ಕನ್ನಡಿಗರನ್ನು ವಿನಮ್ರವಾಗಿ ಕ್ಷಮೆ ಕೇಳಿದ ಭಂಡಾರಿ ಸಹೋದರರು
Recommended Video

RJ Rapid ರಶ್ಮಿ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಫಿಲ್ಟರ್ ಇಲ್ಲದ ಶೋನಲ್ಲಿ ಮನಸ್ಸು ಹಾಗೂ ನಾಲಿಗೆ ಮಧ್ಯೆ ಫಿಲ್ಟರ್ ಇಲ್ಲದೆ ಮಾತನಾಡಿ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ಇದೀಗ ವಿವಾದಕ್ಕೆ ಗ್ರಾಸವಾಗಿದ್ದಾರೆ.
''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ....' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ RJ Rapid ರಶ್ಮಿ ಕೇಳಿದ ಪ್ರಶ್ನೆಗೆ ಉಪಾಯವಾಗಿ ಉತ್ತರ ಕೊಡುವುದು ಬಿಟ್ಟು ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು'' ಎಂದು ಅನೂಪ್ ಭಂಡಾರಿ, ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು'' ಅಂತ ನಿರೂಪ್ ಭಂಡಾರಿ ಕೊಟ್ಟ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ.
'ರಾಜರಥ' ಬಿಡುಗಡೆಗೂ ಮುನ್ನ ಚಿತ್ರೀಕರಣಗೊಂಡಿದ್ದ ಈ ಕಾರ್ಯಕ್ರಮದ ಸಣ್ಣ ತುಣುಕು ನಿನ್ನೆ ಇದ್ದಕ್ಕಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಅನೂಪ್ ಹಾಗೂ ನಿರೂಪ್ ವಿರುದ್ಧ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲವನ್ನ ಸೂಕ್ಷ್ಮವಾಗಿ ಗಮನಿಸಿದ ಮೇಲೆ, ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಅಕೌಂಟ್ ಮೂಲಕ ಎಲ್ಲರಿಗೂ ವಿನಮ್ರವಾಗಿ ಕ್ಷಮೆ ಕೇಳಿದ್ದಾರೆ. ಮುಂದೆ ಓದಿರಿ...

ಕ್ಷಮೆ ಕೇಳಿದ ಅನೂಪ್-ನಿರೂಪ್
''ರಾಜರಥ' ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗೂ ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯೂ ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೇ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ'' ಎಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸಹೋದರರಾದ ಅನೂಪ್ ಹಾಗೂ ನಿರೂಪ್ ಭಂಡಾರಿ ಬರೆದುಕೊಂಡಿದ್ದಾರೆ.

ನೋವುಂಟು ಮಾಡುವ ಉದ್ದೇಶ ಇರಲಿಲ್ಲ
''ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಪ್ರೇಕ್ಷಕರಿಗೆ ಬೈದಿದ್ದೀವಿ ಅನ್ನೋ ಒಂದು ಮಾತು ಕೇಳಿ ಬರುತ್ತಿದೆ. ಇದರಿಂದ ಯಾರಿಗೇ ಬೇಜಾರು ಆಗಿದ್ದರೂ ಕ್ಷಮೆ ಕೇಳುತ್ತೇನೆ. ನೋವುಂಟು ಮಾಡುವುದು ಖಂಡಿತ ನಮ್ಮ ಉದ್ದೇಶ ಆಗಿರಲಿಲ್ಲ'' ಎಂದು ವಿಡಿಯೋ ಮೂಲಕ ಕನ್ನಡ ಜನತೆಯ ಕ್ಷಮೆ ಕೇಳಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.

ಆ ಮಾತು ಆಡಿದ್ದು ತಪ್ಪು
''ಈ ಕಾರ್ಯಕ್ರಮ ರೆಕಾರ್ಡ್ ಆಗಿದ್ದು ರಿಲೀಸ್ ಗೂ ಮುನ್ನ. ವಿಡಿಯೋ ಕೂಡ ರಿಲೀಸ್ ಗೂ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. ಎಷ್ಟೇ ಚೆನ್ನಾಗಿದ್ದರೂ, ಕೆಲವರು ಕನ್ನಡ ಸಿನಿಮಾ ನೋಡುವುದಿಲ್ಲ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಪ್ರಶ್ನೆ ಬಂದಾಗ ಬೈಯ್ದು ಹೇಳಿದ್ದಲ್ಲ, ಸಿನಿಮಾದಲ್ಲಿ ಇರುವ ಡೈಲಾಗ್ ನ ಹೇಳಿದ್ದು ಅಷ್ಟೇ. ಈಗ ಅದು ತಪ್ಪು ಅಂತ ನಮಗೆ ಕಾಣಿಸುತ್ತಿದೆ'' - ಅನೂಪ್ ಭಂಡಾರಿ, ನಿರ್ದೇಶಕ
ಬಾಯಿ ತಪ್ಪಿ ಮಾತು ಬಂದಿದೆ
''ಯಾವುದೇ ಪ್ರೋಗ್ರಾಮ್ ಗೆ ಹೋದಾಗ... ತುಂಬಾ ಡೀಸೆಂಟ್ ಆಗಿ ಇರ್ತೀರಾ, ತಮಾಷೆ ಮಾಡಲ್ಲ, ಸೀರಿಯಸ್ ಆಗಿ ಇರ್ತೀರಾ ಅಂತ ತುಂಬಾ ಪ್ರೆಶರ್ ಮಾಡುತ್ತಿದ್ದರು. ಇದರಿಂದ ಎಲ್ಲೋ ಒಂದು ಕಡೆ ಬಾಯಿ ತಪ್ಪಿ ಮಾತು ಬಂದಿದೆ. ನಾವು ತಪ್ಪು ಹೇಳಿದ್ದೀವಿ. ದಯವಿಟ್ಟು ಕ್ಷಮಿಸಿ'' ಎಂದಿದ್ದಾರೆ ಅನೂಪ್ ಭಂಡಾರಿ.


Click it and Unblock the Notifications











