ಮತ್ತೆ ಜೊತೆಯಾದ ಕಿಚ್ಚ ಸುದೀಪ್- ಅನೂಪ್ ಭಂಡಾರಿ; ಆ ದಿನವೇ ಸಿಗಲಿದೆ ಬಿಗ್ ಸರ್ಪ್ರೈಸ್
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಸಿನಿಮಾ ರಿಲೀಸ್ ಡೇಟ್ ಮಾತ್ರ ರಿವೀಲ್ ಆಗಿಲ್ಲ. ಕಿಚ್ಚನ ಹುಟ್ಟುಹಬ್ಬಕ್ಕೆ 4 ದಿನಗಳು ಬಾಕಿಯಿದೆ. ಆ ವಿಶೇಷ ದಿನದಂದೇ 'ಮ್ಯಾಕ್ಸ್' ರಿಲೀಸ್ ಬಗ್ಗೆ ಅಪ್ಡೇಟ್ ಸಿಗಲಿದೆ.
ಇನ್ನು 'ಮ್ಯಾಕ್ಸ್' ಬಳಿಕ ಸುದೀಪ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆಯೂ ಕುತೂಹಲವಿದೆ. ಈಗಾಗಲೇ ಅನೂಪ್ ಭಂಡಾರಿ ಜೊತೆ 'ಬಿಲ್ಲ ರಂಗ ಬಾಷ' ಸಿನಿಮಾ ಘೋಷಣೆ ಆಗಿದೆ. ಮತ್ತೊಂದು ಕಡೆ ತಮಿಳು ನಿರ್ದೇಶಕ ಚೇರನ್ ನಿರ್ದೇಶನದಲ್ಲಿ ಸುದೀಪ್ ನಟಿಸಲಿದ್ದಾರೆ. ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ಚಿತ್ರೀಕರಣ ನಡೆಸುವ ಸಾಧ್ಯತೆಯಿದೆ.

ಎರಡೂ ಸಿನಿಮಾಗಳ ನಡುವೆ ಸುದೀಪ್ ಬಿಗ್ಬಾಸ್ ಕನ್ನಡ ಸೀಸನ್-11 ಶೋ ನಿರೂಪಣೆ ಮಾಡಬೇಕಿದೆ. ಬಹಳ ಹಿಂದೆಯೇ 'ಬಿಲ್ಲ ರಂಗ ಬಾಷ' ಸಿನಿಮಾ ಘೋಷಣೆ ಆಗಿತ್ತು. ಆದರೆ ಯಾವಾಗ ಶುರುವಾಗುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಈ ನಡುವೆ ಸುದೀಪ್- ಅನೂಪ್ ಸೇರಿ 'ವಿಕ್ರಾಂತ್ ರೋಣ' ಸಿನಿಮಾ ಮಾಡಿ ಗೆದ್ದರು. ಅಂತೂ ಇಂತೂ ಇದೀಗ ಆ ಚಿತ್ರವನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.
ಅನೂಪ್ ಭಂಡಾರಿ ಬಹಳ ದಿನಗಳಿಂದ 'ಬಿಲ್ಲ ರಂಗ ಬಾಷ' ಬಗ್ಗೆ ಕುತೂಹಲ ಮೂಡಿಸುತ್ತಾ ಬರ್ತಿದ್ದಾರೆ. ಟೈಟಲ್ನಿಂದಲೇ ಸಿನಿಮಾ ಗಮನ ಸೆಳೆದಿದೆ. ಇತ್ತೀಚೆಗೆ ಕಥೆ, ಚಿತ್ರಕಥೆ ಬರೆಯಲು ಅನೂಪ್ ಕೂತಿದ್ದರು. ಸದ್ಯ ಸ್ಕ್ರಿಪ್ಟ್ ಕೆಲಸಗಳು ಮುಕ್ತಾಯದ ಹಂತ ತಲುಪಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಆ ಬಗ್ಗೆ ಅಪ್ಡೇಟ್ ಕೊಡುವುದಾಗಿ ಅನೂಪ್ ಹೇಳಿದ್ದಾರೆ.
ಸಣ್ಣದೊಂದು ವೀಡಿಯೋ ಮಾಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಸಣ್ಣ ಅಪ್ಡೇಟ್ ಕೊಡ್ತೀನಿ ಎಂದು ಹೇಳಿದ್ದರು. ಮಾರ್ಚ್ನಲ್ಲೇ ಅಪ್ಡೇಟ್ ಕೊಡಬೇಕಿತ್ತು. ಸಾಧ್ಯವಾಗಲಿಲ್ಲ, ಕೆಲ ತಿಂಗಳ ಬಳಿಕ ಕೊಡ್ತೀದ್ದೀನಿ. 'ಬಾ ರಾಜಾ ಬಾ' ಎನ್ನುವ ಸಣ್ಣ ಹಾಡಿನ ತುಣುಕು ಕೇಳಿಸಿ ಕುತೂಹಲ ಮೂಡಿಸಿದ್ದರು. ಯಾರಪ್ಪಾ ಆ ರಾಜ ಎಂದು ಅಭಿಮಾನಿಗಳು ಕಾಯುವಂತಾಗಿತ್ತು. ಇದೀಗ ಸುದೀಪ್ ಜೊತೆ 'ಬಿಲ್ಲಾ ರಂಗ ಬಾಷ' ಸಿನಿಮಾ ಮಾಡ್ತಿದ್ದೀನಿ. ಸುದೀಪ್ ಸರ್ ಹುಟ್ಟುಹಬ್ಬದ ದಿನ (ಸೆಪ್ಟೆಂಬರ್ 2) ಬೆಳಗ್ಗೆ 10 ಗಂಟೆಗೆ ಭೇಟಿ ಆಗೋಣ ಎಂದು ತಿಳಿಸಿದ್ದಾರೆ.
'ರಂಗಿತರಂಗ' ಸಿನಿಮಾ ಬೆನ್ನಲ್ಲೇ ಸುದೀಪ್ ಕಾಂಬಿನೇಷನ್ನಲ್ಲಿ ಅನೂಪ್ ಭಂಡಾರಿ ಸಿನಿಮಾ ಮಾಡುತ್ತಾರೆ ಎನ್ನುವ ಗುಲ್ಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ 'ಬಿಲ್ಲ ರಂಗ ಬಾಷ' ಹಾಗೂ 'ಅಶ್ವತ್ಥಾಮ' ಸಿನಿಮಾಗಳನ್ನು ಈ ಜೋಡಿ ಘೋಷಿಸಿತ್ತು. ಆದರೆ ಎರಡೂ ಸಿನಿಮಾಗಳು ಶುರುವಾಗಲೇ ಇಲ್ಲ. ಸರ್ಪ್ರೈಸ್ ಎನ್ನುವಂತೆ 2 ವರ್ಷದ ಹಿಂದೆ 'ವಿಕ್ರಾಂತ್ ರೋಣ' ಸಿನಿಮಾ ಬಂದಿತ್ತು.
'ಬಿಲ್ಲ ರಂಗ ಬಾಷ' ಟೈಟಲ್ ಬಹಳ ಕುತೂಹಲ ಕೆರಳಿಸಿದೆ. ಸುದೀಪ್ ರೀತಿಯ ಮಾಸ್ ಹೀರೊಗೆ ಇಂತಾದೊಂದು ಟೈಟಲ್ ನಿಜಕ್ಕೂ ಸೂಕ್ತವಾಗಿದೆ. ಇನ್ನು ಟೈಟಲ್ ಕೇಳಿದ ಮೇಲೆ ಸಿನಿಮಾ ಯಾವ ಜಾನರ್? ಕಿಚ್ಚನ ಪಾತ್ರ ಏನು? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಹೋದಲ್ಲಿ ಬಂದಲ್ಲಿ ಸಿನಿಮಾ ಅಪ್ಡೇಟ್ ಕೇಳುತ್ತಿದ್ದರು. ಅಂತೂ ಇಂತೂ ಅಪ್ಡೇಟ್ ಕೊಡುವುದಾಗಿ ನಿರ್ದೇಶಕರು ಹೇಳಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಕಳೆದ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್ ನಟನೆಯ ನಾಲ್ಕೈದು ಸಿನಿಮಾ ಘೋಷಣೆ ಆಗಿತ್ತು. ಅದರಲ್ಲಿ ಆರ್. ಚಂದ್ರು ನಿರ್ದೇಶನದ ಸಿನಿಮಾ ಜೊತೆಗೆ ಸ್ವತಃ ಸುದೀಪ್ ನಿರ್ದೇಶನದಲ್ಲಿ ಒಂದು ಸಿನಿಮಾ ಬರುವುದಾಗಿ ಹೇಳಿದ್ದರು. ಆದರೆ ಯಾಕೋ ತಡವಾಗುತ್ತಿದೆ. ಯಾವಾಗ ಆ ಸಿನಿಮಾಗಳೆಲ್ಲಾ ಸೆಟ್ಟೇರುತ್ತದೆ ಎಂದು ಕಾದು ನೋಡಬೇಕು.


Click it and Unblock the Notifications











