ ಸಹಾಯ ಮಾಡುವ ದರ್ಶನ್, ಈಗ ನೇರವಾಗಿ ನೆರವು ನೀಡಿ ಎಂದು ಅಂಗಲಾಚುತ್ತಿರುವ ಆಂಥೋನಿಸ್ವಾಮಿ ಅವರಿಗೆ ಅಭಯಹಸ್ತ ಚಾಚುತ್ತಾರಾ?


Click it and Unblock the Notifications











