'ಜೇಮ್ಸ್' ಪ್ರೀ ರಿಲೀಸ್ ಈವೆಂಟ್ನಲ್ಲಿ ಅಪ್ಪುನ ನೆನೆದು ಭಾವುಕರಾದ ಅನು ಪ್ರಭಾಕರ್ !
ಜೇಮ್ಸ್ ಸಿನಿಮಾ ರಿಲೀಸ್ಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಅಭಿಮಾನಿಗಳುಗಳು ಸಿನಿಮಾವನ್ನು ನೋಡಲು ಕಾತರರಾಗಿದ್ದಾರೆ. ಜೇಮ್ಸ್ ಸಿನಿಮಾ ಒಂದರ ಮೇಲೊಂದು ಎಂಬಂತೆ ದಾಖಲೆಗಳನ್ನು ಮಾಡುತ್ತಿದ್ದು, ಇದರ ಬೆನ್ನಲ್ಲೆ ಚಿತ್ರ ತಂಡ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಅನ್ನು ಇಂದು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಇಡೀ ರಾಜ್ ಕುಟುಂಬ, ಸಂಪೂರ್ಣ ಚಿತ್ರ ತಂಡ, ಹಾಗೂ ಅಭಿಮಾನಿಗಳು ಜಮಾಯಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಬ್ಬರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಅಪ್ಪು ಬಗ್ಗೆಗಿನ ಒಡನಾಟವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಅನು ಪ್ರಭಾಕರ್ ಕೂಡ ವೇದಿಕೆಗೆ ಬಂದು ಭಾವುಕರಾಗಿದ್ದು, ಭಾವನಾತ್ಮಕವಾಗೆ ಅಪ್ಪು ಬಗ್ಗೆ ಮತ್ತು ಸಿನಿಮಾದ ಬಗ್ಗೆ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪು ನಮ್ಮನ್ನು ಅಗಲಿರುವ ಬಗ್ಗೆ ನೋವಿನ ನುಡಿಗಳನ್ನು ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. "ವೇದಿಕೆ ಮೇಲೆ ನನಗೆ ಏನು ಮಾತನಾಡಬೇಕು ಗೊತ್ತಾಗುತ್ತಿಲ್ಲ. ಕಣ್ಣೀರನ್ನು ತಡೆದು ಮಾತನಾಡಲು ತುಂಬ ಕಷ್ಟ ಆಗುತ್ತಿದೆ. ನಾನು ಅಪ್ಪುವಿನ ದೊಡ್ಡ ಅಭಿಮಾನಿಯಾಗಿ ಈ ಕಾರ್ಯಕ್ರಮ ನೋಡಲು ತುಂಬ ನೋವಾಗುತ್ತಿದೆ. ಶಿವಣ್ಣ ಜೊತೆ 'ಹೃದಯ ಹೃದಯ' ಸಿನಿಮಾ ಮಾಡಿ 22ವರ್ಷ ಆದ ಮೇಲೆ ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ಅಭಿನಯಿಸೋಕೆ ಅವಕಾಶ ಸಿಕ್ತು. ಅಪ್ಪು ಜೊತೆ ಆಕ್ಟ್ ಮಾಡ್ದೆ ಅಂತ ಖುಷಿ ಪಡಬೇಕಾ, ಅಥವಾ ಅವರ ಕೊನೆ ಸಿನಿಮಾ ಅಂತ ಬೇಸರ ಪಡಬೇಕಾ ಗೊತ್ತಾಗ್ತಿಲ್ಲ. ಆದ್ರೂ ಈ ಸಿನಿಮಾ ತಂಡದವಳಾಗಿ ಚಿತ್ರವನ್ನು ಬೆಳ್ಳಿ ಪರದೆ ಮೇಲೆ ತರುತ್ತಿದ್ದೇವೆ. ಹಾಗೇ ಶಿವಣ್ಣ, ಅಶ್ವಿನಿ, ಈಡೀ ರಾಜ್ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಧೈರ್ಯ ಆ ದೇವರು ನೀಡಲಿ' ಎಂದು ಹೇಳಿ ಮಾತು ಮುಗಿಸಿದ್ದಾರೆ ಅನು ಪ್ರಭಾಕರ್.
ಇನ್ನು ಇದೇ ವೇದಿಕೆಯಲ್ಲಿ ಮಾತನಾಡಿದ ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ "ಅಪ್ಪು ನಟನೆಯ ಚಿತ್ರವನ್ನು ವಿಶ್ವದೆಲ್ಲೆಡೆ ಜನರು ಬೆಳ್ಳಿ ತೆರೆಯಲ್ಲಿ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಇದೇ ಕಾರಣದಿಂದ ಇಷ್ಟೊಂದು ಸ್ಕ್ರೀನ್ಗಳಲ್ಲಿ ಜೇಮ್ಸ್ ಪ್ರದರ್ಶನವಾಗುತ್ತಿದೆ. ದೃಶ್ಯಗಳಲ್ಲಿ ಪುನೀತ್ರನ್ನು ನೋಡುವಾಗ ಮನಸ್ಸು ಭಾರವಾಗುತ್ತದೆ.

ಅಪ್ಪು ಹೃದಯದಿಂದ ನಗುತ್ತಿದ್ದರು. ಅದು ಪ್ರತಿಯೊಬ್ಬರಿಗೆ ಕನೆಕ್ಟ್ ಆಗುತ್ತಿತ್ತು. ಅವರು ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೆ ನಗುತ್ತಲೇ ಇದ್ದರು, ಎಲ್ಲರನ್ನೂ ರಂಜಿಸುತ್ತಾ ಇದ್ದರು. ಆದರೆ ಜೇಮ್ಸ್ ಚಿತ್ರದ ಪ್ರಿ ರಿಲೀಸ್ ಈವೆಂಟ್ನಲ್ಲಿ ಅವರಿಲ್ಲ. ಪುನೀತ್ ಇಲ್ಲದೇ ಹೀಗೆ ಸಮಾರಂಭ ಮಾಡುವುದು ಬಹಳ ದುಃಖಕರ ವಿಚಾರ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೇಮ್ಸ್ ಕಾರ್ಯಕ್ರಮ ಇಂದು (ಮಾರ್ಚ್13)ರಂದು ಭಾನುವಾರ ಬೆಂಗಳೂರಿನ ಪ್ಯಾಲೇಸ್ಗ್ರೌಂಡ್ನಲ್ಲಿ ನಡೆಯುತ್ತಿದೆ. ರಾತ್ರಿ 7ಗಂಟೆಯಿಂದ ಈ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಜೇಮ್ಸ್ ಪ್ರೀ-ರಿಲೀಸ್ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಭಾಗವಹಿಸಿದ್ದು, ವಿಶೇಷ ಅತಿಥಿಯಾಗಿ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಜೊತೆ ದೊಡ್ಮನೆ ಬಳಗ ಸೇರಿದೆ. ಅಪ್ಪು ಅಭಿಮಾನಿಗಳಿಗಾಗಿಯೇ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರಿದ್ದಾರೆ.


Click it and Unblock the Notifications











