ಸದ್ದಿಲ್ಲದೇ ಸ್ಕ್ರಿಪ್ಟ್ ಪೂಜೆ.. 'ಬಿಲ್ಲ ರಂಗ ಬಾಷ'ನಾ, 'ಅಶ್ವತ್ಥಾಮ'ನಾ? ಅನೂಪ್ ಹೇಳಿದ್ದಿಷ್ಟು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಡುವೆ ಕೆಸಿಸಿ ಸೀಸನ್-4 ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಈಗಾಗಲೇ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಈ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿ ತಮ್ಮದೇ ನಿರ್ದೇಶನದಲ್ಲಿ ಸಿನಿಮಾ ಘೋಷಿಸಿದ್ದಾರೆ. ಇನ್ನು ಆರ್. ಚಂದ್ರು ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ನಲ್ಲಿ ಎರಡ್ಮೂರು ಸಿನಿಮಾಗಳು ಘೋಷಣೆ ಆಗಿತ್ತು. ಕೊನೆಗೆ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಅದಕ್ಕೂ ಮುನ್ನ 'ಬಿಲ್ಲ ರಂಗ ಬಾಷ' ಹಾಗೂ 'ಅಶ್ವತ್ಥಾಮ' ಸಿನಿಮಾ ಘೋಷಿಸಿ ಕುತೂಹಲ ಮೂಡಿಸಿದ್ದರು. ಕಾರಣಾಂತರಗಳಿಂದ ಆ ಎರಡು ಸಿನಿಮಾಗಳು ತಡವಾಗುತ್ತಿದೆ. 'ವಿಕ್ರಾಂತ್ ರೋಣ' ಬಳಿಕ ಕೂಡ ಕಿಚ್ಚನಿಗಾಗಿ ಅನೂಪ್ ಕತೆ ಬರೆಯುತ್ತಲೇ ಇದ್ದಾರೆ. ಸದ್ದಿಲ್ಲದೇ ಜೆಪಿ ನಗರದ ದೇವಸ್ಥಾನವೊಂದರಲ್ಲಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ. ಮನೆಯಲ್ಲೂ ಪೂಜೆ ಸಲ್ಲಿಸಿದ್ದಾರೆ.

'ರಂಗಿತರಂಗ' ಸಿನಿಮಾ ಮೂಲಕ ಮೊದಲ ಪ್ರಯತ್ನದಲ್ಲೇ ಅನೂಪ್ ಭಂಡಾರಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಬಳಿಕ ಬಂದ 'ರಾಜರಥ' ಸಿನಿಮಾ ಗೆಲ್ಲಲಿಲ್ಲ. ಎರಡೂ ಚಿತ್ರದಲ್ಲಿ ಸಹೋದರ ನಿರೂಪ್ ಭಂಡಾರಿ ಹೀರೊ ಆಗಿ ಮಿಂಚಿದ್ದರು. 4 ವರ್ಷಗಳ ಬಳಿಕ 'ವಿಕ್ರಾಂತ್ ರೋಣ' ಸಿನಿಮಾ ಬಂದಿತ್ತು. ಇಲ್ಲೂ ನಿರೂಪ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
'ಬಿಲ್ಲ ರಂಗ ಬಾಷ' ಹಾಗೂ 'ಅಶ್ವತ್ಥಾಮ' ಸಿನಿಮಾಗಳು ಟೈಟಲ್ನಿಂದಲೇ ಬಹಳ ಕುತೂಹಲ ಮೂಡಿಸಿವೆ. 'ಅಶ್ವತ್ಥಾಮ' ಚಿತ್ರದಲ್ಲಿ ಮಹಾಭಾರತದ ವೀರ ಇನ್ನು ಚಿರಂಜೀವಿಯಾಗಿಯೇ ಇದ್ದಾನೆ ಎನ್ನಲಾಗುವ ಅಶ್ವತ್ಥಾಮನ ಕತೆ ಹೇಳುವುದಾಗಿ ಹೇಳಿದ್ದರು. ಅದನ್ನು ಕೇಳಿಯೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಸುದೀಪ್ ಕೂಡ ಎರಡೂ ಸಿನಿಮಾಗಳ ಒನ್ಲೈನ್ ಕೇಳಿ ಸಿನಿಮಾ ಮಾಡಲು ಉತ್ಸುಕರಾಗಿದ್ದರು.
ಕೋವಿಡ್ ಲಾಕ್ಡೌನ್ ನಡುವೆಯೇ 'ವಿಕ್ರಾಂತ್ ರೋಣ' ಸಿನಿಮಾ ಮಾಡಲಾಗಿತ್ತು. ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ ಭಾರೀ ಸೆಟ್ ಹಾಕಿ ಬಹುತೇಕ ಚಿತ್ರೀಕರಣ ನಡೆಸಲಾಗಿತ್ತು. ಇದೀಗ ಕೋವಿಡ್ ಸಂಕಷ್ಟ ಕಳೆದು ಜೀವನ ಸಹಜ ಸ್ಥಿತಿಗೆ ಮರಳಿದೆ. ಚಿತ್ರರಂಗ ಕೂಡ ಕೋವಿಡ್ ಪೆಟ್ಟಿನಿಂದ ಚೇತರಿಸಿಕೊಳ್ಳುತ್ತಿದೆ. ಹಾಗಾಗಿ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣ ಆರಂಭವಾಗಿದೆ.

ಅನೂಪ್ ಭಂಡಾರಿ ಇದೀಗ 'ಬಿಲ್ಲ ರಂಗ ಬಾಷ' ಅಥವಾ 'ಅಶ್ವತ್ಥಾಮ' ಸಿನಿಮಾ ಕೈಗೆತ್ತಿಕೊಳ್ಳುತ್ತಾರಾ? ಎನ್ನುವ ಕುತೂಹಲ ಮೂಡಿದೆ. ಸ್ಕ್ರಿಪ್ಟ್ ಪೂಜೆ ಬಗ್ಗೆ ಅನೂಪ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. "ಹೌದು ಸರಳವಾಗಿ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಯಾವ ಸಿನಿಮಾ? ಯಾವಾಗ ಶುರುವಾಗುತ್ತದೆ? ಅನ್ನೋದನ್ನು ಶೀಘ್ರದಲ್ಲೇ ಹೇಳ್ತೀವಿ. ಸುದೀಪ್ ಸರ್ಗಾಗಿ ಮಾಡಿರೋ ಸ್ಕ್ರಿಪ್ಟ್ ಇದು. ಮುಂದಿನ ವರ್ಷವೇ ಚಿತ್ರೀಕರಣ ಆರಂಭವಾಗುತ್ತದೆ. ನಾವೇ ಅಧಿಕೃತವಾಗಿ ಸಿನಿಮಾ ಘೋಷಿಸುತ್ತೇವೆ" ಎಂದಿದ್ದಾರೆ.
ಅಭಿಮಾನಿಗಳಂತೂ ಸುದೀಪ್, ಅನೂಪ್ ಕ್ರೇಜಿ ಕಾಂಬಿನೇಷನ್ನಲ್ಲಿ ಹೊಸ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಘೋಷಿಸಿರುವ 2 ಸಿನಿಮಾಗಳಲ್ಲಿ ಯಾವುದಾದರೂ ಒಂದನ್ನು ಕೈಗೆತ್ತಿಕೊಂಡರೆ ಚೆನ್ನಾಗಿರುತ್ತದೆ ಎನ್ನುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯಾವ ಸಿನಿಮಾ ಅನ್ನು ಸಸ್ಪೆನ್ಸ್ ಸದ್ಯಕ್ಕೆ ರಿವೀಲ್ ಆಗುವ ಸುಳಿವು ಸಿಗುತ್ತಿಲ್ಲ. 'ಮ್ಯಾಕ್ಸ್' ಸಿನಿಮಾ, ಬಿಗ್ಬಾಸ್ ಶೂಟಿಂಗ್ ನಡುವೆ ಸುದೀಪ್ ಬ್ಯುಸಿಯಾಗಿದ್ದು ಅನೂಪ್ ನಿರ್ದೇಶನದ ಸಿನಿಮಾ ಯಾವಾಗ ಸೆಟ್ಟೇರುತ್ತೋ ಕಾದು ನೋಡಬೇಕಿದೆ.


Click it and Unblock the Notifications











